ಕವಿತೆ ಓದುವುದು ಒಂದು ಕಲೆ: ಸಾಹಿತಿ ಸತೀಶ ಕುಲಕರ್ಣಿ

KannadaprabhaNewsNetwork | Published : Feb 21, 2024 2:03 AM

ಸಾರಾಂಶ

ಕವಿತೆ ಓದುವುದು ಒಂದು ಕಲೆ. ಅದನ್ನು ಅನುಭವಿಸಿ ವಾಚಿಸಿದಾಗ ಮಾತ್ರ ಆಪ್ತವಾಗುತ್ತದೆ. ಹೃದಯಕ್ಕೆ ತಟ್ಟುವ ಕಾವ್ಯ ರಚಿಸಿದ ತೃಪ್ತಿಯಿದೆ.

ಕನ್ನಡಪ್ರಭ ವಾರ್ತೆ ಹಾವೇರಿ

ಕವಿತೆ ಓದುವುದು ಒಂದು ಕಲೆ. ಅದನ್ನು ಅನುಭವಿಸಿ ವಾಚಿಸಿದಾಗ ಮಾತ್ರ ಆಪ್ತವಾಗುತ್ತದೆ. ಹೃದಯಕ್ಕೆ ತಟ್ಟುವ ಕಾವ್ಯ ರಚಿಸಿದ ತೃಪ್ತಿಯಿದೆ ಎಂದು ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.

ನಗರದ ಹಂಚಿನಮನಿ ಆರ್ಟ್ ಗ್ಯಾಲರಿಯಲ್ಲಿ ಹುತಾತ್ಮ ಮೈಲಾರ ಮಹದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ ಹಂಚಿನಮನಿ ಆರ್ಟ್ ಗ್ಯಾಲರಿ ಆಶ್ರಯದಲ್ಲಿ ಜರುಗಿದ ತಮ್ಮ ಕವಿತೆಗಳ ವಾಚನ ಸಮಾರಂಭದಲ್ಲಿ ಮಾತನಾಡಿದ ಅವರು, ಕಳೆದ ಐವತ್ತು ವರ್ಷಗಳಿಂದ ಕಾವ್ಯ ರಚಿಸುತ್ತಿರುವೆ. ಮೊದಲ ಕವಿತೆ ಬೇರಿನಿಂದ ಇತ್ತೀಚಿನ ಅಮೆರಿಕಾ ಕವಿತೆವರೆಗೆ ಕಾವ್ಯ ಲೋಕದಲ್ಲಿ ಪಯಣಿಸಿರುವೆ. ಆಯಾ ಕಾಲಕ್ಕೆ ಸಂಬಂಧಿಸಿದ ಕವಿತೆಗಳು ಇಂದಿಗೂ ಜೀವಂತಿಕೆ ಉಳಿಸಿಕೊಂಡಿವೆ ಎಂಬ ಸಂತೃಪ್ತ ಭಾವ ನನ್ನದು ಎಂದರು.

ಲೇಖಕಿ ಮಹಾದೇವಿ ಕಣವಿ ಮಾತನಾಡಿ, ಸಾಹಿತಿ ಸತೀಶ ಕುಲಕರ್ಣಿ ಹೆಂಗರುಳಿನ ಕವಿ. ಅದಕ್ಕಾಗಿ ಅವರ ಕಾವ್ಯಗಳಲ್ಲಿ ಸ್ತ್ರೀ ಸಂವೇದನೆಯಿದೆ. ಹೆಣ್ಣಿನ ಬದುಕಿನ ಸೂಕ್ಷ್ಮತೆಯಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಿವಿಲ್ ಎಂಜಿನಿಯರ್ ಎಚ್.ಎಸ್. ಮಹದೇವ ಮಾತನಾಡಿ, ಸಮಯಪ್ರಜ್ಞೆ, ತ್ಯಾಗ, ಅರ್ಪಣಾ ಮನೋಭಾವದ ಸತೀಶ ಕುಲಕರ್ಣಿ ಅವರನ್ನು ಚಿಕ್ಕಂದಿನಿಂದಲೂ ಬಲ್ಲೆ. ಅವರಲ್ಲಿನ ಸಾಮಾಜಿಕ ಬದ್ಧತೆ ಮೆಚ್ಚುವಂಥದ್ದು ಎಂದರು.

ಕಲಾವಿದ ಕರಿಯಪ್ಪ ಹಂಚಿನಮನಿ ಮಾತನಾಡಿ, ಸಾಮಾಜಿಕ ನ್ಯಾಯಕ್ಕೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡ ಸತೀಶ ಕುಲಕರ್ಣಿ ಅವರ ಕವಿತೆಗಳನ್ನು ಅರಿತುಕೊಳ್ಳಲು ಇದೊಂದು ಅವಕಾಶ ಎಂದರು.

ಕೆಪಿಎಸ್‌ಸಿ ಸದಸ್ಯ ಡಾ. ಎಚ್.ಎಸ್. ನರೇಂದ್ರ ಚಾಲನೆ ನೀಡಿದರು. ಹುತಾತ್ಮ ಮೈಲಾರ ಮಹದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟಿ ವಿ.ಎನ್. ತಿಪ್ಪನಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಿ.ಎಸ್. ಮರಳಿಹಳ್ಳಿ, ಈರಣ್ಣ ಬೆಳವಡಿ, ಮಹಾಂತೇಶ ಮರಿಗೂಳಪ್ಪನವರ, ಜಿ.ಎಂ. ಓಂಕಾರಣ್ಣನವರ, ವಾಗೀಶ ಹೂಗಾರ, ಮಹಾಂತೇಶ ಕರ್ಜಗಿ, ಜಗದೀಶ ಚವಟಗಿ, ಶೇಖರ ಭಜಂತ್ರಿ, ರೇಖಾ ಭೈರಕ್ಕನವರ, ಎಂ.ಕೆ. ಭಾಗ್ಯಾ, ರೇಣುಕಾ ಗುಡಿಮನಿ, ಪರಿಮಳಾ ಜೈನ್, ಅಕ್ಕಮಹಾದೇವಿ ಹಾನಗಲ್ಲ, ಸಿದ್ದೇಶ್ವರ ಹುಣಸಿಕಟ್ಟಿಮಠ, ಸೋಮನಾಥ ಡಿ, ಅಲಾಭಕ್ಷ, ಅಶ್ವಿನಿ ಕುಸಗೂರ ಕವನ ವಾಚಿಸಿದರು.

ಇದೇ ಸಂದರ್ಭದಲ್ಲಿ ಸಾಹಿತಿ ಸತೀಶ ಕುಲಕರ್ಣಿ ಮತ್ತು ಕಾಂಚನಾ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.

ಪ್ರತೀಕಾ ಆರ್. ನಿರೂಪಿಸಿದರು. ಪೃಥ್ವಿರಾಜ ಬೆಟಗೇರಿ ಸ್ವಾಗತಿಸಿದರು. ಚಂದ್ರಶೇಖರ ಮಾಳಗಿ ವಂದಿಸಿದರು.

Share this article