ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ರಾಹುಲ್ ಗಾಂಧಿ ಪ್ರತಿ ಹಂತದಲ್ಲಿ ಪ್ರಧಾನಿ ನರೇಂದ್ರಮೋದಿ ಆಡಳಿತದ ಪಾರದರ್ಶಕತೆ ಪ್ರಶ್ನಿಸುವ ಮೊದಲು ಕಾಂಗ್ರೆಸ್ನಲ್ಲಿ ನಡೆದಿರುವ ಹಗರಣಗಳ ಬಗ್ಗೆ ಉತ್ತರ ನೀಡಲಿ ಎಂದು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಆಗ್ರಹಿಸಿದರು.ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನಮೋಹನ್ ಸಿಂಗ್ ದೇಶದ ಪ್ರಧಾನಿಯಾಗಿದ್ದಾಗ ಹದಿಮೂರು ಲಕ್ಷ ಕೋಟಿ ರು. ಹಗರಣವಾಗಿದೆ. ಟುಜಿ ಸ್ಟೆಕ್ಟ್ರಂ, ಕಲ್ಲಿದ್ದಲು, ಹಾಗೂ ಹೆಲಿಕ್ಟಾಪರ್ ಹಗರಣಕ್ಕೆ ಯಾರು ಹೊಣೆ? ಚುನಾವಣಾ ಬಾಂಡ್ಗಳ ಮೂಲಕ ಬಿಜೆಪಿ ಕೋಟಿಗಟ್ಟಲೆ ಹಣ ಸಂಗ್ರಹಿಸುತ್ತಿದೆ ಎಂದು ಆಪಾದನೆ ಮಾಡುತ್ತಿರುವ ರಾಹುಲ್ಗಾಂಧಿಗೆ ನರೇಂದ್ರಮೋದಿರವರ ಪ್ರಾಮಾಣಿಕ ಆಡಳಿತ ಪ್ರಶ್ನಿಸುವ ಅಧಿಕಾರವಿಲ್ಲ. ಚುನಾವಣಾ ಬಾಂಡ್ಗಳ ಮೂಲಕ ಬಿಜೆಪಿಗೆ ಶೇ.37 ರಷ್ಟು ಹಣ ಬಂದಿದ್ದರೆ. ಬೇರೆ ಪಕ್ಷಗಳಿಗೆ ಶೇ.67 ರಷ್ಟು ಹಣ ಸಂಗ್ರಹವಾಗಿದೆ ಎಂದರು.
ರಾಜ್ಯದಲ್ಲಿ 692 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರಿಗೆ ಅನ್ಯಾಯ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಬಿಜೆಪಿ ಅಧಿಕಾರದಲ್ಲಿದ್ದಾಗ ರೈತರಿಗೆ ನೀಡುತ್ತಿದ್ದ ನಾಲ್ಕು ಸಾವಿರ ರು. ಏಕೆ ನಿಲ್ಲಿಸಿದೆ. ಎಸ್ಸಿ-ಎಸ್ಟಿ, ಓಬಿಸಿ ಮಕ್ಕಳ ಸ್ಕಾಲರ್ ಶಿಪ್ ರದ್ದುಪಡಿಸಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುವವರ ವಿರುದ್ದ ಇದುವರೆವಿಗೂ ಕ್ರಮ ಕೈಗೊಳ್ಳಲು ಆಗದ ಕಾಂಗ್ರೆಸ್ಗೆ ನಿಜವಾಗಿಯೂ ನಾಚಿಕೆಯಾಗಬೇಕು ಎಂದರು.ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಾಂಗ್ರೆಸ್ ಅರವತ್ತು ಪರ್ಸೆಂಟ್ ಕಮೀಷನ್ ಸರ್ಕಾರ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ. ಸಂಘದ ಆರೋಪವ ಸಿಎಂ ಸಿದ್ದರಾಮಯ್ಯ ನಿರಾಕರಿಸುವ ಉಸಾಬರಿಗೆ ಹೋಗಿಲ್ಲ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನೆರೆ ಬಂದ ಸಂದರ್ಭದಲ್ಲಿ ಕೇಂದ್ರದ ನೆರವನ್ನು ಎದುರು ನೋಡದೆ ಎನ್.ಡಿಆರ್ ಎಫ್ ನಿಯಮ ಮೀರಿ ಒಂದೊಂದು ಮನೆಗೆ ಐದು ಲಕ್ಷ ರು.ಗಳನ್ನು ಕೊಟ್ಟರು. ಕಾಂಗ್ರೆಸ್ ಸರ್ಕಾರದಲ್ಲಿ ಒಂದು ಕಿಮೀ ರಸ್ತೆಯೂ ಆಗಿಲ್ಲ. ಗುಂಡಿ ಬಿದ್ದ ರಸ್ತೆಗೆ ಮುಣ್ಣು ಹಾಕಿ ಮುಚ್ಚಿಲ್ಲ. ಭ್ರಷ್ಠಾಚಾರ, ಗೂಂಡಾಗಿರಿ ಮಿತಿ ಮೀರಿದೆ. ಕುಡಿಯುವ ನೀರಿಗೆ ಹಾಹಾಕಾರವಿದೆ. ಜನವಿರೋಧಿ ಕಾಂಗ್ರೆಸ್ ಸರ್ಕಾರದ ಬಗ್ಗೆ ರಾಹುಲ್ಗಾಂಧಿ ಏಕೆ ಮಾತನಾಡುತ್ತಿಲ್ಲ. ಪ್ರಧಾನಿ ನರೇಂದ್ರಮೋದಿರವರು ಪ್ರತಿ ಮನೆಗಳ ಮೇಲೆ ಸೋಲಾರ್ ಪ್ಲಾಂಟ್ಗಳನ್ನು ಅಳವಡಿಸುವ ಚಿಂತನೆಯಲ್ಲಿದ್ದಾರೆ. ಸಾವಯವ ಕೃಷಿಗೆ ಒತ್ತು ನೀಡಲಾಗುವುದೆಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ನಗರಾಧ್ಯಕ್ಷ ನವೀನ್ ಚಾಲುಕ್ಯ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್ಬೇದ್ರೆ, ಯಶವಂತ್, ನಗರ ಕಾರ್ಯದರ್ಶಿ ಶಂಭು, ತಿಪ್ಪೇಸ್ವಾಮಿ ಚಲವಾದಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.