ಡಂಬಳ: ಗ್ರಾಮದಲ್ಲಿ ಎರಡ್ಮೂರು ವರ್ಷಕೊಮ್ಮೆ ಸಿಬ್ಬಂದಿ ಚರಂಡಿ ಸ್ವಚ್ಛಗೊಳಿಸುತ್ತಾರೆ. ಗ್ರಾಮದ ಬಹುತೇಕ ಗಟಾರ್ಗಳಲ್ಲಿ ಹೂಳು ತುಂಬಿದ್ದು, ಸಾಂಕ್ರಾಮಿಕ ಕಾಯಿಲೆಗಳು ಹರಡುತ್ತಿವೆ. ಸ್ವಚ್ಛತೆಗೆ ಏನು ಕ್ರಮ ಕೈಗೊಂಡಿದ್ದಿರಿ ಎಂದು ಅಧಿಕಾರಿಗಳನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ನಡೆದಿದೆ.
ಸಾರ್ವಜನಿಕರು ಮಾತನಾಡಿ, ಗ್ರಾಮದಲ್ಲಿ ಚರಂಡಿ ನಿರ್ವಹಣೆ ಕೊರತೆಯಿದೆ. ಹೀಗಾಗಿ ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿದೆ. ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಆಗುತ್ತದೆ. ಸೊಳ್ಳೆ ಕಾಟದಿಂದ ಹಲವು ರೋಗಗಳಿಗೆ ದಾರಿ ಮಾಡಿಕೊಡುವಂತಿದೆ ಎಂದರು.
ಆಸ್ಪತ್ರೆಯಿಂದ ತೋಂಟದಾರ್ಯ ಶಿಕ್ಷಣ ಸಂಸ್ಥೆಯವರಿಗೆ ಮೂಗು ಮುಚ್ಚಿಕೊಂಡು ಹೋಗುವ ಸ್ಥಿತಿ ಇದೆ. ಇದಕ್ಕೆ ಶಾಶ್ವತ ಪರಿಹಾರ ನೀಡಬೇಕೆಂದು ಮುಖಂಡ ಗೋಣಿಬಸಪ್ಪ ಕೊರ್ಲಹಳ್ಳಿ ಒತ್ತಾಯಿಸಿದರು.ಹೊಸದಾಗಿ ನಿರ್ಮಾಣವಾಗಿರುವ ಎನ್ಎ ಬಡಾವಣೆಯಲ್ಲಿ ಸರಿಯಾಗಿ ರಸ್ತೆ ಚರಂಡಿ ನಿರ್ಮಾಣವಾಗಿಲ್ಲ. ಸಾರ್ವಜನಿಕ ಬಳಕೆಗೆ ಎಲ್ಲಿ ಜಾಗ ಮೀಸಲಿದೆ? ಕಂಪ್ಯೂಟರ್ ಉತಾರ ಯಾವ ಆಧಾರದ ಮೇಲೆ ನೀಡುತ್ತಿರಿ? ಅಧಿಕಾರಿಗಳು ಸಾರ್ವಜನಿಕರ ಉತ್ತಮ ಸೇವೆಗೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದು ಅಧಿಕಾರಿಗಳಿಗೆ ಮುಖಂಡ ಕುಬೇರಪ್ಪ ಕೊಳ್ಳಾರ ತಿಳಿಸಿದರು.
ಈ ಸಮಯದಲ್ಲಿ ಬಸವರಾಜ ಕುಸಗಲ್ ಪ್ರಕಾಶ ಕೋತಂಬ್ರಿ, ಪ್ರವೀಣ ಇಡಗಲ್ಲ, ಮಂಜುನಾಥ ಹಡಪದ, ಹಾಲೇಶ ತುಂಬರಗುದ್ದಿ, ಫಕ್ಕೀರಪ್ಪ ಕರಿಗಾರ, ಬಸವರಾಜ ಕರ್ಣಿ, ನಾಗರಾಜ ಕರ್ಣಿ, ರಾಚಪ್ಪ ಗದಗಿನ, ರಜೇಕಸಾಬ್ ಆಲೂರ, ಶಿವು ಮಠದ, ಮಂಜುನಾಥ, ಸಿದ್ದಲಿಂಗೇಶ ಸ್ಥಾವರಮಠ, ಶಬ್ಬೀರ ನಮಾಜಿ, ಮಹಿಖೆಯರು ಸೇರಿದಂತೆ ಹಲವು ಯುವಕರು ಗ್ರಾಮ ಪಂಚಾಯಿತಿ ಸಿಬ್ಬಂದಿ ಇದ್ದರು.