ಕನ್ನಡಪ್ರಭ ವಾರ್ತೆ ಪಾಂಡವಪುರ
ಹಿಂದಿನ ಉಪಾಧ್ಯಕ್ಷೆ ಅನಿತ ಎ.ಬಿ.ಅವರನ್ನು ಎಲ್ಲಾ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿ ಉಪಾಧ್ಯಕ್ಷೆ ಸ್ಥಾನದಿಂದ ಕೆಳಗಿಳಿಸಿದ್ದರಿಂದ ತೆರವಾದ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆದು ರಾಧ ಸೋಮರಾಜು ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಉಪಾಧ್ಯಕ್ಷೆರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಯೂ ಆದ ಹೇಮಾವತಿ ನೀರಾವರಿ ನಿಗಮದ ಎಇಇ ಪುಟ್ಟಮಾಯಿಗೌಡ ಘೋಷಿಸಿದರು.
ನೂತನ ಉಪಾಧ್ಯಕ್ಷೆ ರಾಧ ಸೋಮರಾಜು ಆಯ್ಕೆಯಾಗುತ್ತಿದ್ದಂತೆ ಜೆಡಿಎಸ್ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿಹಂಚಿ ಸಂಭ್ರಮಿಸಿದರು. ಎಲ್ಲಾ ಸದಸ್ಯರು, ಮುಖಂಡರು, ಬೆಂಬಲಿಗರು ನೂತನ ಉಪಾಧ್ಯಕ್ಷೆಯನ್ನು ಅಭಿನಂದಿಸಿದರು.ಜೆಡಿಎಸ್ ಮುಖಂಡ ಎಂ.ಎನ್.ಶಿವಣ್ಣ ಮಾತನಾಡಿ, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು ಅವರ ಸೂಚನೆಯಂತೆ ಉಪಾಧ್ಯಕ್ಷೆ ಸ್ಥಾನ ಸ್ಪರ್ಧಿಸಿದ್ದ ರಾಧ ಸೋಮರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.