ಪುತ್ತೂರು ವಿದ್ಯಾರ್ಥಿ ಹಿತರಕ್ಷಣಾ ಸಮಿತಿ ಪ್ರತಿಭಟನೆ

KannadaprabhaNewsNetwork |  
Published : Jul 28, 2026, 02:45 AM IST
ಫೋಟೋ: ೨೫ಪಿಟಿಆರ್-ಪ್ರೊಟೆಸ್ಟ್ ೧ ಮತ್ತು ೨೫ಪಿಟಿಆರ್-ಪ್ರೊಟೆಸ್ಟ್ ೨ನೀಟ್ ಹಗರಣವನ್ನು ವಿರೋಧಿಸಿ ಪುತ್ತೂರು ವಿದ್ಯಾರ್ಥಿ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ ನಡೆಯಿತು. | Kannada Prabha

ಸಾರಾಂಶ

ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ೨೧ ವಿದ್ಯಾರ್ಥಿಗಳ ಆತ್ಮಹತ್ಯೆ, ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ವಿರೋಧಿಸಿ ಪುತ್ತೂರು ವಿದ್ಯಾರ್ಥಿ ಹಿತರಕ್ಷಣಾ ಸಮಿತಿ ವತಿಯಿಂದ ಶನಿವಾರ ಪುತ್ತೂರು ಅಮರ್ ಜವಾನ್ ಸ್ಮಾರಕ ಬಳಿ ಪ್ರತಿಭಟನೆ ನಡೆಯಿತು.

ಪುತ್ತೂರು: ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ೨೧ ವಿದ್ಯಾರ್ಥಿಗಳ ಆತ್ಮಹತ್ಯೆ, ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ವಿರೋಧಿಸಿ ಪುತ್ತೂರು ವಿದ್ಯಾರ್ಥಿ ಹಿತರಕ್ಷಣಾ ಸಮಿತಿ ವತಿಯಿಂದ ಶನಿವಾರ ಪುತ್ತೂರು ಅಮರ್ ಜವಾನ್ ಸ್ಮಾರಕ ಬಳಿ ಪ್ರತಿಭಟನೆ ನಡೆಯಿತು. ಪುತ್ತೂರು ಗಾಂಧಿಕಟ್ಟೆ ಬಳಿ ಸಿಐಟಿಯು ಮುಖಂಡ ಬಿ.ಎಂ. ಭಟ್ ಅವರು ಗಾಂಧಿ ಪುತ್ಥಳಿಗೆ ಹಾರಾರ್ಪಣೆ ಮಾಡಿ ಜಾಥಾಕ್ಕೆ ಚಾಲನೆ ನೀಡಿದರು. ಅಲ್ಲಿಂದ ಮಿನಿ ವಿಧಾನ ಸೌಧದ ತನಕ ವಿದ್ಯಾರ್ಥಿಗಳ ಜಾಥಾ ನಡೆಯಿತು.

ಪ್ರತಿಭಟನೆಯಲ್ಲಿ ಸಾಮಾಜಿಕ ಹೋರಾಟಗಾರ ರಾಘವೇಂದ್ರ ಹಾಲ್ಕೆರೆ ಅವರು ಮಾತನಾಡಿ, ನೀಟ್ ಹಗರಣ ೨೧ ಮಕ್ಕಳನ್ನು ಬಲಿ ಪಡೆದುಕೊಂಡಿದೆ. ಬಸವಣ್ಣ ಬುದ್ಧ ಗಾಂಧಿ ಆಶಯಗಳನ್ನು ಮುಂದಿಟ್ಟುಕೊಂಡು ನಮ್ಮ ಧ್ವನಿಯನ್ನು ದೆಹಲಿಗೆ ಮುಟ್ಟಿಸಬೇಕು. ಅನ್ಯಾಯವಾದರೂ ಮೌನವಾಗಿರುವುದು ಪ್ರಭುತ್ವದ ಸಂಕೇತ. ಆದರೆ ಇಲ್ಲಿ ಪ್ರಜಾಪ್ರಭುತ್ವದ ಕೊಲೆಯಾಗುತ್ತಿದೆ. ಇದನ್ನು ತಡೆಯಬೇಕಾದರೆ ವಿದ್ಯಾರ್ಥಿ ಸಮುದಾಯ ಶಾಂತಿಯುತವಾಗಿ ಸಿಡಿದೇಳಬೇಕು. ಹೊಸ ಸಮಾಜ ಕಟ್ಟುವ ಕಾಯಕಕ್ಕೆ ಮುಂದಡಿ ಇಡಬೇಕು ಎಂದರು.ಸಿಐಟಿಯು ಮುಖಂಡ ಬಿ.ಎಂ. ಭಟ್ ಮಾತನಾಡಿ, ಬಿ.ಸಿ. ರೋಡಿನಲ್ಲಿ ಯುವತಿಯನ್ನು ಹತ್ಯೆ ಮಾಡಿದ ಆರೋಪಿಗೂ ಕೇಂದ್ರದ ಶಿಕ್ಷಣ ಸಚಿವರಿಗೂ ಯಾವುದೇ ವ್ಯತ್ಯಾಸ ಇಲ್ಲ. ಮೋದಿ ಆಳ್ವಿಕೆಯಲ್ಲಿ ನಿರಂತರ ದೌರ್ಜನ್ಯ ನಡೆಯುತ್ತಲೇ ಇದೆ. ರೈತರ ಮೇಲೆ ಗೋಲಿಬಾರ್, ವಿದ್ಯಾರ್ಥಿಗಳಿಗೆ ಲಾಠಿ ಏಟು. ಪ್ರಶ್ನಿಸಿದವರನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ.ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸದಿದ್ದರೆ ಇಡೀ ವಿದ್ಯಾರ್ಥಿ ಸಮುದಾಯವೇ ಎದ್ದು ನಿಲ್ಲಲಿದೆ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಮುಖಂಡ ಸೂತ್ರಬೆಟ್ಟು ಜಗನ್ನಾಥ ರೈ ಮಾತನಾಡಿ, ಇದೀಗ ವಿದ್ಯಾರ್ಥಿಗಳು ಮಾಡುತ್ತಿರುವ ಹೋರಾಟ ನ್ಯಾಯಬದ್ದವಾಗಿದೆ. ನಿಮ್ಮ ಹೋರಾಟ ನಿಲ್ಲಬಾರದು. ಈ ಸಮಸ್ಯೆಗೊಂದು ತಾರ್ಕಿಕ ಅಂತ್ಯ ಸಿಗುವ ತನಕ ಹೋರಾಡಬೇಕು ಎಂದರು. ಜೈನುದ್ದೀನ್ ಕೆಂಪಿ ಮಾತನಾಡಿದರು.

ವಿದ್ಯಾರ್ಥಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ರಾಮಚಂದ್ರ ಅಮಳ, ಸಿಐಟಿಯು ಮುಖಂಡ ಪಿ.ಕೆ. ಸತೀಶನ್, ನಗರಸಭೆ ನಿಕಟಪೂರ್ವ ಸದಸ್ಯ ರಿಯಾಜ್ ಪರ್ಲಡ್ಕ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಝೇವಿಯರ್ ಡಿಸೋಜ, ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಮೌರೀಸ್ ಮಸ್ಕರೇನಸ್, ಉಲ್ಲಾಸ್ ಕೋಟ್ಯಾನ್, ಶೇಷಪ್ಪ ನೆಕ್ಕಿಲು ಮತ್ತಿತರರು ಭಾಗವಹಿಸಿದ್ದರು. ವಿದ್ಯಾರ್ಥಿ ಹಿತರಕ್ಷಣಾ ಸಮಿತಿ ಸಂಚಾಲಕ ಭಾತೀಶ್ ಅಳಕೆಮಜಲು ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಲನಚಿತ್ರ ಪ್ರಶಸ್ತಿ ಪುರಸ್ಕೃತರಿಗೆ ರೋಹನ್‌ ಕಾರ್ಪೋರೇಷನ್‌ ಸನ್ಮಾನ
ವಿದ್ಯಾಸಂಸ್ಥೆ ಬೆಳವಣಿಗೆಗೆ ಎಲ್ಲರ ಸಹಭಾಗಿತ್ವ ಅಗತ್ಯ: ಸೀತಾರಾಮ ರೈ