ಮಾಗಡಿ: ತಾಲೂಕಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳ ವಿರುದ್ಧ ನಾನು ದಾಖಲೆ ಸಮೇತವಾಗಿಯೇ ಆರೋಪ ಮಾಡಿದ್ದೇನೆ. ನಾನು ರಾಜಕೀಯಕ್ಕೆ ಬಂದ ನಂತರ ಶಾಸಕ ಎಚ್.ಸಿ.ಬಾಲಕೃಷ್ಣ ಹಾಗೂ ಅವರ ಸಹೋದರ ಎಚ್.ಎನ್.ಅಶೋಕ್ ವಿರುದ್ಧ ಮಾಡಿರುವ ಆರೋಪಗಳಿಗೆ ದಾಖಲೆ ಸಮೇತ ಉತ್ತರ ಕೊಡಲು ಸಿದ್ದನಿದ್ದು, ಬಹಿರಂಗ ಚರ್ಚೆಗೆ ದಿನಾಂಕ ನಿಗದಿ ಮಾಡಲಿ ಎಂದು ಮಾಜಿ ಶಾಸಕ ಎ.ಮಂಜುನಾಥ್ ಶಾಸಕರಿಗೆ ಸವಾಲು ಹಾಕಿದರು
ಮಾಗಡಿ: ತಾಲೂಕಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳ ವಿರುದ್ಧ ನಾನು ದಾಖಲೆ ಸಮೇತವಾಗಿಯೇ ಆರೋಪ ಮಾಡಿದ್ದೇನೆ. ನಾನು ರಾಜಕೀಯಕ್ಕೆ ಬಂದ ನಂತರ ಶಾಸಕ ಎಚ್.ಸಿ.ಬಾಲಕೃಷ್ಣ ಹಾಗೂ ಅವರ ಸಹೋದರ ಎಚ್.ಎನ್.ಅಶೋಕ್ ವಿರುದ್ಧ ಮಾಡಿರುವ ಆರೋಪಗಳಿಗೆ ದಾಖಲೆ ಸಮೇತ ಉತ್ತರ ಕೊಡಲು ಸಿದ್ದನಿದ್ದು, ಬಹಿರಂಗ ಚರ್ಚೆಗೆ ದಿನಾಂಕ ನಿಗದಿ ಮಾಡಲಿ ಎಂದು ಮಾಜಿ ಶಾಸಕ ಎ.ಮಂಜುನಾಥ್ ಶಾಸಕರಿಗೆ ಸವಾಲು ಹಾಕಿದರು.
ಸುದ್ದಿದಾರೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ಹೇಳುವವರು ಕೇಳುವವರು ಇಲ್ಲದಂತಾಗಿದ್ದು, ವಿರೋಧ ಪಕ್ಷದವರು ತಾಲೂಕಲ್ಲಿ ನಡೆಯುತ್ತಿರುವ ಕಾಮಗಾರಿಗಳು ಇವರ ಸಹೋದರರೇ ಮಾಡುತ್ತಿದ್ದು, ಈ ಬಗ್ಗೆ ಪ್ರಶ್ನಸಿದರೆ, ಅಭಿವೃದ್ಧಿ ವಿರೋಧಿಗಳೆಂದು ಪಟ್ಟ ಕಟ್ಟುತ್ತಾರೆ. ನಾನು ಮಾಡಿರುವ ಎಲ್ಲಾ ಆರೋಪಗಳಿಗೂ ದಾಖಲೆ ಸಮೇತ ಉತ್ತರ ನೀಡಲು ಸಿದ್ದನಿದ್ದೇನೆ. ತಾಲೂಕಿನ ಚಕ್ರಬಾವಿ ವಿಎಸ್ಎಸ್ ಎನ್ ಕಚೇರಿಯಲ್ಲಿ ಬಹಿರಂಗ ಚರ್ಚೆಗೆ ಬರಲಿ ನಾನು ದಾಖಲೆ ಬಿಡುಗಡೆ ಮಾಡುತ್ತೇನೆ. ಸುಖಾಸುಮ್ಮನೆ ಬಿಡಿಸಿಸಿ ಬ್ಯಾಂಕ್ ಎಚ್.ಎನ್.