ಶರಣಬಸವೇಶ್ವರ ಪುರಾಣದಲ್ಲಿ ಕುರಾನ ಪಠಣ

KannadaprabhaNewsNetwork |  
Published : Sep 10, 2024, 01:37 AM IST
೯ಕೆಆರ್‌ಟಿ ೧ಸಿ: | Kannada Prabha

ಸಾರಾಂಶ

ಇಲ್ಲಿನ ಆರಾಧ್ಯ ದೈವ ಶ್ರೀಶರಣಬಸವೇಶ್ವರ ದೇವಸ್ಥಾನದಲ್ಲಿ ಕಳೆದ ಐದು ದಶಕಗಳಿಂದ ಶ್ರಾವಣಮಾಸದ ನಿಮಿತ್ತ ನಡೆಯುವ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಭಾನುವಾರ ರಾತ್ರಿ ಕುರಾನ ಪಠಣ ಮಾಡುವ ಮೂಲಕ ಭಾವೈಕ್ಯತೆ ಸಾರಿದ್ದು, ಈ ಘಳಿಗೆಗೆ ನೂರಾರು ಭಕ್ತರು ಸಾಕ್ಷಿಯಾದರು.

ಭಾವೈಕ್ಯತೆಗೆ ಸಾಕ್ಷಿ । 5 ದಶಕಗಳಿಂದ ಕಾರಟಗಿಯಲ್ಲಿ ನಡೆಯುತ್ತಿರುವ ಶರಣಬಸವೇಶ್ವರ ಚರಿತಾಮೃತ ಪುರಾಣ

ಕನ್ನಡಪ್ರಭ ವಾರ್ತೆ ಕಾರಟಗಿ

ಇಲ್ಲಿನ ಆರಾಧ್ಯ ದೈವ ಶ್ರೀಶರಣಬಸವೇಶ್ವರ ದೇವಸ್ಥಾನದಲ್ಲಿ ಕಳೆದ ಐದು ದಶಕಗಳಿಂದ ಶ್ರಾವಣಮಾಸದ ನಿಮಿತ್ತ ನಡೆಯುವ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಭಾನುವಾರ ರಾತ್ರಿ ಕುರಾನ ಪಠಣ ಮಾಡುವ ಮೂಲಕ ಭಾವೈಕ್ಯತೆ ಸಾರಿದ್ದು, ಈ ಘಳಿಗೆಗೆ ನೂರಾರು ಭಕ್ತರು ಸಾಕ್ಷಿಯಾದರು.

ಪ್ರತಿ ವರ್ಷ ದೇವಸ್ಥಾನದಲ್ಲಿ ಶ್ರಾವಣಮಾಸದ ನಿಮಿತ್ತ ೪೫ ದಿನಗಳ ಕಾಲ ಶರಣಬಸವೇಶ್ವರ ಚರಿತಾಮೃತ ಪುರಾಣ ಪ್ರವಚನ ನಡೆಯುತ್ತದೆ. ಪುರಾಣ ಮಂಗಲ ಮಹೋತ್ಸವ ಮತ್ತು ಜೋಡು ರಥೋತ್ಸವದಲ್ಲಿ ಪಟ್ಟಣ ಸೇರಿದಂತೆ ಸುತ್ತಲಿನ ಮುಸ್ಲಿಂ ಸಮುದಾಯದವರು ಹೊರಗಡೆಯಿಂದ ಉತ್ಸವಗಳಿಗೆ ಸಹಕಾರ ನೀಡುತ್ತಾ ಬಂದಿದ್ದರು. ಗಂಗೆ ಸ್ಥಳಕ್ಕೆ ಹೋಗಿ ಬರುವ ಬೃಹತ್ ಪಲ್ಲಕ್ಕಿ ಉತ್ಸವದ ವೇಳೆ ಮುಸ್ಲಿಂ ಸಮುದಾಯದವರು ಪಲ್ಲಕಿ, ಕುಂಭ, ಕಳಸ ಹೊತ್ತ ಮಹಿಳೆಯರಿಗೆ, ಡೊಳ್ಳು, ತಾಷೆ ಕುಣಿತದ ಕಲಾವಿದರಿಗೆ ದಾರಿಯೂದ್ದಕ್ಕೂ ಕುಡಿವ ನೀರು, ಪಾನಕದ ಸೇವೆ ಮಾಡುತ್ತಿದ್ದರು. ಆದರೆ ಮುಸ್ಲಿಂರ್‍ಯಾರೂ ಸಹ ದೇವಸ್ಥಾನದೊಳಗೆ, ಪುರಾಣ ಪ್ರವಚನ ಕೇಳುವುದಕ್ಕೆ ದೇವಸ್ಥಾನ ಪ್ರವೇಶ ಮಾಡಿರಲಿಲ್ಲ.

ಆದರೆ, ಈ ಬಾರಿ ಪುರಾಣ ಪ್ರವಚನ ಸುವರ್ಣ ಮಹೋತ್ಸವಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಎಲ್ಲ ಮುಖಂಡರು ಭಾನುವಾರ ರಾತ್ರಿ ದೇವಸ್ಥಾನಕ್ಕೆ ಆಗಮಿಸಿ ಸುಮಾರು 2 ಗಂಟೆಗಳ ಕಾಲ ಶರಣಬಸವೇಶ್ವರ ಚರಿತಾಮೃತ ಪುರಾಣ ಆಲಿಸಿದರು.

