ಶಿರಹಟ್ಟಿ: ಪಟ್ಟಣದ ಮ್ಯಾಗೇರಿ ಓಣಿಯಲ್ಲಿರುವ ಸಿಸಿಎನ್ ಸರ್ಕಾರಿ ಪ್ರೌಢ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಶುದ್ಧ ಕುಡಿವ ನೀರು, ಆಟದ ಮೈದಾನ, ಶಾಲಾ ಸುತ್ತಲು ಕಾಂಪೌಂಡ ಅಗತ್ಯವಿದ್ದು, ಮಕ್ಕಳ ಶೈಕ್ಷಣಿಕೆ ಬೆಳವಣಿಗೆ ಹಿತದೃಷ್ಟಿಯಿಂದ ತುರ್ತು ಅನುದಾನ ಬಿಡುಗಡೆಗೆ ಆಗ್ರಹಿಸಿ ವಿಧಾನ ಪರಿಷತ ಸಭಾಪತಿ ಬಸವರಾಜ ಹೊರಟ್ಟಿಗೆ ಮನವಿ ಸಲ್ಲಿಸಲಾಯಿತು.
ಪಪಂ ಮಾಜಿ ಅಧ್ಯಕ್ಷ ಹಾಗೂ ಶಾಲೆಯ ನೂತನ ಎಸ್ಡಿಎಂಸಿ ಅಧ್ಯಕ್ಷ ನಾಗರಾಜ ಲಕ್ಕುಂಡಿ,ಮಾಧ್ಯಮಿಕ ಶಾಲಾ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ಎಂ.ಕೆ.ಲಮಾಣಿ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಫಕ್ಕೀರೇಶ ರಟ್ಟಿಹಳ್ಳಿ, ಶಾಲೆಯ ಮುಖ್ಯೋಪಾಧ್ಯಾಯ ಗಣಪತಿ ಈರಕ್ಕನವರ ನೇತೃತ್ವದಲ್ಲಿ ಬುಧವಾರ ಹುಬ್ಬಳ್ಳಿಯ ಅವರ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದರು.ಎಸ್ಡಿಎಂಸಿ ಅಧ್ಯಕ್ಷ ನಾಗರಾಜ ಲಕ್ಕುಂಡಿ ಮಾತನಾಡಿ, ಸಿಸಿಎನ್ ಸರ್ಕಾರಿ ಪ್ರೌಢ ಶಾಲೆ ಗದಗ ಜಿಲ್ಲೆಯಲ್ಲಿಯೇ ಹೆಚ್ಚಿನ ಹಾಜರಾತಿ ೮ನೇ ತರಗತಿಯಿಂದ ೧೦ನೇ ತರಗತಿ ವರೆಗೆ ೪೯೩ ಮಕ್ಕಳ ಸಂಖ್ಯೆ ಹೊಂದಿದೆ. ಪ್ರತಿ ವರ್ಷವೂ ಉತ್ತಮ ಫಲಿತಾಂಶ ಗಳಿಸುತ್ತಾ ದಾಪುಗಾಲು ಇಡುತ್ತಿದೆ. ಸಧ್ಯ ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದ್ದು, ಅನುದಾನ ಕೊಡಿಸಬೇಕು ಎಂದು ಮನವಿ ಮಾಡಿಕೊಂಡರು.
ಮಧ್ಯಾಹ್ನದ ಬಿಸಿಯೂಟ ಮುಗಿದ ನಂತರ ಮಕ್ಕಳು ಕುಡಿವ ನೀರಿಗಾಗಿ ಮನೆ ಮನೆ ಅಲೆಯುವಂತಾಗಿದೆ. ಶಾಲಾ ಮಕ್ಕಳ ಹಾಜರಾತಿಗೆ ಅನುಗುಣವಾಗಿ ಶುದ್ಧ ಕುಡಿವ ನೀರಿನ ಘಟಕ ಅಗತ್ಯವಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ತುರ್ತು ಸೌಲಭ್ಯ ಕಲ್ಪಸಿಕೊಡುವಂತೆ ಕೋರಿದರು.₹೫೦ ಲಕ್ಷ ಅನುದಾನಕ್ಕೆ ಮನವಿ:ಶಾಲಾ ಕಾಂಪೌಂಡ, ಮೈದಾನ, ಶಾಲೆಯಲ್ಲಿ ಸಭಾ ಭವನ ನಿರ್ಮಾಣ ಸೇರಿದಂತೆ ಇತರೆ ಎಲ್ಲ ಮೂಲಭೂತ ಸೌಲಭ್ಯಕ್ಕೆ ಅಂದಾಜು ₹ ೫೦ ಲಕ್ಷ ಅನುದಾನ ಬೇಕಾಗುತ್ತಿದ್ದು, ಮಕ್ಕಳ ಸರ್ವತೋಮುಖ ಶೈಕ್ಷಣಿಕ ಅಭಿವೃದ್ದಿಗೆ ಅನುದಾನ ಕೊಡಿಸಬೇಕು ಎಂದು ಲಿಖಿತ ಮನವಿ ನೀಡಿ ವಿನಂತಿಸಿದರು.
ಮನವಿ ಸ್ವೀಕರಿಸಿದ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ಶಿರಹಟ್ಟಿಯ ಸಿಸಿಎನ್ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮೂಲಭೂತ ಸೌಲಭ್ಯಕ್ಕೆ ಅನುದಾನ ನೀಡುವಂತೆ ತಿಳಿಸಿದರು. ಜೊತೆಗೆ ತುರ್ತು ಶುದ್ಧ ನೀರಿನ ಘಟಕ ವ್ಯವಸ್ಥೆ ಮಾಡಿಸಿಕೊಡುವ ಭರವಸೆ ನೀಡಿದರು.ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಂ.ಕೆ.ಲಮಾಣಿ, ಶಿರಹಟ್ಟಿ ಮಂಡಳದ ಬಿಜೆಪಿ ಅಧ್ಯಕ್ಷ ಫಕ್ಕೀರೇಶ ರಟ್ಟಿಹಳ್ಳಿ, ಸಿಸಿಎನ್ ಸರ್ಕಾರಿ ಪ್ರೌಢಶಾಲೆಯ ನೂತನ ಎಸ್ಡಿಎಂಸಿ ಅಧ್ಯಕ್ಷ ನಾಗರಾಜ ಲಕ್ಕುಂಡಿ ಹಾಗೂ ಶಾಲೆಯ ಪ್ರಧಾನ ಗುರು ಗಣಪತಿ ಈರಕ್ಕನವರ್, ಕಡಕೋಳ ಸರ್ಕಾರಿ ಪ್ರೌಢಶಾಲೆ ಪ್ರಧಾನ ಗುರು ವೆಂಕಟೇಶ ಅರ್ಕಸಾಲಿ, ಸಿದ್ದಪ್ಪ ಸ್ವಾಮಿ ಉಪಸ್ಥಿತರಿದ್ದರು.