ಅಶೋಕ್ ನನ್ನ ವಿರುದ್ಧ ಟೀಕೆ ಮಾಡುತ್ತಿದ್ದು ನಾನು ಇವರಿಗೆ ಉತ್ತರ ಕೊಡಬೇಕಾಗಿಲ್ಲ. ಶಾಸಕರು ಬೇಕಾದರೆ ಪ್ರಶ್ನೆ ಮಾಡಲಿ ಅವರಿಗೆ ಉತ್ತರ ಕೊಡುತ್ತೇನೆ. ಲೂಟಿ ಮಾಡಿರುವ ಅಶೋಕ್ ಬಂಡವಾಳ ಬಿಚ್ಚಿಡುತ್ತೇನೆ. ಅಧಿಕಾರದಲ್ಲಿದ್ದೇನೆಂದು ದರ್ಪ, ಅದು ಶಾಶ್ವತವಲ್ಲ. ನಮಗೂ ಅಧಿಕಾರ ಬರಲಿದೆ. ಆಗ ಇವರ ಬಂಡವಾಳ ದಾಖಲೆ ಸಮೇತ ನೀಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆರೆಯ ನವೀಕರಣದಲ್ಲಿ ಲೂಟಿ: ಪಟ್ಟಣದ ಗೌರಮ್ಮನ ಕೆರೆಯ ಮಣ್ಣನ್ನು ಶಾಸಕರ ಹಿಂಬಾಲಕರು ತಲಾ ₹5,000ದಂತೆ ಮಾರಿ ಹಣ ಮಾಡಿಕೊಳ್ಳುತ್ತಿದ್ದಾರೆ. ಅಂದಾಜು ₹ 16 ಕೋಟಿ ವೆಚ್ಚದ ಕಾಮಗಾರಿ ಮಾಡುತ್ತಿದ್ದು, ಈಗಾಗಲೇ ₹ 5 ರಿಂದ ₹ 6 ಕೋಟಿ ಬಿಲ್ ಮಾಡಲಾಗಿದೆ. ಮಣ್ಣಿನಲ್ಲೂ ಹಣ ಮಾಡಲು ಹೊರಟವರಿಗೆ ನಾಚಿಕೆಯಾಗಬೇಕು ಎಂದು ಆರೋಪಿಸಿದರು.
ಕೋಟೆ ಅಭಿವೃದ್ಧಿ ಹೆಸರಲ್ಲಿ ಹಣ:
ಮಾಗಡಿ ಕೋಟೆಯ ಅಭಿವೃದ್ಧಿಗೆ ₹ 103 ಕೋಟಿ ಅಂದಾಜು ಪಟ್ಟಿ ಮಾಡಿದ್ದು, ಇದು ಕೇವಲ ಹಣ ಹೊಡೆಯುವ ತಂತ್ರ. ಕೋಟೆಗೆ ಇಷ್ಟು ದೊಡ್ಡ ಮೊತ್ತದ ಅಗತ್ಯವಿಲ್ಲ, ಆ ಹಣ ಕೆರೆಗಳನ್ನು ತುಂಬಿಸಲು ಬಳಸಬಹುದಿತ್ತು. ನಾನು ಕೋಟೆಯ ಅಭಿವೃದ್ಧಿಗೆ ವಿರೋಧಿ ಅಲ್ಲ, ಇಷ್ಟು ದೊಡ್ಡ ಮೊತ್ತದ ಅವಶ್ಯಕತೆ ಇರಲಿಲ್ಲ. ಇವರ ಮನೆ ಖಜಾನೆ ತುಂಬಿಸಲು ಕಾಮಗಾರಿ ಮಾಡುತ್ತಿದ್ದಾರೆಂದು ಆರೋಪಿಸಿದರು.
52 ಸಾವಿರ ಮತಗಳಿಂದ ಸೋತಿದ್ದರು: ಶಾಸಕ ಬಾಲಕೃಷ್ಣರು 2018 ಚುನಾವಣೆಯಲ್ಲಿ 52,000 ಮತಗಳಿಂದ ಸೋತಿದ್ದರು. ನಾನು 2 ಬಾರಿ 13 ಸಾವಿರ ಮತ್ತು 11 ಸಾವಿರ ಮತಗಳಿಂದ ಸೋತಿದ್ದೇನೆ. ಮುಂದಿನ 2028ರ ಚುನಾವಣೆಯಲ್ಲಿ ಕ್ಷೇತ್ರದ ಜನತೆ ನನ್ನ ಪರ ನಿಲ್ಲುತ್ತಾರೆ, ನಾನು ಒಂದು ವೇಳೆ 25,000 ಮತಗಳಿಂದ ಸೋತರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. 2028ರಲ್ಲಿ ಶಾಸಕ ಬಾಲಕೃಷ್ಣರಿಗೆ ತಕ್ಕ ಉತ್ತರ ಕ್ಷೇತ್ರದ ಜನರೇ ನೀಡಲಿದ್ದಾರೆಂದು ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.