ಕನ್ನಡಪ್ರಭ ವಾರ್ತೆ ಹುಳಿಯಾರು
ಸರ್ಕಾರಿ ಶಾಲೆಗಳಿ ಗೆ ಮೆರಿಟ್ ಆಧಾರದಲ್ಲಿ ಶಿಕ್ಷಕರನ್ನು ಆಯ್ಕೆ ಮಾಡುವುದರಿಂದ ಖಾಸಗಿ ಶಾಲೆಗಳಿಗಿಂತ ಗುಣಮಟ್ಟದ, ಗುಣಾತ್ಮಕ ಶಿಕ್ಷಣ ಸರ್ಕಾರಿ ಶಾಲೆಗಳಲ್ಲಿ ಲಭ್ಯ ಆದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ಕಿವಿ ಮಾತು ಹೇಳಿದರು.ಹುಳಿಯಾರು ಸಮೀಪದ ಹೊಯ್ಸಳಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನ ಶಾಲಾ ಕೊಠಡಿ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ಸರ್ಕಾರದ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆಂದು ತಿಳಿಸಿದರು.ನಂತರ ಹೊಯ್ಸಳಕಟ್ಟೆ ಭಾಗದ ಅಭಿವೃದ್ಧಿ ಕಾರ್ಯ ಕ್ರಮದ ಬಗ್ಗೆ ಮಾತನಾಡಿ ಹೊಯ್ಸಳಕಟ್ಟೆ ಗೆ ಪೋಲಿಸ್ ಉಪಠಾಣೆ, ಬುಕ್ಕಾಪಟ್ಟಣಕ್ಕೆ ಪೊಲೀಸ್ ಠಾಣೆ ಮಂಜುರಾತಿಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಹುಳಿಯಾರಿಗೆ ಅಗ್ನಿ ಶಾಮಕ ಠಾಣೆ ಮಂಜುರಾಗಿದೆ, ಬಡಕೆಗುಡ್ಲು-ಹೊಯ್ಸಳಕಟ್ಟೆ ರಸ್ತೆ ಅಭಿವೃದ್ಧಿ ಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಈ ಭಾಗದಲ್ಲಿ ಫ್ಲೋರೈಡ್ ಅಂಶ ಹೆಚ್ಚಿರುವುದರಿಂದ ಅಧ್ಯಕ್ಷರ ಜೋತೆ ಚರ್ಚಿಸಿ ಅಗತ್ಯ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ನೂತನ ಹಾಲಿನ ಡೈರಿ ಕಟ್ಟಡಕ್ಕೆ ಈ ವರ್ಷ 4 ಲಕ್ಷ ಅನುದಾನ ಹಾಗೂ ಮುಂದಿನ ವರ್ಷ ಇನ್ನು ಹೆಚ್ಚು ಅನುದಾನ ನೀಡಲಾಗುವುದು. ತಾಲೂಕಿನ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ 53 ಕೋಟಿ ಮಂಜುರಾಗಿದೆ ಎಲ್ಲಾ ಶಾಲೆಗಳ ಮೂಲಭೂತ ಸಮಸ್ಯೆ ಗಳನ್ನು ದೂರಮಾಡಿ ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ಸೃಷ್ಟಿಸಬಹುದು ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ಕಾಂತರಾಜು ಮಾತನಾಡಿ ಸಮಾಜದಲ್ಲಿ ಮೀಸಲಾತಿ ಯಿಂದ ಎಲ್ಲವನ್ನು ಬದಲಾಯಿಸಲು ಸಾಧ್ಯವಿಲ್ಲ, ಆದರೆ ಶಿಕ್ಷಣದಿಂದ ಎಲ್ಲವನ್ನು ಬದಲಾಯಿಸಬಹುದು ಆದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಡಿ ಎಂದು ಮನವಿ ಮಾಡಿದರು. 13.95 ಲಕ್ಷ ವೆಚ್ಚದಲ್ಲಿ ಶಾಸಕರೆ ಶಂಕುಸ್ಥಾಪನೆ ಮಾಡಿದ ಕಾಮಗಾರಿ ಒಂದು ವರ್ಷದೊಳಗೆ ಮುಗಿಸಿ ಮಕ್ಕಳ ಕಲಿಕೆಗೆ ಶಾಸಕರಿಂದಲೇ ಉದ್ಘಾಟನೆಯಾಗುತ್ತಿರುವುದು ಸಂತಸ ತಂದಿದೆ ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರ ಜಿಲ್ಲಾಧ್ಯಕ್ಷ ಆರ್.ಪರಶಿವಮೂರ್ತಿ ಮಾತನಾಡಿ ಶಾಲೆಯ ಅಭಿವೃದ್ಧಿಗೆ ಎಸ್ಡಿಎಂಸಿ ಪೂರಕವಾಗಿ ಸ್ಪಂದಿಸಿದೆ. ಶಾಲೆಯ ಅಭಿವೃದ್ಧಿ ವಿಚಾರದಲ್ಲಿ ಶಾಸಕರು ತಮ್ಮ ಬೇಡಿಕೆಗೆ ಸ್ಪಂದಿಸಿ ಅನುದಾನ ನೀಡಿದ್ದಾರೆ ಅವರಿಗೆ ಅಭಿನಂದನೆಗಳು ಎಂದು ಹರ್ಷ ವ್ಯಕ್ತ ಪಡಿಸಿದರು.
ಗ್ರಾಪಂ ಅಧ್ಯಕ್ಷೆ ರಾಧರಾಜು, ಎಸ್ಡಿಎಂಸಿ ಅಧ್ಯಕ್ಷೆ ಶಶಿಕಲಾ, ಮುಖಂಡರಾದ ದಬಗುಂಟ್ಟೆ ರವಿಕುಮಾರ್, ಜಯಲಿಂಗರಾಜ್, ಗೋಪಿನಾಥ್, ಅಜ್ಜಪ್ಪ, ಗವಿರಂಗಯ್ಯ, ಟಿ.ಜಿ.ಪ್ರಕಾಶ್, ವೆಂಕಟರಾಮ್, ಸತ್ಯವತಿ ಭೋಜಪ್ಪ, ಗಿರೀಶ್, ಕೆ.ಶಿವಕುಮಾರ್, ಎಚ್,ಎಂ.ಸುರೇಶ್,ಎಚ್.ರಂಗಪ್ಪ, ಯುವರಾಜ್,ಶಿವಕುಮಾರ್, ಶಿಕ್ಷಕರಾದ ರೇಣುಕಾ , ಮೋಹನ್ ಕುಮಾರ್, ಚೇತನ, ಲೀಲಾಮಣಿ, ನರಸಿಂಹ ಮೂರ್ತಿ, ಹೇಮವತಿ, ಧನಲಕ್ಷಿ ಉಪಸ್ಥಿತರಿದ್ದರು.