ಚನ್ನರಾಯಪಟ್ಟಣ: ಗಂಧದ ಮರಗಳನ್ನು ಕಳ್ಳತನ ಮಾಡಿದ ಇಬ್ಬರು ಆರೋಪಿಗಳಿಗೆ ತಲಾ ೫೦ ಸಾವಿರ ದಂಡ ಹಾಗೂ ೫ ವರ್ಷ ೬ ತಿಂಗಳು ಜೈಲು ಶಿಕ್ಷೆಯಾಗಿದೆ.
ತಾಲೂಕಿನ ಎ. ಕಾಳೇನಹಳ್ಳಿ ಗ್ರಾಮದ ಶಿವು (೨೩), ಬಿನ್ ಚಲುವರಾಜು ಮತ್ತು ಕೆ. ಆರ್. ಪೇಟೆ ತಾಲೂಕಿನ ರವಿ (೪೦), ಬಿನ್ ಗಂಗಯ್ಯ ಆರೋಪಿಗಳಾಗಿದ್ದು, ದಿನಾಂಕ: ೨೮-೦೮-೨೦೨೧ ರ ರಾತ್ರಿ ೧೧.೦೦ ಗಂಟೆ ಸಮಯದಲ್ಲಿ ಪಿರ್ಯಾದುದಾರರು ಸ.ನಂ.೭೬ ರ ಪ್ರದೇಶದಲ್ಲಿ ಗಸ್ತು ಕಾರ್ಯದಲ್ಲಿದ್ದಾಗ, ಇಬ್ಬರು ಆಸಾಮಿಗಳು ತಮ್ಮ ಮೊಬೈಲ್ ಟಾರ್ಚ್ನ ಬೆಳಕಿನಲ್ಲಿ ಸಾಮಿಲ್ ಬ್ಲೇಡ್ಗಳ ಸಹಾಯದಿಂದ ೦೭ ಶ್ರೀಗಂಧದ ಮರಗಳನ್ನು ಕತ್ತರಿಸಲು ಪ್ರಯತ್ನಿಸಿರುವ ಅಂಶಗಳು ಪಲ್ಲವಿ ಜೆ. ಎಂ. ರವರ ತನಿಖೆಯಿಂದ ದೃಢಪಟ್ಟ ಮೇರೆಗೆ ಅರಣ್ಯ ಕಾಯ್ದೆ ಕಲಂ ೨೪(ಸಿ) ಮತ್ತು ೮೬ ರಡಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ ಚನ್ನರಾಯಪಟ್ಟಣದ ೪ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಗದೀಶ ವಿ. ಎನ್. ರವರು ಆರೋಪಿತರ ಮೇಲಿರುವ ದೋಷಾರೋಪಣೆಗಳಾದ ಅರಣ್ಯ ಕಾಯ್ದೆ ಕಲಂ ೨೪(ಸಿ) ಮತ್ತು ೮೬ ರಡಿ ಆರೋಪಗಳು ಸಾಬೀತಾಗಿವೆ ಎಂದು ತೀರ್ಮಾನಿಸಿ ದಂಡದ ಜೊತೆಗೆ ಶಿಕ್ಷೆ ವಿಧಿಸಿರುತ್ತಾರೆ.
ಪ್ರಕರಣದ ೧ ಮತ್ತು ೨ನೇ ಆರೋಪಿತರು ಎಸಗಿದ ಅರಣ್ಯ ಕಾಯ್ದೆ ಕಲಂ ೨೪(ಸಿ) (೮೬) ರ ಅಪರಾಧಕ್ಕೆ ಆರು ತಿಂಗಳ ಕಾಲ ಸಾದಾ ಕಾರಾವಾಸದ ಶಿಕ್ಷೆ, ಅರಣ್ಯ ಕಾಯ್ದೆ ಕಲಂ ೮೬ಕ್ಕೆ ಐದು ವರ್ಷಗಳ ಕಾಲ ಸಾದಾ ಕಾರಾವಾಸದ ಶಿಕ್ಷೆ ಮತ್ತು ರು.೫೦,೦೦೦/- ದಂಡ, ದಂಡ ಪಾವತಿಸಲು ತಪ್ಪಿದಲ್ಲಿ ಒಂದು ವರ್ಷ ಕಾಲ ಸಾದಾ ಕಾರಾವಾಸದ ಶಿಕ್ಷೆ ವಿಧಿಸಿ, ದಂಡದ ಮೊತ್ತ ರು.೧,೦೦,೦೦೦/- ದಂಡ ವಿಧಿಸಿ, ನ್ಯಾಯಾಲಯವು ತೀರ್ಪು ನೀಡಿ ಆದೇಶಿಸಿರುತ್ತದೆ.ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಸಿ.ಡಿ.ಶ್ರೀನಿವಾಸ ಇವರು ಸಾಕ್ಷಿದಾರರ ವಿಚಾರಣೆ ನಡೆಸಿ ಪ್ರಕರಣದ ವಾದ ಮಂಡಿಸಿದ್ದರು.