ಕನ್ನಡಪ್ರಭ ವಾರ್ತೆ ಕೋಲಾರಬಿಸಿಲಿನ ಬೇಗೆಯಿಂದ ತತ್ತರಿಸುತ್ತಿದ್ದ ಕೋಲಾರದ ಜನತೆಯು ಸೋಮವಾರ ಸಂಜೆ ೪ ಗಂಟೆಯಿಂದ ಮೋಡ ಕವಿದ ವಾತಾವರಣದಿಂದ ಕೂಡಿದ್ದು ೫ ಗಂಟೆಯಿಂದ ಜಡಿ ಮಳೆಯಿಂದ ಪ್ರಾರಂಭವಾದ ಮಳೆರಾಯ ಜೋರು ಮಳೆಯು ಆಗಾಗ ಬಿಡುವು ನೀಡುತ್ತಾ ನಿರಂತರವಾಗಿ ಸುರಿಯಿತು.ನಿರಂತರವಾಗಿ ಸುರಿಯುತ್ತಿದ್ದ ಪರಿಣಾಮ ಸಂಜೆ ೬.೩೦ರ ಸುಮಾರಿಗೆ ಕಣ್ಮರೆಯಾದ ವಿದ್ಯುತ್ ೮ ಗಂಟೆಯಾದರೂ ಕರೆಂಟ್ ಕಣ್ಮರೆಯಾದ ಹಿನ್ನೆಲೆಯಲ್ಲಿ ಕೋಲಾರದ ಜನತೆಯು ಕತ್ತಲೆಯ ಸಾಮಾಜ್ಯದಲ್ಲಿ ಕಾಲ ಕಳೆಯುವ ಪರಿಸ್ಥಿತಿ ಉಂಟಾಗಿತ್ತು. ಹೆಸರಿಗಷ್ಟೇ ಜಿಲ್ಲಾ ಕೇಂದ್ರವಾಗಿದ್ದು ರಸ್ತೆಗಳು ಹಳ್ಳಕೊಳ್ಳಗಳಿಂದ ಕೂಡಿದ್ದರಿಂದ ಮಳೆನೀರು ಹಳ್ಳಕೊಳ್ಳಗಳಲ್ಲಿ ತುಂಬಿದ್ದರಿಂದ ವಾಹನ ಸವಾರರು ಯಾವುದು ರಸ್ತೆ ಯಾವುದು ಹಳ್ಳವೆಂದು ಪರದಾಡುತ್ತಿದ್ದರು, ಇನ್ನೂ ನಗರಸಭೆ ಅಧಿಕಾರಿಗಳು ಚರಂಡಿಗಳಲ್ಲಿ ಸ್ವಚ್ಛಗೊಳಿಸದ ಹಿನ್ನೆಲೆಯಲ್ಲಿ ಚರಂಡಿಯಲ್ಲಿ ಹರಿಯಬೇಕಾದ ಮಳೆನೀರು ರಸ್ತೆಯಲ್ಲಿ ಹರಿಯುತ್ತಿದ್ದರಿಂದ ನಗರಸಭೆಯ ಕಾರ್ಯವೈಖರಿಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದರು.
ಆಸ್ಪತ್ರೆಗೆ ನುಗ್ಗಿದ ಮಳೆನೀರುಹೆರಿಗೆ ವಾರ್ಡ್ ನ ಮಹಡಿಯಲ್ಲಿ ಕಾಮಗಾರಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೋಲಾರದ ಸರ್ಕಾರಿ ಜಿಲ್ಲಾಸ್ಪತ್ರೆಯ ಹೆರಿಗೆ ವಿಭಾಗದ ಪ್ರಾಂಗಣಕ್ಕೆಮಳೆನೀರು ನುಗ್ಗಿದ್ದರಿಂದ ಸಾರ್ವಜನಿಕರಿಗೆ ಹಾಗೂ ವಾರ್ಡಿನಲ್ಲಿರುವ ರೋಗಿಗಳು ಗಲಿಬಿಲಿಗೊಂಡು ಅವಾಂತರ ಸೃಷ್ಟಿಯಾಗಿತ್ತಾದರೂ ಕೂಡಲೇ ಆಸ್ಪತ್ರೆಯ ಸಿಬ್ಬಂದಿ ಹೆರಿಗೆ ವಾರ್ಡಿಗೆ ನುಗ್ಗಿದ್ದ ಮಳೆನೀರನ್ನು ಹೊರಹಾಕುವ ಮೂಲಕ ಸಾರ್ವಜನಿಕರ ಆವಾಂತರಕ್ಕೆ ಕಡಿವಾಣ ಹಾಕಿದರು.