ಬಂಟ್ವಾಳ: ಮಾಜಿ ಸಚಿವ ಬಿ. ರಮಾನಾಥ ರೈ ಅವರು ದೇವರಾಜ ಅರಸು ಅವರಂತಹ ಸಮಾಜಮುಖಿ ವ್ಯಕ್ತಿತ್ವದ ಗುಣಗಳನ್ನು ತಮ್ಮೊಳಗೆ ಅಳವಡಿಸಿಕೊಂಡಿದ್ದು, ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಗೌರವಿಸುವ ಸಲುವಾಗಿ ಎಲ್ಲರೂ ಒಟ್ಟಾಗಿ ಅವರ 75ನೇ ಹುಟ್ಟುಹಬ್ಬವನ್ನು ಆಚರಿಸುತ್ತಿರುವುದು ಅವರಿಗೆ ಸಲ್ಲಿಸುವ ಅತ್ಯುತ್ತಮ ಗೌರವವಾಗಿದೆ ಎಂದು ಪ್ರೊ. ತುಕಾರಾಮ್ ಪೂಜಾರಿ ಹೇಳಿದರು.
ಪ್ರಸ್ತಾವನೆಗೈದ ಹುಟ್ಟುಹಬ್ಬ ಆಚರಣಾ ಸಮಿತಿ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ, ಬಿ. ರಮಾನಾಥ ರೈ ಅವರ ಸಾಮಾಜಿಕ ಸೇವೆ ಅತ್ಯಂತ ಮಹತ್ವದ್ದಾಗಿದೆ. ಅವರ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಸಮಿತಿಯ ಮೂಲಕ ಅವರ 75ನೇ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿವೇತನ: ಹುಟ್ಟುಹಬ್ಬದ ಅಂಗವಾಗಿ 75 ಮಕ್ಕಳಿಗೆ ವಿದ್ಯಾರ್ಥಿವೇತನ, ವಿಶೇಷ ಚೇತನ ಮಕ್ಕಳಿಗೆ ಪೂರಕ ವ್ಯವಸ್ಥೆ, 75 ಗಿಡಗಳ ನೆಡುವ ಕಾರ್ಯಕ್ರಮ, ಆತ್ಮಚರಿತ್ರೆ ಬಿಡುಗಡೆ ಹಾಗೂ ಬೃಹತ್ ಆರೋಗ್ಯ ಮೇಳ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ ಎಂದು ಹೇಳಿದರು.ಬಳಿಕ ಮಾತನಾಡಿದ ಬಿ. ರಮಾನಾಥ ರೈ, ತಮ್ಮ ಮೇಲೆ ಜನರು ಇಟ್ಟಿರುವ ಪ್ರೀತಿ, ವಿಶ್ವಾಸ ಹಾಗೂ ಅಭಿಮಾನಕ್ಕೆ ತಾವು ಸದಾ ಋಣಿಯಾಗಿರುವುದಾಗಿ ಹೇಳಿದರು. ‘ನನ್ನ ಮೇಲೆ ನೀವು ಇಟ್ಟಿರುವ ಅಭಿಮಾನಕ್ಕೆ ನಾನು ಎಂದಿಗೂ ನಿಮಗೆ ಋಣಿಯಾಗಿದ್ದೇನೆ’ ಎಂದು ತಿಳಿಸಿದರು.
ಸಮಿತಿ ಸಂಚಾಲಕ ಪಿಯುಸ್ ಎಲ್. ರೋಡ್ರಿಗಸ್ ಸ್ವಾಗತಿಸಿದರು. ಬೇಬಿಕುಂದರ್ ವಂದಿಸಿದರು. ಬಾಲಕೃಷ್ಣ ಆಳ್ವ ನಿರೂಪಿಸಿದರು.