ಬಹಳ ವರ್ಷಗಳ ಹಿಂದೆಯೇ ರಾಮಮಂದಿರ ನಿರ್ಮಿಸಬೇಕಿತ್ತು

KannadaprabhaNewsNetwork | Published : Jan 21, 2024 1:32 AM

ಬಸವನಬಾಗೇವಾಡಿ ಪಟ್ಟಣದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬಜರಂಗದಳ, ಮಾತೃಶಕ್ತಿ ಹಾಗೂ ದುರ್ಗಾವಾಹಿನಿಯ ಸಹಯೋಗದಲ್ಲಿ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಜ.22ರಂದು ನಡೆಯುತ್ತಿರುವ ಶ್ರೀರಾಮ ದೇವರ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ರಾಮತಾರಕ ಹೋಮ ಕಾರ್ಯಕ್ರಮದಲ್ಲಿ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಸಮಸ್ತ ಭಾರತೀಯರಿಗೆ ಅಯೋಧ್ಯೆ ಭವ್ಯ ಶ್ರೀರಾಮಮಂದಿರದಲ್ಲಿ ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಠಾನ ನಡೆಯುತ್ತಿರುವ ಸಂಗತಿ ಬಹಳ ಸಂತಸ, ಸಂಭ್ರಮ ತಂದಿದೆ. ಬಹಳ ದಿನಗಳ ಕನಸು ಈಗ ನನಸಾಗುತ್ತಿದೆ. ಇಡೀ ದೇಶವೇ ಸಂಭ್ರಮಪಡುತ್ತಿದೆ ಎಂದು ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಪಟ್ಟಣದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬಜರಂಗದಳ, ಮಾತೃಶಕ್ತಿ ಹಾಗೂ ದುರ್ಗಾವಾಹಿನಿಯ ಸಹಯೋಗದಲ್ಲಿ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಜ.22ರಂದು ನಡೆಯುತ್ತಿರುವ ಶ್ರೀರಾಮ ದೇವರ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ರಾಮತಾರಕ ಹೋಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ಬಹು ವರ್ಷಗಳ ಹಿಂದೆ ನಿರ್ಮಾಣವಾಗಬೇಕಿತ್ತು. ಕೆಲವರ ಕಾರಣದಿಂದಾಗಿ ಈ ಕಾರ್ಯ ನೆರವೇರಲಿಲ್ಲ. ಇದೀಗ ಕಾನೂನು ಬದ್ಧವಾಗಿ ನಿರ್ಮಾಣ ಮಾಡಿದ್ದು ಸಂತೋಷದಾಯಕ. ಈ ಮೊದಲು ಎಲ್ಲೆಡೆ ಬನಾಯೆಂಗೇ ಮಂದಿರ ಹಾಡು ಹಾಕಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಇದರ ಬದಲು ಬನ್‌ ಗಯಾ ಮಂದಿರ ಎಂಬ ಹಾಡು ಹಾಕಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜ.22 ರಂದು ಶ್ರೀರಾಮ ಭಾವಚಿತ್ರ ಪೂಜೆ ಮಾಡುವ ಜೊತೆಗೆ ದೀಪ ಬೆಳಗಿಸಬೇಕೆಂದು ಕರೆ ನೀಡಿದ್ದಾರೆ. ಅವರ ಕರೆಯನ್ನು ಎಲ್ಲರೂ ಪಾಲಿಸುವ ಮೂಲಕ ಶ್ರೀರಾಮನಿಗೆ ನಮನ ಸಲ್ಲಿಸಬೇಕು ಎಂದು ತಿಳಿಸಿದರು.

ರಾಜ್ಯ ಸರ್ಕಾರವು ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು ಬಸವ ಭಕ್ತರಿಗೆ ಸಂತೋಷ ತಂದಿದೆ. ಹೋಮ-ಹವನ ಮಾಡುವುದು ಭಾರತೀಯ ವಿಶಿಷ್ಟ ಸಂಪ್ರದಾಯ. ಹೋಮದಲ್ಲಿ ವನಸ್ಪತಿಗಳನ್ನು ಬಳಕೆ ಮಾಡುತ್ತಿರುವುದರಿಂದ ದುಷ್ಟ ಶಕ್ತಿ ನಾಶವಾಗುತ್ತದೆ ಎಂದರು.

ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ಬುರಣಾಪೂರ ಯೋಗೇಶ್ವರಿ ಮಾತಾಜಿ, ಮುಖಂಡ ಕಲ್ಲು ಸೊನ್ನದ ಮಾತನಾಡಿದರು. ರಾಮತಾರಕ ಹೋಮವನ್ನು ಯೋಗೀಶ ಜೈನಿ, ಅಭಿಷೇಕ ಜೈನಿ, ಕೃಪಾಚಾರ್ಯ ಗಲಗಲಿ, ಹರೀಶ ಜೈನಿ, ದೇವದಾಸ ಹುಂಡೆಕರ ಅವರು ನೆರವೇರಿಸಿದರು. ಹೋಮದಲ್ಲಿ ೨೦೦ಕ್ಕೂ ಹೆಚ್ಚು ದಂಪತಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಇಂಗಳೇಶ್ವರದ ಭೃಂಗೀಶ್ವರ ಶಿವಾಚಾರ್ಯ ಸ್ವಾಮೀಜಿ, ಮಾತೃಶಕ್ತಿಯ ವಿಭಾಗ ಸಂಚಾಲಕಿ ಮಾಯಕ್ಕ ಚೌಧರಿ, ವಿಜಯಪುರ ಜಿಲ್ಲಾ ವಿಭಾಗ ಸಂಯೋಜಕ ಈರಣ್ಣ ಹಳ್ಳಿ, ಜಿಲ್ಲಾ ಸಂಯೋಜಕ ಸಂತೋಷ ಹಿರೇಮಠ, ಮಾತೃಶಕ್ತಿ ತಾಲೂಕು ಪ್ರಮುಖ ರೂಪಾ ಜಾಧವ, ಉಪಾಧ್ಯಕ್ಷೆ ವಿದ್ಯಾಶ್ರೀ ಬಡಿಗೇರ, ಸುಜಾತಾ ಬಂಡಾರಿ, ಸುನಂದ ಗಾಯಕವಾಡ, ಪ್ರಿಯಾ ರಜಪೂತ, ಶಕುಂತಲಾ ನಿಕ್ಕಂ, ಅನಿತಾ ಕನಸೆ, ರೂಪಾ ಒಡೆಯರ, ಶೃತಿ ಅರಸನಾಳ, ದುರ್ಗಾವಾಹಿನಿ ತಾಲೂಕು ಸಂಚಾಲಕಿ ಸ್ವಾತಿ ಪಾಟೀಲ, ವಿದ್ಯಾರ್ಥಿ ಪ್ರಮುಖ ಲಕ್ಷ್ಮೀ ವಸ್ತ್ರದ, ಅಶೋಕ ಹಾರಿವಾಳ, ಬಸವರಾಜ ಹಾರಿವಾಳ, ವಿವೇಕಾನಂದ ಕಲ್ಯಾಣಶೆಟ್ಟಿ, ಕೆ. ಗಂಗಾಧರ ಇದ್ದರು. ಪದ್ಮರಾಜ ಒಡೆಯರ ಸ್ವಾಗತಿಸಿದರು. ರಾಹುಲ ಜಗತಾಪ ನಿರೂಪಿಸಿದರು.

ತಮ್ಮಣ್ಣ ಬಡಿಗೇರ ಶಾಂತಿ ಮಂತ್ರ, ಜಯಘೋಷದೊಂದಿಗೆ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಬಸವಜನ್ಮ ಸ್ಮಾರಕದ ಮುಂಭಾಗದಿಂದ ಕುಂಭಮೇಳದ ಮೆರವಣಿಗೆಯೊಂದಿಗೆ ದಂಪತಿಗಳು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಿದರು.