ವೈದ್ಯ ಡಾ.ಚಂದ್ರಶೇಖರ್ ಅವರ ’ಹೆಜ್ಜೆಗುರುತು’ ಕವನ ಸಂಕಲನ ಬಿಡುಗಡೆ

KannadaprabhaNewsNetwork |  
Published : Jun 02, 2026, 02:00 AM IST
31ಕೆಎಂಎನ್ ಡಿ25 | Kannada Prabha

ಸಾರಾಂಶ

ಹಳ್ಳಿಗಳಲ್ಲಿ ರಾಮಾಯಣ, ಮಹಾ ಭಾರತದಂತಹ ಕಥನಗಳನ್ನು ಜನರು ಓದದೇ ಅರ್ಥ ಮಾಡಿಕೊಂಡು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಇಂದು ಮಹಾಕಾವ್ಯಗಳನ್ನು ಎಷ್ಟೇ ಓದಿದರೂ ಕೆಲವರಿಗೆ ಹೆಚ್ಚು ಕಾಲ ನೆನಪಿನಲ್ಲಿ ಉಳಿಯುವುದೇ ಇಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಕೆವಿಎಸ್ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘ, ಸಿರಿ ಪ್ರಕಾಶನ ವತಿಯಿಂದ ವೈದ್ಯ ಡಾ.ಚಂದ್ರಶೇಖರ್ ಅವರ ಹೆಜ್ಜೆಗುರುತು ಕವನ ಸಂಕಲನ ಬಿಡುಗಡೆ ಮಾಡಲಾಯಿತು.

ಕೃತಿ ಬಿಡುಗಡೆ ಮಾಡಿದ ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ಮಾತನಾಡಿ, ಹಳ್ಳಿಗಳಲ್ಲಿ ರಾಮಾಯಣ, ಮಹಾ ಭಾರತದಂತಹ ಕಥನಗಳನ್ನು ಜನರು ಓದದೇ ಅರ್ಥ ಮಾಡಿಕೊಂಡು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಇಂದು ಮಹಾಕಾವ್ಯಗಳನ್ನು ಎಷ್ಟೇ ಓದಿದರೂ ಕೆಲವರಿಗೆ ಹೆಚ್ಚು ಕಾಲ ನೆನಪಿನಲ್ಲಿ ಉಳಿಯುವುದೇ ಇಲ್ಲ ಎಂದರು.

ವಾಲ್ಮೀಕಿಯಿಂದ ರಾಮ ಹಾಗೂ ವ್ಯಾಸರಿಂದ ಶ್ರೀಕೃಷ್ಣನ ಪರಿಚಯವಾಯಿತು. ಎಲ್ಲಿ ಹಾಡುಗಾರರು, ಗಮಕಿಗಳು ಇದ್ದಾರೋ ಅಲ್ಲಿ ಕಾವ್ಯಗಳು ಸಾವಿರಾರು ವರ್ಷ ರಾರಾಜಿಸುತ್ತವೆ ಎಂಬುದನ್ನು ಈಗಲೂ ಹಳ್ಳಿಗರು ಹೇಳುವ ಪುರಾಣಗಳು ತಿಳಿಸುತ್ತವೆ ಎಂದರು.

ಕವಿಯ ಪ್ರತಿಬಿಂಬವೇ ಕಾವ್ಯವಾಗಿದೆ. ಗೀಚಿದೆಲ್ಲವೂ ಕವಿತೆಗಳಾಗುವುದಿಲ್ಲ, ವೈಯಕ್ತಿಕ ಅನುಭವವು ಸಾರ್ವತ್ರಿಕ ಅನುಭವವಾಗಲು ಸಾಧ್ಯವಿದೆ. ಸನ್ನಿವೇಶಗಳನ್ನು ಕವಿಗಳು ಸೃಷ್ಟಿಸಿಕೊಡಬೇಕು ಎಂದು ಸಲಹೆ ನೀಡಿದರು.

