ಕಂಡಕ್ಟರ್‌ ಮಗಳಿಗೆ 5, ಕುರಿಗಾಯಿ ಮಗನಿಗೆ 3 ಚಿನ್ನದ ಪದಕ

KannadaprabhaNewsNetwork |  
Published : Mar 01, 2024, 02:19 AM IST
29ಕೆಪಿಆರ್‌ಸಿಆರ್‌01: | Kannada Prabha

ಸಾರಾಂಶ

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವದಲ್ಲಿ ಕರಡಿ ಬಸವ, ದಿವ್ಯಾ ಹಾಗೂ ಶೋಭಾ ಆರ್‌.ದಾನಗೋಂಡ್ ಅವರು ಚಿನ್ನದ ಪದಕ ಹಾಗೂ ನಗದು ಬಹುಮಾನ ಪಡೆದುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ರಾಯಚೂರು

ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿರುವ ಪ್ರೇಕ್ಷಾಗೃಹದಲ್ಲಿ ಗುರುವಾರ ಜರುಗಿದ 13ನೇ ಘಟಿಕೋತ್ಸವದಲ್ಲಿ ಕೃಷಿಗೆ ಸಂಬಂಧಿಸಿದ ವಿವಿಧ ಪದವಿಗಳಲ್ಲಿ ವಿದ್ಯಾರ್ಥಿಗಳು ಮಿಂಚಿದ್ದು, ಬಸ್‌ ಕಂಡಕ್ಟರ್‌ ಮಗಳು 5 ಚಿನ್ನದ ಪದಕದ ಜೊತೆಗೆ 2 ನಗದು ಬಹುಮಾನ ಪಡೆದರೆ, ಕುರಿಗಾಯಿ ಮಗ 3 ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಇನ್ನು ನಾಲ್ಕು ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಮುಂದೆ ಪಿಎಚ್‌ಡಿ ಮಾಡಿ ಕೃಷಿ ಕ್ಷೇತ್ರದ ಪ್ರಗತಿಯ ಜೊತೆಗೆ ರೈತರಿಗೆ ಬೆನ್ನೆಲುಬಾಗಿ ನಿಲ್ಲುವ ನಿಟ್ಟಿನಲ್ಲಿ ಕೆಲಸ ಮಾಡುವ ಗುರಿ ಹೊಂದಿದ್ದಾರೆ.

13ನೇ ಘಟಿಕೋತ್ಸವದಲ್ಲಿ 363 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ, 127 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಹಾಗೂ 26 ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಇವರಲ್ಲಿ 144 ಸ್ನಾತಕ, 67 ಸ್ನಾತಕೋತ್ತರ ಹಾಗೂ 12 ಡಾಕ್ಟರೇಟ್ ಪದವಿಗಳನ್ನು ವಿದ್ಯಾರ್ಥಿನಿಯರು ಪಡೆದುಕೊಂಡಿದ್ದು ವಿಶೇಷವಾಗಿತ್ತು. ಸ್ನಾತಕ ಪದವಿಯಲ್ಲಿ 23 ಚಿನ್ನ ಮತ್ತು 2 ಸ್ನಾತಕ ನಗದು ಬಹುಮಾನ, ಸ್ನಾತಕೋತ್ತರ ಪದವಿಯಲ್ಲಿ 16 ಚಿನ್ನ ಹಾಗೂ ಡಾಕ್ಟರೇಟ್ ಪದವಿಯಲ್ಲಿ 13 ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಿಗೆ ರಾಜ್ಯಪಾಲ, ವಿವಿ ಕುಲಾಧಿಪತಿ ಥಾವರ್ ಚಂದ್‌ ಗೆಹ್ಲೋಟ್‌ ಸ್ನಾತಕ, ಸ್ನಾತಕೋತ್ತರ ಹಾಗೂ ಪಿಎಚ್‌ಡಿ ಪದವಿ ಪ್ರಮಾಣ ಪತ್ರಗಳ ಜೊತೆಗೆ ಚಿನ್ನದ ಪದಕ ಹಾಗೂ ನಗದು ಬಹುಮಾನ ಪ್ರದಾನ ಮಾಡಿದರು.

5 ಚಿನ್ನದ ಪದಕ, 2 ನಗದು ಬಹುಮಾನದ ಸಾಧಕಿ ಬಸ್‌ ಕಂಡಕ್ಟರ್‌ ಮಗಳು: ವಿಜಯಪುರ ಜಿಲ್ಲೆ ನಿಡೋಣಿ ಗ್ರಾಮದ ಶೋಭಾ ಆರ್.ದಾನಗೋಂಡ್ ಅವರು ರಾಯಚೂರು ಕೃಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬಿ.ಟೆಕ್‌ (ಕೃಷಿ) ಪದವಿಯಲ್ಲಿ ಬರೋಬ್ಬರಿ 5 ಚಿನ್ನದ ಪದಕ ಹಾಗೂ 2 ನಗದು ಬಹುಮಾನ ಪಡೆದುಕೊಂಡು 13ನೇ ಘಟಿಕೋತ್ಸವದಲ್ಲಿ ಗಮನ ಸೆಳೆದರು.

ಶೋಭಾ ಅವರ ಅಪ್ಪ ರೇವಣ ಸಿದ್ದಪ್ಪ ಅವರು ಬಸ್‌ ಕಂಡೆಕ್ಟರ್‌ ಆಗಿದ್ದು, ತಾಯಿ ಗೌರಮ್ಮ ಗೃಹಿಣಿಯಾಗಿದ್ದಾಳೆ. ಚಿಕ್ಕ ವಯಸ್ಸಿನಿಂದ ಓದಿನಲ್ಲಿ ಆಸಕ್ತಿ ಹೊಂದಿರುವ ಶೋಭಾ ಕೃಷಿ ಬಿ.ಟೆಕ್‌ ಮುಗಿಸಿದ್ದು, ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗಿದ್ದಾಳೆ.

ಮೂರು ಬಂಗಾರದ ಪದಕದ ಸಾಧಕ ಕುರಿಗಾಯಿ ಮಗ: ಬಡ-ಕುಟುಂಬ, ಆರ್ಥಿಕ ಸಂಕಷ್ಟದ ನಡುವೆ ಕೃಷಿ ಪದವಿಯಲ್ಲಿ 3 ಬಂಗಾರದ ಪದಕ ಸಾಧನೆ ಮಾಡಿ ಗಮನ ಸೆಳೆದ ಕರಡಿ ಬಸವ ಅವರು ಪಕ್ಕದ ಬಳ್ಳಾರಿ ಜಿಲ್ಲೆಯ ತಾ ಸಿರುಗುಪ್ಪಲೂಕಿನ ಕುರುಕೋಡು ಗ್ರಾಮದವರಾಗಿದ್ದಾರೆ.

ತಂದೆ ಕರಡಿ ತಿಮ್ಮಪ್ಪ, ತಾಯಿ ಕರೆಮ್ಮ ಅವರಿಗೆ ಮೂರು ಜನ ಹೆಣ್ಣು ಹಾಗೂ ಒಬ್ಬ ಗಂಡು ಮಗು, ಮೂರು ಎಕರೆ ಜಮೀನಿದ್ದರು ಬೆಳೆ ಬೆಳೆಯುವುದಿಲ್ಲ. ಆದರೆ ಸದ್ಯಕ್ಕೆ 150 ಕುರಿಗಳನ್ನು ಸಾಕುತ್ತಿದ್ದಾರೆ. ಆರ್ಥಿಕ ಸಂಕಷ್ಟದಿಂದಾಗಿ ಕೃಷಿ ಪದವಿ ಬಳಿಕ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೋಗದ ಕರಡಿ ಬಸವ ಬ್ಯಾಂಕ್ ನೌಕರಿ ಗಿಟ್ಟಿಸಿಕೊಂಡಿದ್ದು, ಅಲ್ಲಿ ರೈತರಿಗೆ ಅನುಕೂಲಕರವಾಗುವ ರೀತಿಯಲ್ಲಿ ಸೇವೆ ಮಾಡುತ್ತಿದ್ದಾರೆ.

ಪಿಎಚ್‌ಡಿ ಮಾಡಿ ಕೃಷಿ-ರೈತರಿಗೆ ನೆರವು: ರಾಯಚೂರು ಕೃಷಿ ವಿಜ್ಞಾನಗಳ ವಿವಿಯ 13ನೇ ಘಟಿಕೋತ್ಸವದಲ್ಲಿ ವಿವಿ ಸಂಚಾಲಿತ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದಲ್ಲಿ ಬಿಎಸ್ಸಿ (ಕೃಷಿ) ಪದವಿಯಲ್ಲಿ 4 ಚಿನ್ನದ ಪದಕಗಳನ್ನು ಪಡೆದ ದಿವ್ಯಾ ಸದ್ಯಕ್ಕೆ ಬೆಂಗಳೂರಿನಲ್ಲಿ ಸ್ನಾತಕೋತ್ತರ ಪದವಿಯನ್ನು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಪಕ್ಕದ ಯಾದಗಿರಿ ವಡಗೇರಾ ತಾಲೂಕಿನ ಕೊಟ್ಟಡಗಿಮ ಗ್ರಾದ ದಿವ್ಯಾ ಅವರ ತಂದೆ ಮಲ್ಲಿಕಾರ್ಜುನ, ತಾಯಿ ರೂಪಾ ಅವರು ಮಗಳ ಸಾಧನೆಯ ಹಿಂದೆ ಬೆನ್ನೆಲುಬಾಗಿ ನಿಂತಿದ್ದಾರೆ. ದಿವ್ಯಾ ಮುಂದಿನ ದಿನಗಳಲ್ಲಿ ಪಿಎಚ್‌ಡಿ ಮಾಡಿ ಕೃಷಿ ಯಲ್ಲಿ ಸಾಧನೆ ತೋರಿ ರೈತರಿಗೆ ನೆರವಾಗಬೇಕು ಎನ್ನುವ ಗುರಿಯನ್ನಿಟ್ಟುಕೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನ್ಯಕೋಮಿನವನ ಜತೆ ಮದುವೆ: ಮೊಮ್ಮಗಳ ಶಿಶು ಕೊಂ*ದ ಅಜ್ಜಿ!
ಕಾಳಸಂತೆಯಲ್ಲಿ ಎಲ್ಪಿಜಿ ಸೇಲ್‌ ಮೇಲೆ ನಿಗಾ - ಅಧಿಕಾರಿಗಳಿಗೆ ಸಿಎಸ್‌ ಸೂಚನೆ