ಸಿರುಗುಪ್ಪ: ತಾಲೂಕಿನ ಗಚ್ಚಿನ ಕಾಲುವೆ, ಬಾಗೇವಾಡಿ ಕ್ಯಾಂಪ್ ಹಾಗೂ ಬಸವಣ್ಣ ಕ್ಯಾಂಪ್ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಸೂಕ್ತ ಬಸ್ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿರುಗುಪ್ಪ ಡಿಪೋ ವ್ಯವಸ್ಥಾಪಕ ನೀಲಪ್ಪಗೆ ಸ್ಥಳೀಯ ನಿವಾಸಿಗಳು ಮತ್ತು ಪೋಷಕರು ಮನವಿ ಪತ್ರ ಸಲ್ಲಿಸಿದ್ದರು.
ಹಚ್ಚೋಳ್ಳಿ ಮಾರ್ಗವಾಗಿ ಸಂಚರಿಸುವ ಬಸ್ಸುಗಳು ಈ ಕ್ಯಾಂಪ್ಗಳಲ್ಲಿ ನಿಲ್ಲದೆ ತೆರಳುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಬೆಳಗ್ಗೆ 8 ಗಂಟೆಗೆ ಗಚ್ಚಿನ ಕಾಲುವೆ, ಬಾಗೇವಾಡಿ ಕ್ಯಾಂಪ್ ಮತ್ತು ಬಸವಣ್ಣ ಕ್ಯಾಂಪ್ಗೆ ಬಂದು ಹೋಗುವಂತೆ ಬಸ್ ವ್ಯವಸ್ಥೆ ಮಾಡಬೇಕು. ಸಂಜೆ 5:30ಕ್ಕೆ ಸಿರುಗುಪ್ಪ ನಗರದಿಂದ ಹೊರಟು ಈ ಗ್ರಾಮ ತಲುಪುವಂತೆ ಬಸ್ ಬಿಡಬೇಕು. ಹಚ್ಚೋಳ್ಳಿ ಮಾರ್ಗವಾಗಿ ಓಡಾಡುವ ಎಲ್ಲ ಬಸ್ಸು ಗಚ್ಚಿನ ಕಾಲುವೆ ಹತ್ತಿರ ಕಡ್ಡಾಯವಾಗಿ ನಿಲ್ಲಿಸುವಂತೆ ಚಾಲಕ, ನಿರ್ವಾಹಕರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ವಿನಂತಿಸಿದರು.