ರಾಜ್ಯೋತ್ಸವ ನಿತ್ಯೋತ್ಸವವಾಗಬೇಕು

KannadaprabhaNewsNetwork | Published : Dec 25, 2023 1:31 AM

ಸಾರಾಂಶ

ರಾಜ್ಯೋತ್ಸವ ಸಂಭ್ರಮಾಚರಣೆ ಪ್ರತ್ಯೇಕ ದಿನಕ್ಕೆ ಸೀಮಿತವಾಗಬಾರದು.

ಹಿರಿಯೂರು: ನಾನೂ ಸಹ ರಾಜಕೀಯಕ್ಕೆ ಬರುವ ಮುನ್ನ ಒಂದು ಪತ್ರಿಕೆ ನಡೆಸುತ್ತಿದ್ದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ನಗರದ ನೆಹರೂ ಮೈದಾನದಲ್ಲಿ ಶನಿವಾರ ರಾತ್ರಿ ಡಾ.ಬಾಬು ಜಗಜೀವನರಾಂ ಯುವಕ ಸಂಘ, ಕರ್ನಾಟಕ ರಾಜ್ಯ ಪತ್ರಕರ್ತರ ಸಂಘ, ಪತ್ರಿಕಾ ಬಳಗವೊಂದರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಡೆದ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಬದಲಾದ ಜಗತ್ತಿನಲ್ಲಿ ಸಂಘಟನೆ ಕಟ್ಟುವುದು, ಪತ್ರಿಕೆ ನಡೆಸುವುದು ತುಂಬಾ ಕಷ್ಟದ ಕೆಲಸ. ನಾನು ಸಹ ರಾಜಕೀಯಕ್ಕೆ ಬರುವುದಕ್ಕಿಂತ ಮುಂಚೆ ಒಂದು ಪತ್ರಿಕೆಯನ್ನು ನಡೆಸಿದ್ದು, ಅದರ ಶ್ರಮ ನನಗೆ ಗೊತ್ತು. ಪತ್ರಿಕೋದ್ಯಮ ತುಂಬಾ ನಿಷ್ಟುರವಾದ ವೃತ್ತಿ. ಕಾನೂನು ಬಾಹಿರ ಚಟುವಟಿಕೆಗಳನ್ನು ಬಯಲಿಗೆಳೆಯುವುದು, ಅಧಿಕಾರಿಗಳು, ರಾಜಕಾರಣಿಗಳು ತಪ್ಪು ದಾರಿ ಹಿಡಿದಾಗ ಎಚ್ಚರಿಸುವುದು ಪತ್ರಿಕಾ ಧರ್ಮ. ಅದರಲ್ಲೂ ನಿರಂತರವಾಗಿ ಪತ್ರಿಕೆ ನಡೆಸುವುದರ ಜೊತೆಗೆ ಕನ್ನಡ ರಾಜ್ಯೋತ್ಸವವನ್ನು ಸಹ ಆಚರಿಸಿಕೊಂಡು ಬರುತ್ತಿರುವುದು ಸಂತೋಷದ ವಿಚಾರ ಎಂದರು.

ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಕನ್ನಡದ ಹಬ್ಬಗಳು ಹೀಗೆಯೇ ನಿರಂತರವಾಗಿ ನಡೆಯುತ್ತಿರಬೇಕು. ಭಾಷೆ ಮೇಲಿನ ಗೌರವ, ಅಭಿಮಾನ ಸದಾ ಎಲ್ಲರಲ್ಲೂ ಇರಬೇಕು ಎಂದರು.

ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ, ದಶಕಗಳ ಕಾಲ ಪತ್ರಿಕೆ ಮತ್ತು ಸಮಾಜ ಸೇವೆ ಮಾಡುತ್ತಾ ಬಂದಿರುವ ಪತ್ರಿಕೆಗಳಿಗೆ ಅಭಿನಂದನಾರ್ಹ ಎಂದರು.

ಈ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜಕ, ಜಗಜೀವನ್‌ರಾಂ ಸಂಘದ ಅಧ್ಯಕ್ಷ ಜಿಎಲ್ ಮೂರ್ತಿ, ಹರಳಯ್ಯ ಸ್ವಾಮೀಜಿ, ಗೌನಳ್ಳಿ ಮಹಾಂತೇಶ್, ಜಯಣ್ಣ, ವಕೀಲ ಮಲ್ಲೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಜೆಜೆ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಲ್ತಾಫ್, ನಿವೃತ್ತ ಪ್ರಾಂಶುಪಾಲ ಬಿಪಿ ತಿಪ್ಪೇಸ್ವಾಮಿ, ಬೋರನಕುಂಟೆ ಜೀವೇಶ್, ಶಿವಕುಮಾರ್, ಜ್ಞಾನೇಶ್, ಕನಕರಾಜ್ ಆಲೂರು, ಸುರೇಶ್, ನಂದಕುಮಾರ್, ಚಂದ್ರು ಬ್ಯಾರಮಡು, ರವಿ, ಮಾರುತಿ ಮುಂತಾದವರು ಹಾಜರಿದ್ದರು.

Share this article