ಬಿಜೆಪಿ ಟಿಕೆಟ್‌ ಪುನರ್‌ ಪರಿಶೀಲಿಸಿ: ಮಾಜಿ ಸಂಸದ ಬಿ.ವಿ.ನಾಯಕ

KannadaprabhaNewsNetwork |  
Published : Mar 28, 2024, 12:46 AM IST
27ಕೆಪಿಆರ್‌ಸಿಆರ್ 03  | Kannada Prabha

ಸಾರಾಂಶ

ಕ್ಷೇತ್ರದಲ್ಲಿ ಜನಾಭಿಪ್ರಾಯ ಸಂಗ್ರಹಿಸಿ ಯಾರ ಪರ ಒಲವಿದೆ ಅವರಿಗೆ ಟಿಕೆಟ್‌ ನೀಡಬೇಕು. ಇಲ್ಲವಾದರೆ ಬೆಂಬಲಿಗರ ತೀರ್ಮಾನಕ್ಕೆ ಬದ್ಧ ಎಂದು ಕಾರ್ಯಕರ್ತರ, ಹಿತೈಷಿಗಳ, ಅಭಿಮಾನಿಗಳ ಚಿಂತನಾ ಸಭೆಯಲ್ಲಿ ಮಾಜಿ ಸಂಸದ ಬಿ.ವಿ.ನಾಯಕ ಅಭಿಮತ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಬಿಜೆಪಿ ಹಿರಿಯ ಮುಖಂಡರು ಟಿಕೆಟ್ ಭರವಸೆ ನೀಡಿ ಕೊನೆಗೆ ಸಮೀಕ್ಷೆಗಳಲ್ಲಿ ನಕರಾತ್ಮಕ ಫಲಿತಾಂಶ ಬಂದಿರುವ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕಗೆ ಮತ್ತೊಮ್ಮೆ ಟಿಕೆಟ್‌ ನೀಡಿದ್ದು, ಕೂಡಲೇ ಪುನರ್‌ ಪರಿಶೀಲನೆ ನಡೆಸಿ, ಕ್ಷೇತ್ರದಲ್ಲಿ ಜನಾಭಿಪ್ರಾಯ ಸಂಗ್ರಹಿಸಿ ಯಾರ ಪರ ಒಲವಿದೆ ಅವರಿಗೆ ಟಿಕೆಟ್‌ ನೀಡಬೇಕು. ಇಲ್ಲವಾದಲ್ಲಿ ಬೆಂಬಲಿಗರು ಯಾವುದೇ ತೀರ್ಮಾನ ತೆಗೆದುಕೊಂಡರು ಅದಕ್ಕೆ ಬದ್ಧನಾಗಿರಬೇಕಾಗುತ್ತದೆ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ, ಮಾಜಿ ಸಂಸದ ಬಿ.ವಿ.ನಾಯಕ ತಿಳಿಸಿದರು.

ಸ್ಥಳೀಯ ಖಾಸಗಿ ಹೋಟೆಲ್‌ನ ಸಭಾಂಗಣದಲ್ಲಿ ಬುಧವಾರ ಕಾರ್ಯಕರ್ತರ, ಹಿತೈಷಿಗಳ, ಅಭಿಮಾನಿಗಳ ಚಿಂತನಾ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಬಿಟ್ಟು ಬಂದು ಬಿಜೆಪಿ ಸೇರಿ ಕಡಿಮೆ ಅವಧಿಯಲ್ಲಿ ಮಾನ್ವಿ ಕ್ಷೇತ್ರದಲ್ಲಿ ಸಮರ್ಥವಾದ ಸ್ಪರ್ಧೆ ನೀಡಿದೆ. ಸೋಲಿನ ನಂತರ ನಮ್ಮಪಾಡಿಗೆ ನಾವಿದ್ದಾಗ ಬಿಜೆಪಿ ಹಿರಿಯ ಮುಖಂಡರು ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್‌ ನೀಡುವ ಭರವಸೆ ಕೊಟ್ಟಿದ್ದರು. ಆದರೆ ಇದೀಗ ಕ್ಷೇತ್ರದಲ್ಲಿ ಸಂಚರಿಸದ, ಜನಸಂಪರ್ಕವಿಲ್ಲದ ಐದು ವರ್ಷಗಳ ಕಾಲ ಮರೆಯಾಗಿದ್ದ ಹಾಲಿ ಸಂಸದರಿಗೆ ಮತ್ತೊಮ್ಮೆ ಟಿಕೆಟ್‌ ನೀಡಿರುವುದು ಖಂಡನೀಯ ವಿಷಯವಾಗಿದೆ. ಪಕ್ಷವೇ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಬಿ.ವಿ.ನಾಯಕ ಗೆಲವು ಖಚಿತವೆಂದು ಬಂದರೂ ಸಹ ರಾಜ್ಯ ಮತ್ತು ರಾಷ್ಟ್ರೀಯ ಮುಖಂಡರು ಅದನ್ನು ಪರಿಗಣಿಸದೇ ಟಿಕೆಟ್‌ ಕೈತಪ್ಪುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.

ಪಕ್ಷದ ನಾಯಕರು ಸಮೀಕ್ಷೆಯನ್ನು ಮರು ಪರಿಶೀಲನೆ ಮಾಡಬೇಕು. ಈ ಬಗ್ಗೆ ಸೂಕ್ತ ಕ್ರಮಕ್ಕೆ ಮುಂದಾಗದೇ ಇದ್ದರೆ, ಸ್ವಾಭಿಮಾನಕ್ಕೆ ಧಕ್ಕೆಯಾದರೆ, ಬೆಂಬಲಿಗರ ಹಾಗೂ ಅಭಿಮಾನಿಗಳ ತೀರ್ಮಾನದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಎಲ್ಲ ಕಾರ್ಯಕರ್ತರು ಗ್ರಾಮಮಟ್ಟದಲ್ಲಿ ಜಾಗೃತಿ ಮೂಡಿಸಬೇಕು. ನನ್ನನ್ನು ಬೆಂಬಲಿಸುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮತದಾರರಿಗೆ ಮಟ್ಟಿಸಬೇಕು. ಅಲ್ಲದೇ ಪಕ್ಷದ ರಾಜ್ಯ ನಾಯಕರಿಗೆ ಕಣ್ಣು ತೆರೆಸುವ ಕೆಲಸ ಮಾಡಬೇಕು ಎಂದರು.

ಸಭೆಯಲ್ಲಿ ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್, ಮುಖಂಡರಾದ ಮಲ್ಲಿಕಾರ್ಜುನ ಜಕ್ಕಲದಿನ್ನಿ, ತಿಮ್ಮಾರೆಡ್ಡಿ ಬೋಗಾವತಿ, ಜಂಬಣ್ಣ ನೀಲಗಲ್, ಅನಿತಾ ಬಸವರಾಜ, ಅನಿಲ್ ಕುಮಾರ, ಗುರು ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಆಗಮಿಸಿದ್ದ ಕಾರ್ಯಕರ್ತರು, ಬೆಂಬಲಿಗರು ಇದ್ದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