ಹಿರೇಕೆರೂರ: ಕಳೆದೆರಡು ವಾರಗಳಿಂದ ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ನದಿಗಳು, ಹಳ್ಳಗಳು ತುಂಬಿ ಹರಿಯುತ್ತಿವೆ ಇದರಿಂದ ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳು ಹಾಳಾಗುತ್ತಿವೆ. ಅಲ್ಲದೆ ಮನೆಗಳು ಸಹ ಬೀಳುತ್ತಿವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಕಳವಳ ವ್ಯಕ್ತಪಡಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ನಿರಂತರ ಮಳೆ ಸುರಿಯುತ್ತಿರುವುದರಿಂದ ಜಮೀನುಗಳಲ್ಲಿ ಮಳೆ ನೀರು ನಿಂತು ಬೆಳೆಗಳು ಎಲ್ಲವೂ ಹಾಳಾಗುತ್ತಿವೆ. ಕಳೆದ ಬಾರಿ ಸಹ ಮುಂಗಾರು ಮತ್ತು ಹಿಂಗಾರು ಮಳೆ ಕೈ ಕೊಟ್ಟಿದ್ದರಿಂದ ಬರಗಾಲ ಬಿದ್ದು ರೈತರು ಆತ್ಮಹತ್ಯೆ ಮಾಡಿಕೊ ದಾರಿ ಹಿಡಿದರು. ಈ ಬಾರಿ ಸಹ ಬೆಳೆಗಳನ್ನು ರೈತರು ಕಳೆದುಕೊಳ್ಳುವ ಭೀತಿಯಲ್ಲಿ ಇದ್ದಾರೆ. ಬ್ಯಾಂಕುಗಳು, ಖಾಸಗಿ ಫೈನಾನ್ಸ್ ಕಂಪನಿಗಳು ರೈತರಿಂದ ಬಲವಂತದಿಂದ ಸಾಲ ವಸೂಲಾತಿ ಮಾಡುತ್ತಿದ್ದರು. ರಾಜ್ಯ ಸರ್ಕಾರ ಬೆಳೆ ನಷ್ಟ ಸಮೀಕ್ಷೆ ನಡೆಸಿಲ್ಲ. ಕೂಡಲೇ ಬೆಳೆ ಕಳೆದುಕೊಂಡ ರೈತರಿಗೆ ಬೆಳೆ ನಷ್ಟ ಪರಿಹಾರ ಕೊಡುವುದರ ಜೊತೆಗೆ ರೈತರಿಗೆ ಧೈರ್ಯ ತುಂಬುವುದನ್ನು ಬಿಟ್ಟು, ಸರ್ಕಾರ ಹಾಗೂ ವಿರೋಧ ಪಕ್ಷಗಳು ಅಧಿವೇಶನದಲ್ಲಿ ಬಡವರ ರೈತರ ಪರವಾಗಿ ಚರ್ಚಿಸುವದನ್ನು ಬಿಟ್ಟು, ವಾಲ್ಮೀಕಿ ನಿಗಮದ ಹಾಗೂ ಮುಡಾ ಹಗರಣದ ಬಗ್ಗೆ ಕಾಲಹರಣ ಮಾಡಿದ್ದಾರೆ. ರಾಜ್ಯದ ರೈತರ ಹಿತ ಕಾಪಾಡದೆ ಕೇವಲ ವೈಯಕ್ತಿಕ ತೇಜೋವಧೆ
ಯಲ್ಲಿ ತೊಡಗಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ಕಿಸಾನ್ ಸನ್ಮಾನ ಯೋಜನೆ ಹಣ ಎಲ್ಲ ರೈತರಿಗೆ ಮುಟ್ಟಿಲ್ಲ, ಬರಗಾಲದಿಂದ ಬೆಳೆ ಕಳೆದುಕೊಂಡ ರೈತರಿಗೆ ಬೆಳೆ ಪರಿಹಾರ ಕೊಡುವುದರಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದರು.ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯ ಮಾಲತೇಶ ಪೂಜಾರ, ತಾಲೂಕು ಘಟಕದ ಅಧ್ಯಕ್ಷ ಪ್ರಭುಗೌಡ ಪ್ಯಾಟಿ, ತಾಲೂಕು ಕಾರ್ಯದರ್ಶಿ ಗಂಗನಗೌಡ ಮುದಿಗೌಡ್ರ, ಶಾಂತನಗೌಡ ಪಾಟೀಲ, ಮಲ್ಲನಗೌಡ ಮಾಲಗಿ, ನಾಗರಾಜ ಮಳವಳ್ಳಿ, ಗುಡಪ್ಪ ಛಲವಾದಿ ಇದ್ದರು.