ಕನ್ನಡಪ್ರಭ ವಾರ್ತೆ ಯಾದಗಿರಿ
ಹತ್ಯೆಯೊಂದರ ಘಟನೆಯನ್ನು ‘ಅಪಘಾತ’ ಎಂದು ಬಿಂಬಿಸಲಾಗುತ್ತಿದ್ದು, ನವವಿವಾಹಿತೆಯ ಸಂಬಂಧಿಕರು ಸೇರಿದಂತೆ ಕೆಲವರು ಇದರಲ್ಲಿ ಶಾಮೀಲಾಗಿದ್ದಾರೆ. ಅಪಘಾತ ಸ್ಥಳದ ಪರಿಶೀಲನೆ ಹಾಗೂ ಪತಿ ಸೇರಿದಂತೆ ಕುಟುಂಬಸ್ಥರ ಹೇಳಿಕೆಗಳು ಶಂಕಾಸ್ಪದವಾಗಿದ್ದು, ದೊಡ್ಡ ಮಟ್ಟದ ಹಣದ ಆಮಿಷದ ಮೂಲಕ ಪ್ರಕರಣ ವನ್ನು ಮರೆಮಾಚಲು ಯತ್ನಿಸಲಾಗುತ್ತಿದೆ. ನವವಿವಾಹಿತೆಯೊಬ್ಬಳ ಜೀವ ಲಕ್ಷಾಂತರ ರುಪಾಯಿಗಳೆದುರು ಮುಚ್ಚಿ ಹೋಯಿತೇ ? ಎಂಬ ಪ್ರಶ್ನೆ ಇಲ್ಲಿನವರ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ, ಎಸ್ಪಿ ಪೃಥ್ವಿಕ್ ಶಂಕರ್, ಪ್ರಕರಣದತ್ತ ಚಿತ್ತ ಹರಿಸಿದ್ದಾರೆ.
ಸುರಪುರ ತಾಲೂಕಿನ ಮಂಜಲಾಪುರದ 19 ವರ್ಷದ ರೇಣುಕಾಳನ್ನು ಪತ್ತೇಪೂರ ಗ್ರಾಮದ ಕರೆಪ್ಪ ಎಂಬಾತನ ಜೊತೆ ಮದುವೆಯಾಗಿತ್ತು. ಹದಿನೈದು ದಿನಗಳ ಹಿಂದೆ ತವರುಮನೆಗೆ ಬಂದಿದ್ದ ರೇಣುಕಾಳನ್ನು ಪತಿ ಕರೆಪ್ಪ ಪತ್ತೇಪೂರಕ್ಕೆ ವಾಪಸ್ ಕರೆದುಕೊಂಡು ಹೋಗುತ್ತಿದ್ದಾಗ, ಕೆಂಭಾವಿಯ ಸಾಯಿನಗರ ಕ್ಯಾಂಪ್ನ ಗೇಟ್ ಬಳಿಯ ತಿರುವಿನಲ್ಲಿ ಇವರಿದ್ದ ಬೈಕ್ ನಿಯಂತ್ರಣ ತಪ್ಪಿ ಕೃಷ್ಣಾ ಕಾಲುವೆಗೆ ಬಿದ್ದಿದೆ. ಈ ವೇಳೆ, ಪತಿ ಕರೆಪ್ಪ ಈಜಾಡಿ ಮೇಲಕ್ಕೆ ಬಂದನಾದರೂ, ಬೈಕ್ ಹಾಗೂ ರೇಣುಕಾ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಕಾಲುವೆಯಲ್ಲಿ ಕೊಚ್ಚಿ ಹೋದ ಮಗಳ ಹುಡುಕಿ ಕೊಡುವಂತೆ ಅ.1ರಂದು ರೇಣುಕಾಳ ತಂದೆ ನಿಂಗಪ್ಪ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ರಕ್ಷಣಾ ಕಾರ್ಯ ನಡೆಸಿದ ಅಗ್ನಿಶಾಮಕ ದಳಕ್ಕೆ ಭಾನುವಾರ (ಆ.2) ಗುತ್ತಿ ಬಸವಣ್ಣ ಏತ ನೀರಾವರಿ ಜಾಕ್ವೆಲ್ ಬಳಿ ರೇಣುಕಾಳ ಶವ ಸಿಕ್ಕಿತ್ತು. ಮೂರು ತಿಂಗಳ ಹಿಂದಷ್ಟೇ ಹಸೆಮಣೆ ಏರಿದ್ದ ರೇಣುಕಾ, ಬಂಡೆಪ್ಪನ ಹಳ್ಳಿ ಜಾತ್ರೆಗೆಂದು ತವರಿಗೆ ಆಗಮಿಸಿ, ಗಂಡನ ಮನೆಗೆ ಹೋಗುವಾಗ ಸಂಭವಿಸಿದ ಅಪಘಾತದಲ್ಲಿ ಕಾಲುವೆಗೆ ಬಿದ್ದು ಹೆಣವಾದುದ್ದು ಕುಟುಂಬಸ್ಥರಲ್ಲಿ ತೀವ್ರ ಆಘಾತ ಮೂಡಿಸಿತ್ತು.ಬೈಕ್ ಸ್ಕಿಡ್ ಅಪಘಾತ ಹಾಗೂ ರೇಣುಕಾ ಸಾವಿನ ಪ್ರಕರಣ ಜನಮಾನಸದಲ್ಲಿ ವಿವಿಧ ರೀತಿಯ ಚರ್ಚೆಗಳಿಗೆ ಕಿವಿಯಾಗುತ್ತಿದೆ. ‘ಘಟನಾ ಸ್ಥಳದಲ್ಲಿ ಸಾರ್ವಜನಿಕ ವಾಗಿ ಕೆಲವರಿಗೆ ಕಂಡುಬಂದ ಸಾಕ್ಷಿಗಳು ‘ಸ್ಕಿಡ್’ ಪ್ರಕರಣಕ್ಕೆ ತದ್ವಿರುದ್ಧವಾಗಿತ್ತು. ರೇಣುಕಾಳ ಚಪ್ಪಲಿ ಹಾಗೂ ಬ್ಯಾಗು ಕಾಲುವೆ ಪಕ್ಕದ ರಸ್ತೆಯ ಮೇಲೆ ಇದ್ದರೆ, ಶವ ಸಿಕ್ಕಾಗ ಆಭರಣಗಳು ಇರಲಿಲ್ಲ ಎನ್ನಲಾಗಿದೆ. ಅಲ್ಲದೆ, ಸಂಪ್ರದಾಯಕ್ಕೆ ವಿರುದ್ಧವಾಗಿ ಮೃತಳ ಶವ ಸುಟ್ಟಿರುವುದೂ ಅನುಮಾನ ಮೂಡಿಸಿದೆ. ಸಂಬಂಧಿಕ ರೊಬ್ಬರ ಪ್ರಭಾವ ಬಳಸಿ, ಮೃತ ರೇಣುಕಾಳ ಪಾಲಕರೊಡನೆ ಮಾತುಕತೆ ನಡೆಸಲಾಗಿದೆ. ಇದು ಸಹಜವಾದ ಅಪಘಾತದಲ್ಲಾದ ಸಾವು ಎಂಬಂತೆ ಬಿಂಬಿಸ ಲಾಗಿದೆ ಎನ್ನುವ ಗ್ರಾಮದ ಹೆಸರೇಳಲಿಚ್ಛಿಸದ ಹಿರಿಯರೊಬ್ಬರು "ಪೊಲೀಸರು ಪ್ರಾಮಾಣಿಕ ತನಿಖೆ ನಡೆಸಿದರೆ ಸತ್ಯ ಹೊರಬರುತ್ತದೆ " ಎನ್ನುತ್ತಾರೆ.