ಶಿಗ್ಗಾಂವಿ: ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹಾಗೂ ಪತ್ತೆ ಹಚ್ಚುವುದು, ಸಮಾಜದಲ್ಲಿ ನಿರ್ಭಯ ವಾತಾವರಣ ಸೃಷ್ಟಿಸುವುದು ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಡಿವೈಎಸ್ಪಿ ಗುರುಶಾಂತಪ್ಪ ಬಿ. ತಿಳಿಸಿದರು.ಪಟ್ಟಣದ ಅಂಬೇಡ್ಕರ ಸಂಕೀರ್ಣ ಸಭಾಂಗಣದಲ್ಲಿ ಮನೆ ಮನೆಗೆ ಪೊಲೀಸ್ ಸೇವೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಸಾರ್ವಜನಿಕರ ಬೆಂಬಲ ಮತ್ತು ಸಹಭಾಗಿತ್ವದಿಂದ ಮಾತ್ರವೇ ಉತ್ತಮ ಸೇವೆ ನೀಡಲು ಸಾಧ್ಯ. ಆ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಮನೆ ಮನೆಗೂ ಭೇಟಿ ನೀಡಿ ಸಾರ್ವಜನಿಕರ ದೂರು ಆಲಿಸಿ, ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಕಲ್ಪಿಸಲು ಪ್ರಯತ್ನಿಸಲಿದ್ದಾರೆ. ಅಂಜಿಕೆ ಇಲ್ಲದೆ ಮುಕ್ತ ಮನಸ್ಸಿನೊಂದಿಗೆ ಸಮಸ್ಯೆಗಳನ್ನು ಪೊಲೀಸರೊಂದಿಗೆ ಹಂಚಿಕೊಳ್ಳಿ ಎಂದರು.ಸಿಪಿಐ ಸತ್ಯಪ್ಪ ಮಾಳಗೊಂಡ ಮಾತನಾಡಿ, ಕಾರ್ಯಕ್ರಮದ ಸ್ವರೂಪವು ಪ್ರತಿ ಸಬ್ ಬೀಟ್ಗಳಲ್ಲಿ ೪೦ರಿಂದ ೫೦ ಮನೆಗಳ ಕ್ಲಸ್ಟರ್ ಸಮೂಹ ರಚಿಸಿ ಒಬ್ಬಪೊಲೀಸ್ ಸಿಬ್ಬಂದಿಯನ್ನು ನೇಮಿಸಿ ಉಸ್ತುವಾರಿಗೆ ಎಎಸ್ಐ ಮತ್ತು ಪಿಎಸ್ಐ ಇರುತ್ತಾರೆ. ಪ್ರತಿ ಮನೆಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು, ಸಮಸ್ಯೆ, ಸಲಹೆಗಳನ್ನು ಕ್ರೋಡಿಕರಿಸಿ ರಿಜಿಸ್ಟರ್ನಲ್ಲಿ ನಮೂದು ಮಾಡಿ ತಕ್ಷಣವೇ ಬಗೆಹರಿಸಲು ಕಾನೂನು ಪ್ರಕಾರ ಪ್ರಯತ್ನ ಮಾಡುವುದು ಹಾಗೂ ಸಾರ್ವಜನಿಕರಿಂದ ಪ್ರತಿಕ್ರಿಯೆ ಪಡೆಯಲಾಗುತ್ತದೆ ಎಂದರು.ಗ್ರಾಮೀಣ ಪಿಎಸ್ಐ ಅನೀಲ ರಾಠೋಡ ಮಾತನಾಡಿ, ಮಹಿಳಾ ಪೊಲೀಸ್ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಮುಕ್ತವಾಗಿ ಮಹಿಳೆಯರ ಸಮಸ್ಯೆಯನ್ನು ಬೀಟ್ಗಳಲ್ಲೇ ಆಲಿಸಲಿದ್ದಾರೆ. ಮಹಿಳೆ ಮತ್ತು ಮಕ್ಕಳ ಸುರಕ್ಷತೆಯನ್ನು ಖಾತ್ರಿಪಡಿಸಿ ಸುರಕ್ಷಿತ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಣೆ ಮಾಡಲಾಗುತ್ತದೆ ಎಂದರು.
೧೧೨ಗೆ ಕರೆ ಮಾಡಿ ನಿಮ್ಮ ದೂರು, ಸಮಸ್ಯೆಗಳಿಗೆ ನೇರವಾಗಿ ಸಂಪರ್ಕಿಸಲು ತುರ್ತು ಪರಿಸ್ಥಿತಿ ಇದ್ದಲ್ಲಿ ೧೧೨ಕ್ಕೆ ಕರೆ ಮಾಡಿ ಹಾಗೂ ಯಾವುದೇ ಸೈಬರ್ ಕೈಂಗಳಿಗೆ ೧೯೩೦ಕ್ಕೆ ಕರೆ ಮಾಡಬಹುದು. ಈ ಸಹಾಯವಾಣಿ ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತವೆ.