ಮಳೆಗೆ ಭತ್ತದ ಬೆಳೆ ನಾಶ: ಅಧಿಕಾರಿಗಳ ವಿರುದ್ಧ ರೈತ ಸಂಘ ಆಕ್ರೋಶ

KannadaprabhaNewsNetwork | Published : Oct 20, 2024 1:47 AM

ಸಾರಾಂಶ

ಭಾರೀ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಗೆ ನೂರಾರು ಎಕರೆ ಭತ್ತ ಹಾನಿಯಾಗಿದ್ದು,

ಹೊಸಪೇಟೆ: ಜಿಲ್ಲೆಯಲ್ಲಿ ನೂರಾರು ಎಕರೆ ಭತ್ತದ ಬೆಳೆ ನಾಶವಾದರೂ ಕೃಷಿ ಇಲಾಖೆಯ ಅಧಿಕಾರಿಗಳು ಗದ್ದೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿಜಯನಗರ ಜಿಲ್ಲಾ ಘಟಕದ ಪದಾಧಿಕಾರಿಗಳು ಶನಿವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಇಪ್ಪಿತೆರಿ, ಕರೇಕಲ್ಲು, ಮುದ್ಲಾಪುರ, ಬೆಳಗೋಡು ಗ್ರಾಮಗಳಲ್ಲಿ ಮಳೆ ನೀರು ಭತ್ತದ ಗದ್ದೆಗಳಿಗೆ ನುಗ್ಗಿದೆ. ಭಾರೀ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಗೆ ನೂರಾರು ಎಕರೆ ಭತ್ತ ಹಾನಿಯಾಗಿದ್ದು, ಯಾವುದೇ ಒಬ್ಬ ಅಧಿಕಾರಿ ಬೆಳೆ ನಷ್ಟವಾದಂತಹ ಜಮೀನುಗಳ ಸ್ಥಳಕ್ಕೆ ಬಂದಿರುವುದಿಲ್ಲ. ಜಿಲ್ಲೆಯಲ್ಲಿ ಅಧಿಕಾರಿಗಳು ಪೋನ್ ಕರೆ ಮಾಡಿದಾಗ, ಪೋನ್ ಕರೆ ಸ್ವೀಕರಿಸುತ್ತಿಲ್ಲ. ಕೃಷಿ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿದಾಗ ಒಮ್ಮೆ ಕರೆಯನ್ನು ಸ್ವೀಕರಿಸಿ ಹೊಸಪೇಟೆ ಭಾಗದಲ್ಲಿ ಮತ್ತು ಕಮಲಾಪುರ ಭಾಗದಲ್ಲಿ ಮತ್ತು ಮರಿಯಮ್ಮನಹಳ್ಳಿ ಭಾಗದಲ್ಲಿ ಸಿಬ್ಬಂದಿ ಕೊರತೆ ಇದ್ದು, ಇಲ್ಲಿ ಕೆಲಸ ನಿರ್ವಹಿಸುವವರು ಒಬ್ಬರೆ ಇದ್ದಾರೆ. ಹಾಗಾಗಿ ನಮಗೆ ಎಲ್ಲಾ ಕಡೆಗಳಲ್ಲಿ ಸಂಚರಿಸುವುದಕ್ಕೆ ಸಮಯವಕಾಶ ಬೇಕು. ತುರ್ತುಗತಿಯಲ್ಲಿ ಮಾಡಲು ಬರುವುದಿಲ್ಲ ಎಂದು ತಿಳಿಸಿದ್ದಾರೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು, ರೈತರ ಜತೆಗೂಡಿ, ರೈತರ ಬೆಳೆನಷ್ಟ ಆದಂತಹ ಜಮೀನುಗಳಿಗೆ ಭೇಟಿ ನೀಡಿದ್ದು, ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು. ಕಮಲಾಪುರ ಹೋಬಳಿಯಲ್ಲಿ ನಿರಂತರ ಮಳೆಯಿಂದಾಗಿ ಹತ್ತಿ, ಈರುಳ್ಳಿ, ಮೆಣಸಿನಕಾಯಿ, ಮೆಕ್ಕೆಜೋಳ, ಸಜ್ಜೆ, ಸೂರ್ಯಕಾಂತಿ ಇನ್ನಿತರೆ ಬೆಳೆಗಳಿಗೆ ಮಳೆಯಿಂದ ತುಂಬಾ ಹಾನಿಯಾಗಿ, ರೈತರು ತುಂಬಲಾರದ ನಷ್ಟವನ್ನು ಭರಿಸುತ್ತಿದ್ದಾರೆ. ಒಂದು ಎಕರೆಗೆ ಸುಮಾರು 40 ರಿಂದ ₹50 ಸಾವಿರ ಖರ್ಚು ಮಾಡಿದ್ದು, ರೈತರ ಹೊಲ, ಗದ್ದೆಗಳಿಗೆ ತೆರಳಿ ಕೃಷಿ ಮತ್ತು ಕಂದಾಯ ಇಲಾಖೆಯವರು ಪರಿಶೀಲನೆ ನಡೆಸಿ ಬೆಳೆ ನಷ್ಟ ಆದಂತಹ ಜಮೀನುಗಳಿಗೆ ಭೇಟಿ ನೀಡಿ ಒಂದು ಎಕರೆಗೆ ₹50 ಸಾವಿರ ಬೆಳೆ ನಷ್ಟ ಪರಿಹಾರವನ್ನು ಕೊಡಿಸಬೇಕು ಎಂದು ಆಗ್ರಹಿಸಿದರು.

ಸಕ್ಕರೆ ಕಾರ್ಖಾನೆ 8 ರಿಂದ 9 ವರ್ಷಗಳಿಂದ ಮುಚ್ಚಿ ಹೋಗಿದ್ದು, ಶೇ.80ರಷ್ಟು ರೈತರು ಸುಮಾರು ಭತ್ತ ಮತ್ತು ಬಾಳೆ ಬೆಳೆ ಕಡೆಗೆ ಮುಖ ಮಾಡಿದ್ದು, ಒಂದು ಎಕರೆಗೆ ಸುಮಾರು ₹40 ರಿಂದ 50 ಸಾವಿರ ಖರ್ಚು ಮಾಡಿದ್ದು, ಮೇ ತಿಂಗಳಲ್ಲಿ ಅಕಾಲಿಕ ಮಳೆಗೆ ನೂರಾರು ಎಕರೆ ಬಾಳೆ ಬೆಳೆ ನಷ್ಟವಾಗಿದ್ದು, ಇಲ್ಲಿಯವರೆಗೂ ಒಂದು ರುಪಾಯಿ ಸಹ ಬೆಳೆ ನಷ್ಟ ಪರಿಹಾರ ಬಂದಿರುವುದಿಲ್ಲ. ಈ ಕೂಡಲೇ ಹೊಸಪೇಟೆ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಬೇಕು. ಈ ಹಿಂದೆ ಸಿಎಂ ಸಿದ್ದರಾಮಯ್ಯರವರು ಚುನಾವಣೆ ಪೂರ್ವದಲ್ಲಿ ನಮ್ಮ ಸರ್ಕಾರ ಬಂದ ಕೂಡಲೇ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆಯನ್ನು ಪುನರ್ ಆರಂಭ ಮಾಡುತ್ತೇವೆ ಎಂದು ಮಾತು ನೀಡಿರುತ್ತಾರೆ. ಸರ್ಕಾರ ಜಾರಿಗೆ ಬಂದು ಒಂದುವರೆ ವರ್ಷ ಕಳೆದರೂ ಯಾರೊಬ್ಬ ಶಾಸಕರಾಗಲಿ, ಸಚಿವರಾಗಲಿ, ಸಂಸದರಾಗಲಿ, ಇಲ್ಲಿನ ಅಧಿಕಾರಿಗಳಾಗಲಿ ಸಕ್ಕರೆ ಕಾರ್ಖಾನೆ ಬಗ್ಗೆ ರೈತರ ಬಗ್ಗೆ ಮುತುವರ್ಜಿ ವಹಿಸಿರುವುದಿಲ್ಲ ಎಂದು ದೂರಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಟಿ.ನಾಗರಾಜ್ ತಾಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ, ಮುಖಂಡರಾದ ಕೆ.ರಾಮಾಂಜಿನಿ, ಜಾಕೀರ್ ಹುಸೇನ್, ಕಲ್ಮಂಗಿ ರಮೇಶ್, ಯಮುನಪ್ಪ, ಹನುಮಂತಪ್ಪ, ನಾರಾಯಣಿ, ಗಂಟೆ ಮಂಜುನಾಥ, ದಾರಾಸಿಂಗ್, ಮಂಜುನಾಥ ಸಿಂಗ್, ದಂಡಿ ಮಂಜುನಾಥ, ಕಾಸಿನಾಥ ಬಸವನದುರ್ಗ ಮತ್ತಿತರರಿದ್ದರು.19ಎಚ್‌ಪಿಟಿ2

ಹೊಸಪೇಟೆ ಸುತ್ತಮುತ್ತ ಮಳೆ ನೀರು ಭತ್ತದ ಗದ್ದೆಗಳಲ್ಲಿ ನಿಂತಿದ್ದರೂ ಕೃಷಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸದೇ ಇರುವುದನ್ನು ರೈತ ಸಂಘದ ಪದಾಧಿಕಾರಿಗಳು ಗದ್ದೆಗಳಲ್ಲೇ ಖಂಡಿಸಿದರು.

Share this article