ಟೋಪ ಜಾತ್ರೆ ಮೂಲಕ ಧರ್ಮ ಸಮನ್ವಯತೆ

KannadaprabhaNewsNetwork | Published : Jun 5, 2025 1:17 AM
ಭವ್ಯ ವೇದಿಕೆ, ಬಂದ ಭಕ್ತಾಧಿಗಳಿಗೆ ದಾಸೋಹ ಸೇವೆ ಸೇರಿದಂತೆ ಊರಿನ ಎಲ್ಲ ವರ್ಗದ ಜನರ ವಿಶ್ವಾಸಕ್ಕೆ ಪಡೆದು ಯಾವುದೇ ಜಾತಿ, ಮತ, ಪಂಥ ಇಲ್ಲದೆ ಎಲ್ಲರು ಸೇರಿಕೊಂಡು ಸೌಹಾರ್ಧತೆಯಿಂದ ಈ ಟೋಪ ಜಾತ್ರಾಮಹೋತ್ಸವದ ಯಶಸ್ವಿಗೆ ಶ್ರಮಿಸಿದವರಿಗೆ, ಎಲ್ಲ ಭಕ್ತರಿಗೆ ದೇವಿ ಕೃಪೆ ಸದಾವಕಾಲ ಇರಲಿ.

ಮುಳಗುಂದ: ಧರ್ಮ ಧರ್ಮಗಳ ಬೆಸೆಯುವ ಕೆಲಸ ಕಾನೂನಿನಡಿಯಲ್ಲಿ ಸಂಧಾನದ ಮೂಲಕ ಮಾಡುತ್ತೇವೆ, ಆದರೆ ಮುಳಗುಂದದಲ್ಲಿ ಟೋಪ ಜಾತ್ರೆ ಮೂಲಕ ಧರ್ಮ ಸಮನ್ವಯತೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.ಪಟ್ಟಣದ ಎಸ್.ಜೆ.ಜೆ.ಎಂ ಸಂಯುಕ್ತ ಪಪೂ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಶ್ರೀ ಗ್ರಾಮ ದೇವತೆಯ ಟೋಪ ಜಾತ್ರಾಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಮುಳಗುಂದ ಪಟ್ಟಣದಲ್ಲಿ 12 ವರ್ಷಕ್ಕೊಮ್ಮೆ ಗ್ರಾಮ ದೇವತೆಯರ ಜಾತ್ರೆ ನಡೆಯುತ್ತದೆ. ಮನಸ್ಸು, ಮನಸ್ಸುಗಳನ್ನು ಬೆಸೆಯುವ, ಪ್ರೀತಿ, ವಿಶ್ವಾಸ ಗಟ್ಟಿಗೊಳಿಸುವ ಜಾತ್ರಾ ಮಹೋತ್ಸವ ಇದಾಗಿದೆ. ಪರಸ್ಪರ ಪ್ರೀತಿ ವಿಶ್ವಾಸ ಜತೆಗೆ ನಾವು ಶಾಂತಿ ಕಾಪಾಡಿದರೆ ಮನಸ್ಸು ಶಾಂತವಾಗಿರುತ್ತದೆ. ಇದರಿಂದ ಸಮಾಜವು ಶಾಂತಗಿರುತ್ತದೆ. ಧಾರ್ಮಿಕ ಆಚರಣೆ ಮೂಲಕ ದೇವಿ ಮಹಿಮೆ ತಿಳಿಯಲು ಬಹಳ ಅನುಕೂಲವಾಗುತ್ತದೆ. ಆದರಿಂದ ಶಾಂತಿ ನೆಲೆಯುರುತ್ತದೆ ಎಂದರು.

