
ಕನ್ನಡಪ್ರಭ ವಾರ್ತೆ ಮಂಗಳೂರು
ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಹೀಗಾಗಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಈಗಾಗಲೇ ಹಲವು ಮಂದಿ ಫ್ಲ್ಯಾಟ್ಫಾರಂನಲ್ಲಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಹೊಸದಾಗಿ ನಿರ್ಮಾಣವಾದ ಫ್ಲ್ಯಾಟ್ಫಾರಂಗಳಲ್ಲಿ ಶೆಲ್ಟರ್ ಇಲ್ಲ. ಹಳೆ ಫ್ಲ್ಯಾಟ್ಫಾರಂನ್ನೂ ಮಳೆ ನೀರು ತೋಯಿಸುತ್ತದೆ. ಇದರಿಂದಾಗಿ ಮಳೆ ನೀರು ನಿಂತು ಪಾಚಿ ಆವರಿಸಿಕೊಂಡಿದೆ. ಇದು ರೈಲು ಹತ್ತಿ ಇಳಿಯುವವರು ಜಾರಿಬೀಳಲು ಕಾರಣವಾಗಿದೆ.
ಈ ತೊಂದರೆ ಕುರಿತು ಪುತ್ತೂರಿನ ರೈಲು ಪ್ರಯಾಣಿಕರು ಸಾರ್ವಜನಿಕರ ಗಮನಕ್ಕೆ ತಂದಿದ್ದರು. ರೈಲ್ವೆ ಹೋರಾಟಗಾರ ಜಿ.ಕೆ. ಭಟ್ ಎಂಬವರು ಸೋಮವಾರ ಸ್ಥಳಕ್ಕೆ ತೆರಳಿ ಪರಿಸ್ಥಿತಿಯ ಗಂಭೀರತೆಯನ್ನು ಕಂಡುಕೊಂಡರು. ಅಲ್ಲಿಂದಲೇ ಫೋಟೋ ಹಾಗೂ ವಿಡಿಯೋವನ್ನು ರೈಲ್ವೆ ಫಾಲ್ಘಾಟ್ ವಿಭಾಗದ ಅಧಿಕಾರಿಗಳಿಗೆ ವಾಟ್ಸ್ಆ್ಯಪ್ ಮೂಲಕ ಕಳುಹಿಸಿದ್ದರು. ಈ ದೂರಿಗೆ ಎರಡೇ ಗಂಟೆಯಲ್ಲಿ ಸ್ಪಂದಿಸಿದ ಫಾಲ್ಘಾಟ್ ವಿಭಾಗೀಯ ಅಧಿಕಾರಿಗಳು, ಕೂಡಲೇ ಫ್ಲ್ಯಾಟ್ಫಾರಂಗಳಿಗೆ ಬ್ಲೀಚಿಂಗ್ ಪೌಡರ್ ಸಿಂಪರಣೆಗೆ ಸೂಚಿಸಿದ್ದರು. ತಕ್ಷಣವೇ ರೈಲ್ವೆ ಕಾರ್ಮಿಕರು ಬ್ಲೀಚಿಂಗ್ ಪೌಡರ್ ಸಿಂಪರಣೆಗೆ ಕ್ರಮ ಕೈಗೊಂಡಿದ್ದಾರೆ. ವಿಭಾಗೀಯ ಅಧಿಕಾರಿಗಳ ತ್ವರಿತ ಸ್ಪಂದನಕ್ಕೆ ರೈಲ್ವೆ ಹೋರಾಟಗಾರರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.