ಸಾಹಿತ್ಯಕ್ಕೆ ಸಾವಿಲ್ಲ. ಕವಿ ದೊಡ್ಡವನೋ ಕಾವ್ಯ ದೊಡ್ಡದೋ ಎಂದರೆ ಕಾವ್ಯ ಕವಿಗಿಂತ ದೊಡ್ಡದು. ನಾವು ಮನುಷ್ಯರು ನಿಗದಿತ ಅವಧಿಗೆ ಮಾತ್ರ ಬದುಕುವವರು ಎಂದು ಕಾವ್ಯ ಮತ್ತು ಸಾಹಿತ್ಯದ ಕುರಿತು ವಿವರಿಸಿದರು.

ಡಾ.ಚಂದ್ರಶೇಖರ್ ಅವರು ವೈದ್ಯರಾದರೂ, ಸಮಾಜ, ಗೆಳೆಯರ ಬಗ್ಗೆ ಒಳ್ಳೆಯ ಮಾತುಗಳಿಂದ ಹೆಜ್ಜೆಗುರುತು ಕವನ ಸಂಗ್ರಹ ಕೃತಿಯಲ್ಲಿ ಬರೆದಿದ್ದಾರೆ. ಮತ್ತೊಬ್ಬರಿಗೆ ಒಳ್ಳೇದಾಗಲಿ ಎನ್ನುವ ಗುಣವೇ ಕಡಿಮೆ. ಈ ಕವಿತೆಗಳು ಜನರ ಕಷ್ಟಗಳನ್ನು ಹೇಳಿವೆ. ಇವರ ಕೃತಿಗೆ ಮುನ್ನುಡಿ ಬರೆದಿರುವುದು ತಮಗೆ ಸಮಾಧಾನವಿದೆ ಎಂದರು.

ಹೆಜ್ಜೆ ಗುರುತು ಪುಸ್ತಕ ಕೃರ್ತೃ ಡಾ.ಚಂದ್ರಶೇಖರ್ ಮಾತನಾಡಿ, ಇದು ನನ್ನ ನಾಲ್ಕನೇ ಕೃತಿ. ಗುರುರಾಜ ಕರಜಗಿ ಅವರೇ ಈ ಕೃತಿ ಲೋಕಾರ್ಪಣೆಗೆ ಅರ್ಹರೆಂದು ಭಾವಿಸಿದ್ದೇನೆ. ಓದುವುದು ರೋಮಾಂಚಕ ಎನಿಸಬೇಕಾದರೆ ಅಂತಹ ಕೃತಿಯನ್ನು ಸಾಹಿತಿಗಳು ಬರೆಯಬೇಕು. ಆಗ ಮಾತ್ರ ಓದು ಎಂಬುದು ರೋಮಾಂಚನ ಶಕ್ತಿ ಎನಿಸಿ ಬಿಡುತ್ತದೆ. ಮಾತಿನಲ್ಲಿ ಹುಟ್ಟಿದ್ದು ಗದ್ಯವಾದರೆ, ಆತ್ಮದಲ್ಲಿ ಹುಟ್ಟಿದ್ದು ಪದ್ಯ ಎಂಬುದನ್ನು ನನ್ನ ಕವನದಲ್ಲಿ ಹೇಳಿದ್ದೇನೆ ಎಂದು ವಿವರಿಸಿದರು.

ಸಮಾರಂಭದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಅಧ್ಯಕ್ಷತೆ ವಹಿಸಿದ್ದರು. ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ, ಖ್ಯಾತ ವೈದ್ಯರಾದ ಡಾ.ರಾಮಲಿಂಗೇಗೌಡ, ಡಾ.ವಿಜಯಾ, ಡಾ.ಬಿ.ಕೆ.ಸುರೇಶ್, ಎಂ.ಎಸ್.ಅನಿತಾ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದು ಮೇಲೆ ಎಲ್ಲೇ ಹಲ್ಲೆ ಆದ್ರೂ ಧರಣಿ: ಬಿವೈವಿ
ಅರ್ಹ ಮತದಾರರ ಹೆಸರು ಕೈಬಿಡದಂತೆ ನೋಡಿಕೊಳ್ಳಿ: ಡಾ. ಸಿ.ಟಿ.ರವಿ