ಇಷ್ಟೊಂದು ದೊಡ್ಡ ಮಟ್ಟದ ಸಂಘಟನೆ ಮೂಲಕ ಅದ್ಧೂರಿ ಜಾತ್ರೆ ಮಾಡುತ್ತಿರುವುದು ಶ್ಲಾಘನೀಯ, ಭವ್ಯ ವೇದಿಕೆ, ಬಂದ ಭಕ್ತಾಧಿಗಳಿಗೆ ದಾಸೋಹ ಸೇವೆ ಸೇರಿದಂತೆ ಊರಿನ ಎಲ್ಲ ವರ್ಗದ ಜನರ ವಿಶ್ವಾಸಕ್ಕೆ ಪಡೆದು ಯಾವುದೇ ಜಾತಿ, ಮತ, ಪಂಥ ಇಲ್ಲದೆ ಎಲ್ಲರು ಸೇರಿಕೊಂಡು ಸೌಹಾರ್ಧತೆಯಿಂದ ಈ ಟೋಪ ಜಾತ್ರಾಮಹೋತ್ಸವದ ಯಶಸ್ವಿಗೆ ಶ್ರಮಿಸಿದವರಿಗೆ, ಎಲ್ಲ ಭಕ್ತರಿಗೆ ದೇವಿ ಕೃಪೆ ಸದಾವಕಾಲ ಇರಲಿ. ಜಗತ್ತಿನಲ್ಲಿ ಶಾಂತವಾಗಿರಲಿ, ಪ್ರೀತಿ, ವಿಶ್ವಾಸ ಬೆಳೆಯಲಿ ಎಂದು ದೇವಿಯಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಮುಳಗುಂದ ಗವಿಮಠದ ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿ, ನಾನು ಗವಿಮಠಕ್ಕೆ ಬಂದ ನಂತರ 4 ಟೋಪ ಜಾತ್ರಾಮಹೋತ್ಸವಗಳನ್ನ ನೋಡಿದ್ದೇನೆ. ಆದರೆ ಹಿಂದೆ ನಡೆದಂತ ಜಾತ್ರಾ ಮಹೋತ್ಸವಗಳಿಗಿಂತ ಪ್ರಸಕ್ತ ವರ್ಷದ ಟೋಪ ಜಾತ್ರೆ ಅದ್ಭುತ, ಅದ್ಧೂರಿ, ಅರ್ಥಪೂರ್ಣವಾಗಿ ನಡೆದಿದೆ ಎಂದರು.

ಮುಳಗುಂದ ಇದೇ ಪುಣ್ಯ ಭೂಮಿಯಲ್ಲಿ ಸಿದ್ದೇಶ್ವರ ಸ್ವಾಮಿಗಳಿಂದ ಒಂದು ತಿಂಗಳ ಕಾಲ ಪ್ರವಚನ ನಡೆದಿದೆ. ಇಲ್ಲಿಯ ಜನ ಯಾವುದಾದರೂ ಒಂದು ಕಾರ್ಯ ಮಾಡಬೇಕೆಂದರೆ ಅಷ್ಟೇ ಅಚ್ಚುಕಟ್ಟಾಗಿ ಅಷ್ಟೇ ಶ್ರಮ ಪಟ್ಟು ಯಾವುದೇ ಕಾರ್ಯಕ್ರಮ ಯಶಸ್ವಿಯಾಗುವಂತೆ ಮಾಡುತ್ತಾರೆ. ಬೇರೆ ಬೇರೆ ಕಡೆಗಳಲ್ಲಿ ಗ್ರಾಮದೇವತೆಯರ ಜಾತ್ರಾಮಹೋತ್ಸವ ನೋಡಿದ್ದೇವೆ. ಆದರೆ ಟೋಪ ಜಾತ್ರೆ 12 ವರ್ಷಗಳಿಗೊಮ್ಮೆ ನಡೆಯುವುದು ವಿಶೇಷ. ಹಾಗೇ ಈ ಜಾತ್ರೆಯಲ್ಲಿ ಮಾಂಸಹಾರ ಸೇವನೆ ಇಲ್ಲ. ಯಾವುದೇ ಪ್ರಾಣಿ ವಧೆ ಕೂಡಾ ಇಲ್ಲ ಎಂದ ಅವರು, ಪ್ರಸಕ್ತ ವಷದ ಜಾತ್ರೆಯಲ್ಲಿ ಬಂದಂತಹ ಭಕ್ತಾಧಿಗಳಿಗೆ ಪಟ್ಟಣದ ಮೂರು ಕಡೆಗಳಲ್ಲಿ ಬೃಹತ್ ದಾಸೋಹ ಸೇವೆ ಕಮಾಜಿಯವರ ಮನೆತನ, ನೀಲಗುಂದ ಹಾಗೂ ಬಡ್ನಿಯವರ ಮನೆತನದವರು ಸ್ವತ ಖರ್ಚಿನಲ್ಲಿ ಮಾಡಿದ್ದಾರೆ. ಇಂತಹ ಮಹಾದಾನಿಗಳು ಪಟ್ಟಣದಲ್ಲಿ ಇದ್ದಾರೆ. ಪಟ್ಟಣದ ಎಲ್ಲ ವರ್ಗದ ಜನತೆ ಸೇರಿ ಭವ್ಯವಾದ ಜಾತ್ರಮಹೋತ್ಸವ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಈ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪರಸ್ಕೃತ ಪಂ.ಡಾ. ರಾಜಗುರು ಗುರುಸ್ವಾಮಿ ಕಲಕೇರಿ ಮಾತನಾಡಿದರು. ನೂತನ ಮೂರ್ತಿಗಳ ದಾನಿಗಳಾದ ಎನ್.ಆರ್. ದೇಶಪಾಂಡೆ ದಂಪತಿಗಳಿಗೆ ಹಾಗೂ ಶಿಲ್ಲಿ ನಾಗಲಿಂಗಪ್ಪ ಬಡಿಗೇರ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗದೇವರು, ಜಾತ್ರಾ ಸಮಿತಿ ಗೌರವಾಧ್ಯಕ್ಷ ಶಿವಣ್ಣ ನೀಲಗುಂದ, ಪಪಂ ಅಧ್ಯಕ್ಷೆ ಯಲ್ಲಮ್ಮ ಕವಲೂರ, ಜಾತ್ರಾ ಸಮಿತಿ ಅಧ್ಯಕ್ಷ ಷಣ್ಮುಖಪ್ಪ ಬಡ್ನಿ, ಡಾ.ಎಸ್.ಸಿ. ಚವಡಿ, ಬಸವರಾಜ ಸುಂಕಾಪುರ, ದೇವಪ್ಪ ಹೊರಪೇಟಿ, ಹಸನಸಾಬ್‌ ಶೇಖ, ಮಂಜನಾಥ ಮಜ್ಜಿಗುಡ್ಡ, ವಿಜಯ ನೀಲಗುಂದ, ಪರಸಣ್ಣ ಸಂಗನಪೇಟಿ, ಬಸವರಾಜ ಬಾತಾಖಾನಿ, ಮಹಾಂತಪ್ಪ ನೀಲಗುಂದ, ಬಸವಂತಪ್ಪ ಮಟ್ಟಿ, ನಾಗರಾಜ ಬಾರಕೇರ, ಹೊನ್ನೇಶ ಜೋಗಿ ಸೇರಿದಂತೆ ಜಾತ್ರಾ ಸಮಿತಿ ಸರ್ವ ಸದಸ್ಯರು, ಭಕ್ತಾಧಿಗಳು ಇದ್ದರು. ಆ ನಂತರ ಜೀ ಕನ್ನಡ ವಾಹಿನಿಯ ಹಾಗೂ ಕಲರ್ಸ್ ಕನ್ನಡ ವಾಹಿನಿಯ ಖ್ಯಾತ ಕಲಾವಿದರಿಂದ ಮನರಂಜನಾ ಕಾಯಕ್ರಮಗಳು ನಡೆದವು.