ನಂತರ ಮುಸ್ಲಿಂ ಸಮಾಜದವರು ಪುರಾಣ ಕಟ್ಟೆಯನ್ನು ಏರಿ ಮೊದಲಿಗೆ ಕುರಾನ ಪಠಣ ಮಾಡಿದರು. ಇದಕ್ಕೆ ನೆರೆದಿದ್ದ ನೂರಾರು ಜನರು ಸಾಕ್ಷಿಯಾದರು. ಕಾರಟಗಿ ಇತಿಹಾಸದಲ್ಲಿಯೇ ಮೊದಲ ಬಾರಿ ಇಂಥ ಅಪರೂಪದ ಕ್ಷಣವನ್ನು ಕಣ್ಣಾರೆ ಕಂಡು ಎಲ್ಲರೂ ಭಾವೈಕ್ಯತೆ ಸಾರಿದರು. ಪುರಾಣ ಪ್ರವಚನಕಾರ ವೇ.ಮೂ. ಪಂಡಿತ ಸಿದ್ದೇಶ್ವರ ಶಾಸ್ತಿ, ಸಂಗೀತಕಾರ ಮನೋಹರ್ ಪಿ.ಹಿರೇಮಠ, ಚಂದ್ರಯ್ಯಸ್ವಾಮಿ ಹಿರೇಮಠ ಮತ್ತು ಪುರಾಣ ಸಮಿತಿ ಮುಖ್ಯಸ್ಥ ಕುಳಗಿ ಗುಂಡಪ್ಪ, ವೇ.ಮರಳಸಿದ್ದಯ್ಯಸ್ವಾಮಿ ಅವರಿಗೆ ಸನ್ಮಾನಿಸಿದರು.

ಇದಕ್ಕೆ ಪ್ರತಿಯಾಗಿ ಪುರಾಣ ಸಮಿತಿ ಇಸ್ಲಾಂ ಧರ್ಮದ ಧಾರ್ಮಿಕ ಗುರು ಸಾದಿಕ್‌ಸಾಬ್, ಗುಲಾಮ ಹುಸೇನ್ ಖಾಜಿ, ಜಾಮಿಯಾ ಮಸೀದ್ ಅಧ್ಯಕ್ಷ ಅಬ್ದುಲ್ ಗನಿಸಾಬ್ ಅವರನ್ನು ಸನ್ಮಾನಿಸಿತು. ಈ ವೇಳೆ ಪುರಾಣ ಸಮಿತಿಯ ಗದ್ದಿ ಶರಣಪ್ಪ, ಬಾಬುಸಾಬ್ ಬಳಿಗಾರ್, ಖಾಜಾ ಹುಸೇನ್ ಮುಲ್ಲಾ, ಖಲಂದರ್‌ಸಾಬ್, ಮಹ್ಮದ್ ಇಬ್ರಾಹಿಂ, ಯೂಸೂಫ್, ಮುಸ್ತಫಾ ಬೇವಿನಗಿಡಿದ್, ಅಮ್ರುಲ್ ಹುಸೇನ್, ತಾಹೀರ್ ಸೇರಿದಂತೆ ಇತರರಿದ್ದರು.ಭಾವೈಕ್ಯತೆಗೆ ಪುರಾಣ ಸಾಕ್ಷಿ॒:

ಶ್ರೀ ಶರಣಬಸವೇಶ್ವರರು ಗುಲಬರ್ಗಾದ ಖಾಜಾ ಬಂದೇನವಾಜ್ ದರ್ಗಾಕ್ಕೆ ಭೇಟಿ ನೀಡಿದ ವೇಳೆ ಅಲ್ಲಿದ್ದ ಮುಸ್ಲಿಂ ಸಮಾಜದವರೆಲ್ಲ ಸೇರಿ ದರ್ಗಾ ಪ್ರವೇಶಕ್ಕೆ ನಿರಾಕರಿಸಿ ಅವರನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಿ ಎಲ್ಲರೂ ಗಂಧ ಪೂಜೆಯಲ್ಲಿ ಪಾಲ್ಗೊಂಡರು. ಈ ವೇಳೆ ದರ್ಗಾದಲ್ಲಿ ಶ್ರೀಶರಣಬಸಪ್ಪ ಪ್ರತ್ಯಕ್ಷವಾಗಿ ಇಲ್ಲಿ ಗಂಧ ಲೇಪನ ಮಾಡಿ, ಅಲ್ಲಿ ಗಂಧ ಲೇಪನ ಮಾಡಿ ಎಂದರಂತೆ. ಆಗ ಅಲ್ಲಿದ್ದ ಎಲ್ಲರೂ ಎಚ್ಚೆತ್ತುಕೊಂಡು ಪವಾಡಪುರುಷ ಶರಣಬಸಪ್ಪನವರೊಂದಿಗೆ ನಡೆದುಕೊಂಡ ರೀತಿಗೆ ಕ್ಷಮಾಪಣೆ ಕೇಳಿ ಅವರಿಂದ ಪೂಜೆ ಮಾಡಿಸಿ ಭಾವೈಕ್ಯತೆ ಮೆರೆದರಂತೆ. ಅಂದಿನಿಂದ ಇಂದಿನವರೆಗೂ ದರ್ಗಾಕ್ಕೆ ಹಿಂದೂ-ಮುಸ್ಲಿಂ ಸಮುದಾಯದವರು ಒಂದಾಗಿ ಭೇಟಿ ನೀಡಿ ದರ್ಶನ ಮಾಡುವ ಪ್ರತೀತಿ ಇದೆ ಎಂದು ಪುರಾಣದ ಸನ್ನಿವೇಶವನ್ನು ಪುರಾಣ ಪ್ರವಚನಕಾರ ಪಂಡಿತ್ ಸಿದ್ದೇಶ್ವರ ಶಾಸ್ತಿ ಪ್ರಸ್ತುತ ಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