ಬೆಂಗಳೂರು : ನಗರದ ಜನತೆಗೆ ಬೀದಿ ನಾಯಿಗಳ ಕಾಟದ ಜೊತೆಗೆ ಈಗ ಎಲ್ಲೆಂದರಲ್ಲೇ ಬಿಸಾಡುವ ಕಸದಿಂದ ಬೀದಿಗಳಲ್ಲಿ ಇಲಿಗಳ ಕಾಟವನ್ನು ಎದುರಿಸುವಂತಾಗಿದೆ. ಇದು ಆರೋಗ್ಯ ಸಮಸ್ಯೆಗೂ ದಾರಿಯಾಗುತ್ತದೆ ಎಂಬ ದೂರುಗಳು ಕೇಳಿ ಬಂದಿವೆ.
ಎಚ್ಎಎಲ್ 2ನೇ ಹಂತದ 3ನೇ ಕ್ರಾಸ್ ರಸ್ತೆಯಲ್ಲಿ ಇಲಿಗಳ ಕಾಟ ಹೆಚ್ಚಾಗಿದೆ. ಇಲ್ಲಿ ಕಸವನ್ನು ಬಿಸಾಡಲಾಗುತ್ತಿದ್ದು, ಸರಿಯಾಗಿ ವಿಲೇವಾರಿ ಮಾಡುತ್ತಿಲ್ಲ. ಇದರಿಂದ ಇಲಿಗಳು ಹೆಚ್ಚಾಗಿವೆ. ಅದರಲ್ಲೂ ರಾತ್ರಿಯಾಗುತ್ತಿದ್ದಂತೆ ಇಲಿಗಳು, ದೊಡ್ಡ ಹೆಗ್ಗಣಗಳು ರಸ್ತೆಯಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದು, ಸಾರ್ವಜನಿಕರು ಭಯದಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇಲಿಗಳ ಕಾಟದ ಕುರಿತು ಹಲವು ಬಾರಿ ವೀಡಿಯೋ ಮಾಡಿ, ಫೋಟೋಗಳನ್ನು ತೆಗೆದು ಜಿಬಿಎಗೆ ದೂರು ನೀಡಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ಜನರು ದೂರಿದ್ದಾರೆ.ನಗರದ ವಿವಿದೆಡೆ ಕಸ ಬಿಸಾಡುವ ಸ್ಥಳಗಳಲ್ಲಿ, ಬೀದಿ ಬದಿ ತಳ್ಳು ಗಾಡಿಗಳ ಬಳಿ ಕಸವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡದ ಕಾರಣ ಇಲಿಗಳ ಕಾಟ ಹೆಚ್ಚಾಗುತ್ತಿದೆ. ಕಸವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿದರೆ, ಇಲಿಗಳ ಕಾಟ ಕಡಿಮೆಯಾಗುತ್ತದೆ ಎಂದು ಸಾರ್ವಜನಿಕರು ಹೇಳಿದ್ದಾರೆ.