ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲಾ ಭೂ ಸಂತ್ರಸ್ತರ ಹೋರಾಟ ಸಮಿತಿ ಮತ್ತು ಕರ್ನಾಟಕ ಪ್ರಾಂತ ರೈತ ಸಂಘವು ಹರಟಿ ಮತ್ತು ಅಬ್ಬಣಿ ಗ್ರಾಮಗಳಲ್ಲಿ ಅರಣ್ಯ ಇಲಾಖೆಯು ದೌರ್ಜನ್ಯದಿಂದ ಅಕ್ರಮವಾಗಿ ವಶಕ್ಕೆ ಪಡೆದಿದ್ದ ಭೂಮಿಯ ವಿರುದ್ಧ ನಡೆಸಿದ ಹೋರಾಟಕ್ಕೆ ಜಯ ಸಂದಿದೆ ಎಂದು ಸಿ.ಪಿ.ಎಂ. ಜಿಲ್ಲಾ ಸಂಚಾಲಕ ಗೋಪಾಲ್ ಹರ್ಷ ವ್ಯಕ್ತಪಡಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿರಂತರ ಹೋರಾಟದಿಂದಾಗಿ ಸತ್ಯಕ್ಕೆ ಜಯ, ೨೦೨೪ರ ಫೆಬ್ರವರಿಯಲ್ಲಿ ಅರಣ್ಯ ಇಲಾಖೆಯು ರೈತರ ಜಮೀನುಗಳನ್ನು ಒತ್ತುವರಿ ಮಾಡಿ ಕೋಟ್ಯಂತರ ರು. ಬೆಳೆ, ಮರಗಿಡಗಳು, ಆಸ್ತಿಪಾಸ್ತಿ ನಾಶಪಡಿಸಿತು ಎಂದರು.
ಹೋರಾಟಕ್ಕೆ ಜಿಲ್ಲೆಯ ಶಾಸಕರಾದ ಕೊತ್ತೂರು.ಡಾ.ಜಿ. ಮಂಜುನಾಥ್, ಕೆ.ವೈ. ನಂಜೇಗೌಡ, ಎಸ್.ಎನ್. ನಾರಾಯಣಸ್ವಾಮಿ, ಎಂಎಲ್ಸಿಗಳಾದ ಅನಿಲ್ ಕುಮಾರ, ಇಂಚರ ಗೋವಿಂದರಾಜು ರೈತರ ಪರವಾಗಿ ಬೆಂಬಲ ನೀಡಿದ್ದಾರೆಂದು ತಿಳಿಸಿದರು. ಭೂ ಸಂತ್ರಸ್ತರ ಹೋರಾಟ ಸಮಿತಿಯ ಶ್ರೀನಿವಾಸ್ ಮಾತನಾಡಿ, ನಿರಂತರವಾದ ಹೋರಾಟ, ಕಚೇರಿಗಳಿಗೆ ಅಲೆದಾಟ, ರಾಜಕಾರಣಿಗಳಿಗೆ ಒತ್ತಡ, ಅಧಿಕಾರಿಗಳಿಗೆ ಒತ್ತಡ ಹೇರುವ ಮೂಲಕ ಮಾಡಿದ ಸಾಧನೆಗೆ ಪ್ರತಿಫಲ ಸಿಕ್ಕಿದಂತಾಗಿದೆ. ಜಿಲ್ಲಾಧಿಕಾರಿಗಳು ನಮ್ಮ ಹೋರಾಟದ ಪ್ರಯತ್ನಗಳಿಗೆ ಕಾನೂನಿನಡಿಯಲ್ಲಿ ನೀಡಿದ ಮಾರ್ಗದರ್ಶನವು ನಮ್ಮನ್ನು ಉತ್ತೇಜಿಸಿ ಸರ್ಕಾರದಿಂದ ದಾಖಲೆಗಳನ್ನು ಕ್ರೋಡೀಕರಿಸಲು ಪೂರಕವಾದವು ಎಂದರು. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ, ಪ್ರಕಾಶ್, ಭಟ್ರಹಳ್ಳಿ ಮಂಜುನಾಥ್ ಇದ್ದರು.