ಟಿಕೆಟ್ ಘೋಷಣೆ ನಂತರ ಎರಡು ಪಕ್ಷ ಸೇರಿ ಸಭೆ । 15ರೊಳಗೆ ಲೋಕಸಭೆ ಚುನಾವಣೆ ಘೋಷಣೆ ಸಾಧ್ಯತೆ
ಪ್ರಥಮ ಬಾರಿಗೆ ಪ್ರೀತಂ ಗೌಡರ ಜತೆ ಮಾತನಾಡುವುದಾಗಿ ಹೇಳಿಕೆ ಕೊಡುವುದರ ಮೂಲಕ ಸಂಸದ ಪ್ರಜ್ವಲ್ ರೇವಣ್ಣ ಸ್ನೇಹದ ಹಸ್ತ ಚಾಚಿದ್ದಾರೆ.
ನಗರದ ಸಂಸದರ ನಿವಾಸದಲ್ಲಿ ಶನಿವಾರ ಮಾಧ್ಯಮದೊಂದಿಗೆ ಮಾತನಾಡಿ, ‘ನಾನು ಐದು ವರ್ಷ ಸಂಸದನಾಗಿ ವಿಶೇಷವಾದ ಒಳ್ಳೆಯ ಅನುಭವ ನೀಡಿದೆ. ಎಲ್ಲಾ ಕಡೆ ಹೋಗಲು ಆಗಲ್ಲ. ಆದರೂ ಬಹುತೇಕ ಭೇಟಿ ನೀಡಿ ಕೆಲಸ ಮಾಡಿದ್ದೀನಿ. ರೈತರಿಗೆ, ಸಾರ್ವಜನಿಕರಿಗೆ ಅನ್ಯಾಯವಾಗದ ರೀತಿ ಕೆಲಸ ಮಾಡಿದ್ದೀನಿ. ಎಲ್ಲರೂ ಬಹಳಷ್ಟು ಅನುಭವ ಕೊಟ್ಟಿದ್ದಾರೆ. ಮುಂದೆಯೂ ಒಳ್ಳೆಯ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.‘ಟಿಕೆಟ್ ಘೋಷಣೆ ಆದ ಮೇಲೆ ಎರಡು ಪಕ್ಷದವರು ಸೇರಿ ಎಲ್ಲಾ ಭಾಗದಲ್ಲೂ ಸಭೆ ಮಾಡುತ್ತೇವೆ. ಕಡೂರಿನಲ್ಲಿ ಬೆಳ್ಳಿಪ್ರಕಾಶ್ ಅಣ್ಣನ ಜತೆ ಮಾತನಾಡಿದ್ದೇನೆ. ಬೇಲೂರು ಶಾಸಕ ಎಚ್.ಕೆ. ಸುರೇಶಣ್ಣ, ಸಕಲೇಶಪುರ ಶಾಸಕ ಸಿಮೆಂಟ್ ಮಂಜಣ್ಣನ ಜತೆ ಮಾತನಾಡಿದ್ದೇನೆ. ಮುಂದಿನ ದಿನಗಳಲ್ಲಿ ಪ್ರೀತಂ ಗೌಡರ ಬಳಿಯೂ ಮಾತನಾಡುತ್ತೇನೆ. ಅರಕಲಗೂಡು ಯೋಗರಮೇಶ್ ಅಣ್ಣ ಜತೆ ಮಾತನಾಡುತ್ತೇನೆ. ಎಲ್ಲರ ಜೊತೆ ಮಾತನಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ’ ಎಂದು ಸ್ನೇಹದ ಹಸ್ತ ಚಾಚಿದರು.
‘ನಾನೂ ಐದು ವರ್ಷದಲ್ಲಿ ಜಿಲ್ಲೆಯ ಎಲ್ಲಾ ಭಾಗಕ್ಕೂ ಹೋಗಿದ್ದ ಸಂದರ್ಭದಲ್ಲಿ ಎಲ್ಲಾ ಕಡೆ ಚೆನ್ನಾಗಿ ಪ್ರತಿಕ್ರಿಯೆ ಬಂದಿದ್ದು, ಎಲ್ಲಾ ಕಡೆ ಒಳ್ಳೆಯ ವಿಶ್ವಾಸ ಇದೆ. ಎರಡು ಪಕ್ಷದ ಕಾರ್ಯಕರ್ತರು ಹುಮ್ಮಸ್ಸಿನಲ್ಲಿದ್ದಾರೆ. ನಾವು ಖಂಡಿಯವಾಗಿಯೂ ಒಳ್ಳೆಯ ಲೀಡ್ನಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಗೆಲ್ಲುತ್ತೇವೆ. ಮಾಹಿತಿ ಪ್ರಕಾರ ಭಾನುವಾರ ಅಥವಾ ಸೋಮವಾರ ಬಿಜೆಪಿ-ಜೆಡಿಎಸ್ ಟಿಕೆಟ್ ಘೋಷಣೆ ಮಾಡುವರು. ಇನ್ನೆರೆಡು, ಮೂರು ದಿನಗಳಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳ ಟಿಕೆಟ್ಗಳನ್ನು ಘೋಷಣೆ ಮಾಡುತ್ತಾರೆ. ಜೆಡಿಎಸ್ಗೆ ಎಷ್ಟು ಟಿಕೆಟ್ ಕೊಡಬೇಕು ಎಂದು ಎರಡು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಟಿಕೆಟ್ ಕೊಟ್ಟ ಮೇಲೆ ಕೆಲಸ ಮಾಡೋಣ. ಈಗಾಗಲೇ ಒಂದು ರೌಂಡ್ ಎಲ್ಲಾ ಪಂಚಾಯಿತಿಗೆ ಹೋಗಿದ್ದೀನಿ. ಹಳ್ಳಿಗಳಿಗೆ ಭೇಟಿ ನೀಡಿದ್ದೀನಿ. ಒಂದು ರೌಂಡ್ ಪ್ರಚಾರ ಕೂಡ ಆಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡ್ತಾ ಇದ್ದೀನಿ’ ಎಂದು ಹೇಳಿದರು.
ಕಾಂಗ್ರೆಸ್ನಿಂದ ಶ್ರೇಯಸ್ ಪಟೇಲ್ಗೆ ಟಿಕೆಟ್ ಘೋಷಣೆ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ‘ನಾನು ಅದರ ಬಗ್ಗೆ ಚರ್ಚೆ ಮಾಡುವುದಿಲ್ಲ. ಕೆಲಸ ಮಾಡಿರುವವರು ಬಂದರೆ ಮಾತನಾಡಬಹುದು. ಕೆಲಸ ಮಾಡದೇ ಸುಮ್ಮನೆ ಓಡಾಡಿಕೊಂಡು ಬರುವವರ ಬಗ್ಗೆ ನಾನೇನು ಮಾತನಾಡಲಿ?’ ಎಂದು ಹೇಳಿದರು.