ಹುಬ್ಬಳ್ಳಿ: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಆಚಾರ್ಯ ಗುಣಧರ ನಂದಿ ಮಹಾರಾಜರು ಧಾರ್ಮಿಕ ಹಾಗೂ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ ಎಂದು ಮುಕ್ತಿ ಮಂದಿರದ ವಿಮಲರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯರು ಹೇಳಿದರು.
ಪೀರ್ ಈ ತರೀಕ್ ಅಲ್ಲಮ ಸೈಯದ್ ಷಾ ಮಹಮ್ಮದ್ ತಾಜುದ್ದೀನ್ ಖಾದ್ರಿ ಮಾತನಾಡಿ, ಬರೀ ಧಾರ್ಮಿಕ ಕಾರ್ಯವಲ್ಲದೇ ಎಲ್ಲ ಧರ್ಮದ ಮಕ್ಕಳಿಗೂ ಪ್ರವೇಶ ನೀಡಿ, ಉಚಿತ ಶಿಕ್ಷಣ, ಊಟ ವಸತಿ ನೀಡಿರುವ ಆಚಾರ್ಯ ಗುಣಧರ ನಂದಿ ಮಹಾರಾಜರು ನಿಜಕ್ಕೂ ಭಾವೈಕ್ಯತೆ ಮೆರೆದಿದ್ದಾರೆ. ಅವರಿಗೆ ನಿಮ್ಮಂಥಹ ಲಕ್ಷಾಂತರ ಭಕ್ತರ ಬೆಂಬಲವಿದೆ. ಇಲ್ಲಿ ನಡೆದಿರುವ ಕಾರ್ಯಗಳು ನಿಜಕ್ಕೂ ದೇಶಕ್ಕೆ ಮಾದರಿಯಾಗಿವೆ ಎಂದರು.
ಇಂದು ತಿರಂಗಾ ಅಭಿಷೇಕಆಚಾರ್ಯ ಗುಣಧರ ನಂದಿ ಮಹಾರಾಜರು ಮಾತನಾಡಿ, ಜೈನ ಭಾರತದ ಪುರಾತನ ಧರ್ಮ. ಅದು ಎಂದಿನಿಂದಲೂ ಉಳಿದ ಧರ್ಮಗಳ ಸಹಕಾರದಿಂದಲೇ ಬೆಳೆದಿದೆ. ದೇಶವಿದ್ದರೆ ನಾವು. ಹಾಗಾಗಿ ಭಾರತ ದೇಶ ಶಕ್ತಿಯುತವಾಗಬೇಕು. ಅದಕ್ಕಾಗಿ ಭಾನುವಾರ ತೀರ್ಥಂಕರರಿಗೆ ತಿರಂಗಾ(ತ್ರಿವರ್ಣಗಳ) ಅಭಿಷೇಕ ಜರುಗಲಿದೆ. ಇದು ದೇಶದ ಯಾವ ಪ್ರದೇಶದಲ್ಲೂ ನಡೆದಿಲ್ಲ. ಮೊದಲ ಬಾರಿ ವರೂರಿನಲ್ಲಿ ನಡೆಯಲಿದೆ. ಬಹುಸಂಖ್ಯೆಯ ನಟ-ನಟಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ದಾನಿಗಳಿಗೆ, ಛಬ್ಬಿ ಗ್ರಾಪಂ ಅಧ್ಯಕ್ಷ- ಉಪಾಧ್ಯಕ್ಷರು, ಸದಸ್ಯರು, ಆಚಾರ್ಯರು, ವಿವಿಧ ಗ್ರಾಮಗಳ ಮಹಿಳೆಯರಿಗೆ ಸನ್ಮಾನಿಸಲಾಯಿತು.
ಜಂಬೂ ದ್ವೀಪ ಪೂಜೆ, ಮಹಾಮಸ್ತಕಾಭಿಷೇಕಸುಮೇರು ಪರ್ವತ ಸ್ಥಾಪನೆ ಅಂಗವಾಗಿ ವರೂರು ಜೈನ ತೀರ್ಥದಲ್ಲಿ ಶನಿವಾರ ಬೆಳಗ್ಗೆ ಜಂಬೂ ದ್ವೀಪದ ಪೂಜಾ ವಿಧಾನಗಳು ಶ್ಲೋಕ, ಮಂತ್ರಪಠಣ, ಹಾಡು ಸಂಗೀತಗಳೊಂದಿಗೆ ನೆರವೇರಿತು. ದ್ವೀಪದ ಪ್ರತಿಯೊಂದು ದಿಕ್ಕಿನ ಪರ್ವತಗಳು, ನದಿಗಳು, ಸರೋವರಗಳು, ತೀರ್ಥಕ್ಷೇತ್ರಗಳು, ಮಂದಿರಗಳು ಮೊದಲಾದವುಗಳಿಗೆ ಅರ್ಘ್ಯ ಪ್ರದಾನ ಮಾಡಲಾಯಿತು.ಶನಿವಾರವೂ ಮಧ್ಯಾಹ್ನದ ನಂತರ ಕ್ಷೇತ್ರದಲ್ಲಿರುವ 9 ತೀರ್ಥಂಕರರಿಗೆ ಮಹಾಮಸ್ತಕಾಭಿಷೇಕ ಅದ್ಧೂರಿಯಿಂದ ನೆರವೇರಿತು. ಶುದ್ಧಜಲ, ಹಳದಿ, ಕುಂಕುಮ, ಗಂಧ, ಚಂದನ, ಅಷ್ಟಗಂಧ, ಕಬ್ಬಿನ ರಸ, ಸಮುದ್ರದ ನೀರು, ಗಿಡಮೂಲಿಕೆಗಳ ನೀರು, ಆಯುರ್ವೇದ ಔಷಧಿಯುಕ್ತ ನೀರು ಮೊದಲಾದವುಗಳಿಂದ ಮಸ್ತಕಾಭಿಷೇಕ ನೆರವೇರಿತು.