ಭಟ್ಕಳ: ರಂಜಾನ್ ಹಬ್ಬದ ಪ್ರಯುಕ್ತ ಪಟ್ಟಣದ ಬಂದರ್ ರಸ್ತೆ ಎರಡನೇ ಕ್ರಾಸ್ ಬಳಿ ಹಾಕಲಾಗಿದ್ದ ಇಸ್ಲಾಮಿಕ್ ಬಾವುಟವನ್ನು ನಗರಸಭೆ ತೆರವುಗೊಳಿಸಿದ್ದರಿಂದ ಸ್ಥಳೀಯ ಮುಸ್ಲಿಂ ಸಮುದಾಯದವರು ಶನಿವಾರ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ನಗರಸಭೆ ಕಮಿಷನರ್ ಬಾಬಾಸಾಹೇಬ್ ಮಾಣೆ ಅವರ ನೇತೃತ್ವದಲ್ಲಿ, ಪೊಲೀಸ್ ಬಂದೋಬಸ್ತ್ನೊಂದಿಗೆ ಬಾವುಟ ತೆರವುಗೊಳಿಸಲಾಯಿತು. ತೆರವುಗೊಳಿಸುವ ಸಂದರ್ಭದಲ್ಲಿ ಯಾವುದೇ ವಿರೋಧ ವ್ಯಕ್ತವಾಗಿರಲಿಲ್ಲ. ಆದರೆ ಅದರ ನಂತರ ಸುಮಾರು 50 ಮಂದಿ ಮುಸ್ಲಿಂ ಸಮುದಾಯದವರು, ಪುರಸಭೆಯ ಮಾಜಿ ಸದಸ್ಯ ಅಲ್ತಾಫ್ ಕರೂರಿ ನೇತೃತ್ವದಲ್ಲಿ ಸ್ಥಳಕ್ಕೆ ಆಗಮಿಸಿ, ಸ್ಥಳದಲ್ಲಿ ಮತ್ತೆ ಬಾವುಟ ಹಾರಿಸಲು ಯತ್ನಿಸಿದರು. ಪೊಲೀಸರು ತಕ್ಷಣವೇ ಮಧ್ಯಪ್ರವೇಶಿಸಿ ಅದನ್ನು ತಡೆದು, ಬಾವುಟವನ್ನು ಮತ್ತೆ ತೆರವುಗೊಳಿಸಿದರು. ಈ ಸಂದರ್ಭದಲ್ಲಿ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆದಿದ್ದು, ಪ್ರತಿಭಟನಾರ್ಥವಾಗಿ ಬಂದರ್ ರಸ್ತೆ ಬಂದ್ ಮಾಡಲು ಯತ್ನಿಸಲಾಯಿತು. ಆದರೆ ಪೊಲೀಸರು ಅದಕ್ಕೆ ಅವಕಾಶ ನೀಡದೆ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಡಿವೈಎಸ್ಪಿ ಗಿರೀಶ್ ಬಿ., ಸಿಪಿಐ ದಿವಾಕರ್ ಪಿ.ಎಂ. ಹಾಗೂ ಪಿ.ಎಸ್.ಐ. ನವೀನ್ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಅಧಿಕಾರಿಗಳು ಜನರೊಂದಿಗೆ ಮಾತುಕತೆ ನಡೆಸಿ, ಶಾಂತಿ ಕಾಪಾಡುವಂತೆ ಮನವಿ ಮಾಡಿದರು. ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಗಿತ್ತು. ಘಟನೆ ಕುರಿತು ಚರ್ಚಿಸಲು ಸಮುದಾಯದ ಮುಖಂಡರನ್ನು ಡಿವೈಎಸ್ಪಿ ಕಚೇರಿಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಸಭೆ ನಡೆಸಲಾಯಿತು. ಸಭೆಯ ಬಳಿಕ, ಬಾವುಟ ತೆರವುಗೊಳಿಸಿದ ಸ್ಥಳಕ್ಕೆ ಆಗಮಿಸಿದ ಸಮುದಾಯದವರು ತಾತ್ಕಾಲಿಕವಾಗಿ ಬಾವುಟ ಹಾಕಿ, ಸ್ವಲ್ಪ ಸಮಯದ ಬಳಿಕ ತಾವೇ ತೆರವುಗೊಳಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.