ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆದ ಡಾ.ಶುಭಶ್ರೀ ಪ್ರಸಾದ್ ರಚಿಸಿರುವ ನೋಟಿನಾಚೆಗಿನ ನೋಟ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗಂಡ-ಹೆಂಡತಿ ಸಂಬಂಧ, ತಂದೆ, ತಾಯಿ-ಮಕ್ಕಳ ನಡುವಿನ ಬಾಂಧವ್ಯ ಹಳಸಿದೆ. ಅವಿಭಕ್ತ ಕುಟುಂಬದಲ್ಲಿನ ಪ್ರೀತಿ, ನಂಬಿಕೆ ಕಣ್ಮರೆಯಾಗಿದೆ, ಗುರು-ಹಿರಿಯರಿಗೆ ಆತ್ಮಪೂರ್ವಕವಾದ ಗೌರವ ಸಿಗದಂತಾಗಿದೆ. ಕೇವಲ ತೋರಿಕೆಗಷ್ಟೇ ಸೀಮಿತವಾದಂತೆ ಕೃತಕವೆಂಬಂತೆ ಕಂಡುಬರುತ್ತಿದೆ. ಜೀವನದ ಮೌಲ್ಯಗಳನ್ನು ಅರ್ಥೈಸಿಕೊಳ್ಳುವಲ್ಲಿ ಅಥವಾ ಅರ್ಥೈಸಿಕೊಡುವಲ್ಲಿ ವಿಫಲರಾಗಿರುವಂತೆ ಕಂಡುಬರುತ್ತಿದ್ದೇವೆ ಎಂದರು.ಇಂದಿನ ಜೆನ್ಝೀಗಳು ಎಂದು ಕರೆಯಲ್ಪಡುವ ಯುವಕರು ಸಂಸ್ಕೃತಿ-ಪರಂಪರೆಯಿಂದ ದೂರವೇ ಉಳಿದಿದ್ದಾರೆ. ಅದರ ಬಗ್ಗೆ ಅವರಿಗೆ ಪರಿಜ್ಞಾನವೇ ಇಲ್ಲ. ಅವರೆಲ್ಲರೂ ತಮ್ಮದೇ ಆದ ಲೋಕದಲ್ಲಿ ಮುಳುಗಿಹೋಗಿದ್ದಾರೆ. ಬದುಕು, ಜೀವನ, ಸಂಬಂಧಗಳು, ಸಂಸ್ಕೃತಿಯ ಪರಿಚಯವೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ಮೊಬೈಲ್ಯುಗ ಎಲ್ಲವನ್ನೂ ಮರೆಮಾಚುತ್ತಿದೆ ಎಂದರು.
ನಿವೃತ್ತ ಮುಖ್ಯ ಆಡಳಿತಾಧಿಕಾರಿ ತ.ನಾ.ಶಿವಕುಮಾರ್ ಮಾತನಾಡಿ, ನಮ್ಮಲ್ಲಿ ಸಂಸ್ಕಾರವಿದ್ದಾಗ ಮಾತ್ರ ಮಕ್ಕಳಿಗೆ ಸಂಸ್ಕಾರ ಬರಲು ಸಾಧ್ಯ. ನಮ್ಮ ನಡವಳಿಕೆಗಳು ಮಕ್ಕಳಿಗೆ ವಿಶ್ವವಿದ್ಯಾಲಯಗಳಾಗಬೇಕು. ನಮ್ಮ ನಡಳಿಕೆಯಲ್ಲಿ ವ್ಯತ್ಯಾಸವಿದ್ದರೆ ಮಕ್ಕಳಲ್ಲಿ ಉತ್ತಮ ನಡವಳಿಕೆ ಬರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಶುಭಶ್ರೀ ಅವರುಮ್ಮ ಪುಸ್ತಕದಲ್ಲಿ ಹಣ ಮತ್ತು ಬದುಕಿನ ಚಿತ್ರಣವನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಬಾಂಧವ್ಯ ಎಂದರೆ ಪ್ರೀತಿ-ಗೌರವ ಎಂದು ಸೊಗಸಾಗಿ ವರ್ಣಿಸಿದ್ದಾರೆ. ಹಣದ ಥೈಲಿಗೆ ಒಳಗಾದ ಮಕ್ಕಳು ತಂದೆ-ತಾಯಿಯನ್ನು ವೃದ್ಧಾಶ್ರಮಗಳಿಗೆ ಸೇರಿಸುವ, ಇಂಟರ್ನೆಟ್ ಮೂಲಕವೇ ಅಂತ್ಯಕ್ರಿಯೆ ವೀಕ್ಷಿಸುವಂತಹ ವಿಲಕ್ಷಣ ಘಟನೆಗಳನ್ನು ಕಾಣುತ್ತಿದ್ದೇವೆ. ಅದಕ್ಕಾಗಿ ಬದುಕಿನಲ್ಲಿ ಹಣವೇ ಪ್ರಧಾನವಾಗಬಾರದು. ಮೌಲ್ಯಗಳು ಜೀವನವನ್ನು ತುಂಬಿಕೊಳ್ಳಬೇಕು. ಸಂಬಂಧಗಳು ಸಂಯೋಜನೆಗೊಂಡು, ಬಾಂಧವ್ಯಗಳ ಬೆಸುಗೆಯಾದಾಗ ಜೀವನ ಸುಂದರವಾಗುತ್ತದೆ ಎಂದರು.