ಕನ್ನಡಪ್ರಭ ವಾರ್ತೆ ಬೀದರ್
ಅವರು ನಗರದ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ‘ಕಲ್ಯಾಣ ಕರ್ನಾಟಕ ಉತ್ಸವ’ದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. 1947ರಲ್ಲಿ ಇಡೀ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ, ಹೈದ್ರಾಬಾದ್ ನಿಜಾಮರು ಭಾರತ ಒಕ್ಕೂಟಕ್ಕೆ ಸೇರಲು ನಿರಾಕರಿಸಿದ್ದರಿಂದ ಈ ಭಾಗಕ್ಕೆ ಸ್ವಾತಂತ್ರ್ಯ ಸಿಗಲಿಲ್ಲ. ಪರಿಣಾಮವಾಗಿ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳು ರಜಾಕಾರರ ಕ್ರೂರ ದಬ್ಬಾಳಿಕೆಗೆ ತುತ್ತಾದವು ಎಂದರು.
ನೆಹರು ಮಾರ್ಗದರ್ಶನ, ಪಟೇಲ್ ಗಟ್ಟಿ ನಿರ್ಧಾರದಿಂದ ಸಿಕ್ಕ ಸ್ವಾತಂತ್ರ್ಯ :ಪೂಜ್ಯ ಚನ್ನಬಸವ ಪಟ್ಟದ್ದೇವರು, ರಮಾನಂದ ತೀರ್ಥರು, ಶರಣಗೌಡ ಇನಾಮದಾರರು, ಭೀಮಣ್ಣ ಖಂಡ್ರೆ ಸೇರಿದಂತೆ ಸಾವಿರಾರು ಹೋರಾಟಗಾರರು ನಿರಂತರ ಹೋರಾಟ ನಡೆಸಿದರು. ಅಂತಿಮವಾಗಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಮಾರ್ಗದರ್ಶನ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಗಟ್ಟಿ ನಿರ್ಧಾರದಿಂದ ನಡೆದ ಸೇನಾ ಕಾರ್ಯಾಚರಣೆಯ ಫಲವಾಗಿ 1948ರ ಸೆಪ್ಟೆಂಬರ್ 17ರಂದು ಈ ಭಾಗವು ನಿಜಾಮ್ ಆಡಳಿತದಿಂದ ವಿಮೋಚನೆಗೊಂಡಿತು ಎಂದರು.
ಶತಮಾನಗಳ ಶಾಪ ಮತ್ತು ಹಿಂದುಳಿದರಿಕೆಯನ್ನು ನಿವಾರಿಸಲು ಜಾರಿಗೆ ಬಂದ ಸಂವಿಧಾನದ 371(ಜೆ) ತಿದ್ದುಪಡಿಯು ಈ ಭಾಗದ ಪಾಲಿಗೆ ವರವಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ನೀಡಲಾದ ಈ ವಿಶೇಷ ಸ್ಥಾನಮಾನದಿಂದಾಗಿ ನೇಮಕಾತಿಯಲ್ಲಿ ಶೇ.75ರಿಂದ85 ರಷ್ಟು ಹಾಗೂ ರಾಜ್ಯಮಟ್ಟದಲ್ಲಿ ಶೇ. 8ರಷ್ಟು ಮೀಸಲಾತಿ, ಹಾಗೆಯೇ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಶೇ. 70ರಷ್ಟು ಸೀಟುಗಳು ಈ ಭಾಗದ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿದ್ದು, ಈ ಹಿಂದೆ ವರ್ಷಕ್ಕೆ ಕೇವಲ 60 ವೈದ್ಯ ಸೀಟು ಪಡೆಯುತ್ತಿದ್ದ ಜಾಗದಲ್ಲಿ ಇಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಸಾಗರ ಖಂಡ್ರೆ, ಶಾಸಕರಾದ ರಹೀಮ್ ಖಾನ್, ಡಾ. ಶೈಲೇಂದ್ರ ಬೆಲ್ದಾಳೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.