ಕೊಪ್ಪಳ: ನಾಡಿನ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಗವಿಮಠದ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ಅಪಾರ ಪ್ರಮಾಣದಲ್ಲಿ ಭಕ್ತರು ಸೇವೆ ಮಾಡಲು ಸಾವಿರಾರು ಸಂಖ್ಯೆಯಲ್ಲಿ ಸ್ವಯಂ ಪ್ರೇರಿತವಾಗಿ ಆಗಮಿಸುತ್ತಿದ್ದಾರೆ. ಈ ವರ್ಷದ ಜಾತ್ರೆಯಲ್ಲಿ ಸೇವೆ ಮಾಡಲು ಆಗಮಿಸುವ ಭಕ್ತರಿಗೆ ಸೇವೆಗೆ ಮುಂಚಿತವಾಗಿ ನೋಂದಾಯಿಸಲು ಪ್ರಕಟಣೆ ನೀಡಿದ್ದಾರೆ.
ಈ ವರ್ಷದ ಜಾತ್ರೆಗೆ ಸ್ವ-ಇಚ್ಛೆಯಿಂದ ಸೇವೆ ಸಲ್ಲಿಸುವ ಭಕ್ತಗಣ ತಮ್ಮ ಹೆಸರು ನೋಂದಾಯಿಸಲು ಮೊಬೈಲ್ ಸಂಖ್ಯೆ ೯೮೪೪೬೩೪೯೯೦ ಸಂಪರ್ಕಿಸಲು ಗವಿಮಠ ಕೋರಿದೆ.
ಸ್ವಚ್ಛತಾ ಸೇವೆ, ಮಹಾದಾಸೋಹ ಸೇವೆಗಳಾದ ಅಡುಗೆ ಮಾಡುವುದು, ಪ್ರಸಾದ ಬಡಿಸುವುದು, ಹೀಗೆ ನಾನಾ ಪ್ರಸಾದ ಸೇವೆಗಳು, ಶಿಸ್ತು ಕರ್ತವ್ಯ ಸೇವೆ,ದಾಸ್ತಾನು ಸಂಗ್ರಹಣೆ ಸೇವೆ ಹಾಗೂ ನಾನಾ ಸೇವೆಗೆ ಭಕ್ತರು ಇಲ್ಲವೇ ಗ್ರಾಮಸ್ಥರು, ಸಂಘ ಸಂಸ್ಥೆಗಳು ಹೆಸರು ನೋಂದಾಯಿಸಲು ಕೋರಿದ್ದಾರೆ.ಆವರಣ ಸ್ವಚ್ಛತೆ: ಗವಿಸಿದ್ದೇಶ್ವರ ಜಾತ್ರೆಗೆ ಈಗಾಗಲೇ ಸಿದ್ಧತೆಗಳು ಜೋರಾಗಿ ಜರುಗುತ್ತಿದ್ದು, ಆವರಣ ಸ್ವಚ್ಛತೆ ಜರುಗುತ್ತಿದೆ. ಆವರಣದ ಸಮತಟ್ಟು ಮಾಡುವಿಕೆ, ಮಣ್ಣು ಹಾಕುವಿಕೆ ಕಾರ್ಯ ಜರುಗುತ್ತಿದೆ. ಅಲ್ಲದೆ ಈಗಾಗಲೇ ಮಹಾಪ್ರಸಾದ ಜರುಗುವ ಆವರಣ ಸಿದ್ಧತೆ ಸಹ ಜರುಗುತ್ತಿದೆ. ಈಗಾಗಲೇ ಅನೇಕ ಭಕ್ತರು ಜಾತ್ರಾ ಸೇವೆಗೆ ಬಂದು ಸೇವೆಯಲ್ಲಿ ತೊಡಗಿದ್ದಾರೆ.