ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಈ ಬಾರಿ ಒಂದು ತಿಂಗಳು ಮಳೆ ತಡವಾಗಿ ಸುರಿದಿದ್ದು, ಪೇಲವಗೊಂಡಿದ್ದ ಜಲಪಾತ, ತೊರೆಗಳು ಇದೀಗ ಇಲ್ಲಿನ ಆಕರ್ಷಣೆ ಹೆಚ್ಚಿಸಿಕೊಂಡಿವೆ. ವರ್ಷವಿಡಿ ಕಣ್ಮನ ಸೆಳೆಯುವ ಈ ಘಾಟಿಯ ಮಳೆಗಾಲದ ಸೌಂದರ್ಯವಂತೂ ವರ್ಣಿಸಲದಳ. ಅಲ್ಲಲ್ಲಿ ಚಿಕ್ಕ ಚಿಕ್ಕ ತೊರೆಗಳು, ಕಲ್ಲುಗಳಿಂದ ಮೇಲಿಂದ ಧುಮ್ಮಿಕ್ಕುವ ನೀರು, ಪುಟ್ಟ ಪುಟ್ಟ ಜಲಪಾತ, ತುಂಬಿ ಹರಿಯುವ ಹಳ್ಳ, ಕೊಳ್ಳಗಳು ಒಂದನೇ ತಿರುವಿನಿಂದ ಆರಂಭವಾಗಿ ಮೇಲೆ ಹೋದಂತೆ ತೀವ್ರಗೊಳ್ಳುವ ಮಂಜು, ಸದಾ ಸುರಿಯುವ ಮಳೆ, ರಸ್ತೆ ಬದಿ ಆಳವಾದ ಕಮರಿಗಳು, ಸುತ್ತಲ ಪ್ರಕೃತಿ ಸೌಂದರ್ಯ ಹಾದಿಯಲ್ಲಿ ಸಿಗುವ ಪಕ್ಷಿ ಪ್ರಾಣಿಗಳು ಇವನ್ನೆಲ್ಲ ನೋಡುತ್ತಾ ಸಾಗುವಾಗ ಘಾಟಿ ಕ್ರಮಿಸಿದ್ದೇ ತಿಳಿಯುವುದಿಲ್ಲ.
ಘಾಟಿ ಭಾಗದ ಸೌಂದರ್ಯವನ್ನು ಪ್ರಯಾಣದ ಸಮಯದಲ್ಲಿ ವೀಕ್ಷಿಸುತ್ತ ಸಾಗಬಹುದು. ಆದರೆ ವಾಹನಗಳನ್ನು ಅಲ್ಲಲ್ಲಿ ನಿಲ್ಲಿಸಿ ವೀಕ್ಷಿಸಲು ಅವಕಾಶವಿಲ್ಲ. ಅಪಾಯಕಾರಿ ಬಂಡೆ ಏರುವುದು ತಡೆಗೋಡೆ ಹತ್ತುವುದು, ತೊರೆಗಳಲ್ಲಿ ಇಳಿಯುವುದಕ್ಕೆ ಅವಕಾಶವಿಲ್ಲ. ಗಸ್ತು ನಿರತ ಪೊಲೀಸರು ಪ್ರವಾಸಿಗರ ಪ್ರತಿಯೊಂದು ಚಲನವಲನಗಳನ್ನು ಗಮನಿಸುತ್ತಿದ್ದಾರೆ. ಅನಪೇಕ್ಷಿತ ಚಟುವಟಿಕೆಗಳು ಕಂಡುಬಂದರೆ ದಂಡ ವಿಧಿಸುತ್ತಾರೆ. ಆದರೆ ಕೆಲವೊಂದು ಪ್ರವಾಸಿಗರು ಅನಗತ್ಯ ಆಟಾಟೋಪ ನಡೆಸಿ ಅಪಾಯಕ್ಕೆ ಆಹ್ವಾನ ತಂದುಕೊಳ್ಳುತ್ತಾರೆ.ಎಚ್ಚರ ಅಗತ್ಯ:
*ಈ ಬಾರಿ ಬೇಸಿಗೆಯಲ್ಲಿ ಆಗಾಗ ಮಳೆ ಸುರಿದ ಕಾರಣ ಚಾರ್ಮಾಡಿ ಪರಿಸರದಲ್ಲಿ ಕಾಡ್ಗಿಚ್ಚು ಕಡಿಮೆ ಇದ್ದುದರಿಂದ ಹಸಿರು ನಳ ನಳಿಸುತ್ತಿದೆ.
*ತಡೆಗೋಡೆಗಳು ಬಹುತೇಕ ಪೂರ್ಣಗೊಂಡಿವೆ.
*ಘಾಟಿ ಪ್ರದೇಶದಲ್ಲಿ ಕಾಡಾನೆ, ಚಿರತೆ ಹಾಗೂ ಇನ್ನಿತರ ವನ್ಯಜೀವಿಗಳ ತಿರುಗಾಟವಿದ್ದು, ಜಾಗ್ರತೆ ಅಗತ್ಯ.
ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಮಳೆಗಾಲದ ನಿರ್ವಹಣೆ ನಡೆಸಲಾಗಿದೆ. ಎರಡು ಜೆಸಿಬಿ ಹಾಗೂ ಕಾರ್ಮಿಕರ ತಂಡ ಇಲ್ಲಿ ಸನ್ನದ್ಧ ಸ್ಥಿತಿಯಲ್ಲಿದೆ.