ರಾಮನಗರ: ಕಂದಾಯ ಇಲಾಖೆಯಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಹುದ್ದೆಗಳನ್ನು ಕಡಿತಗೊಳಿಸದಂತೆ ಹಾಗೂ ಹೊಸ ಹುದ್ದೆಗಳನ್ನು ಸೃಷ್ಟಿಸಿ ಮುಂಬಡ್ತಿ ನೀಡುವಂತೆ ಒತ್ತಾಯಿಸಿ ಇಲಾಖೆ ನೌಕರರು ಸೋಮವಾರ ಅಪರ ಜಿಲ್ಲಾಧಿಕಾರಿಗಳ ಮೂಲಕ ಕಂದಾಯ ಸಚಿವರಿಗೆ ಮನವಿ ಸಲ್ಲಿಸಿದರು.
ಕಂದಾಯ ಇಲಾಖೆಯ ಸಿಬ್ಬಂದಿಗೆ ಬೇರೆ ಇಲಾಖೆಯ ಕೆಲಸ ನೀಡಲಾಗುತ್ತಿದೆ. ಹಾಗಾಗಿ ಇಲಾಖೆಯ ಸಿಬ್ಬಂದಿ ಪ್ರತಿ ಸಾರ್ವಜನಿಕ ರಜಾ ದಿನದಲ್ಲಿ ಕಾರ್ಯನಿರ್ವಹಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಸಂಜೆ ವೇಳೆಯಲ್ಲಿ ಗೂಗಲ್ ಮೀಟಿಂಗ್ ಮಾಡಲಾಗುತ್ತಿದೆ. ಜತೆಗೆ, ಪ್ರತಿ ಸಾರ್ವಜನಿಕ ರಜಾ ದಿನಗಳಲ್ಲಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಒತ್ತಡ ಹಾಕುತ್ತಿದ್ದಾರೆ. ಇದರಿಂದಾಗಿ ಕೆಲವು ನೌಕರರಗಳು ಮಾನಸಿಕ ಒತ್ತಡದಿಂದ ಹೃದಯಾಘಾತ ಸಂಭವಿಸುತ್ತಿದೆ. ಹಾಗಾಗಿ ಬೇರೆ ಇಲಾಖೆಯ ಕೆಲಸ ನಿರ್ವಹಿಸುವುದನ್ನು ಕೈಬಿಡಬೇಕು. ಒಂದೊಮ್ಮೆ ಕೆಲಸ ನಿರ್ವಹಿಸಿದರೆ, ಅದಕ್ಕೆ ಸರ್ಕಾರದಿಂದ ಸಂಭಾವನೆ ನೀಡಬೇಕು ಎಂದು ಆಗ್ರಹಿಸಿದರು.
ಇಡೀ ರಾಜ್ಯದಲ್ಲಿ ಸುಮಾರು 4 ಸಾವಿರ ಗ್ರಾಮ ಆಡಳಿತಾಧಿಕಾರಿಗಳು, ಪ್ರಥಮ ದರ್ಜೆ ಸಹಾಯಕರು ಹಾಗೂ ದ್ವಿತೀಯ ದರ್ಜೆ ಸಹಾಯಕರ ಹುದ್ದೆ ಖಾಲಿ ಇವೆ. ಈ ಹುದ್ದೆಗಳನ್ನು ಭರ್ತಿ ಮಾಡಿ, ನೌಕರರ ಒತ್ತಡವನ್ನು ಕಡಿಮೆ ಮಾಡಬೇಕು. ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರ ಕುಟುಂಬ ಹಾಗೂ ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದರೆ, ಅಂಥವರಿಗೆ ಅಂತರ ಜಿಲ್ಲಾ ವರ್ಗಾವಣೆಯನ್ನು ಮರು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.ಸಿವಿಲ್ ವ್ಯಾಜ್ಯ ಪ್ರಕರಣಗಳಲ್ಲಿ ಪೊಲೀಸರು ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಕಂದಾಯ ಇಲಾಖೆ ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲು ಮಾಡುತ್ತಿದ್ದಾರೆ. ಇದನ್ನು ತಡೆಯಬೇಕು. ಲೀವ್ ರೀಸರ್ವ್ ಹುದ್ದೆಗಳನ್ನು ಶೇ.10ರಿಂದ 24ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಪುರಸಭಾ ತಹಸೀಲ್ದಾರ್ ಹುದ್ದೆಗಳು ಈ ಪೂರ್ವದಿಂದಲೂ ಕಂದಾಯ ಇಲಾಖೆ ಹುದ್ದೆಗಳಾಗಿದ್ದು, 2016ರ ಅಧಿಸೂಚನೆಯಲ್ಲಿ 25 ಹುದ್ದೆಗಳನ್ನು ಪರಿಗಣಿಸಿದ್ದು, ಆ ನಂತರದಲ್ಲಿ ಎಲ್ಲಾ ಜಿಲ್ಲೆಗಳಲ್ಲಿಯೂ ಪುರಸಭಾ ಹುದ್ದೆಗಳಿವೆ. ಆದರೆ, 20 ಹುದ್ದೆಗಳನ್ನು ಮಾತ್ರ ಪರಿಗಣಸಿದ್ದು, ಉಳಿದ 11 ಹುದ್ದೆಗಳನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಕೆಐಎಡಿಬಿ -1, ಮೆಟ್ರೋ ಯೋಜನೆ -4 ತಹಸೀಲ್ದಾರ್ ಹುದ್ದೆಗಳು ಕಾರ್ಯನಿರ್ವಹಿಸುತ್ತಿದ್ದು, ಭೂಸ್ವಾಧೀನ ಕಚೇರಿಗಳಲ್ಲಿ ಹಾಗೂ ಕೆಂಪೇಗೌಡ ಪ್ರಾಧಿಕಾರದಲ್ಲಿ ತಹಸೀಲ್ದಾರ್ -1 ತಾತ್ಕಾಲಿಕ - ನಿಯೋಜನೆ ಹುದ್ದೆಗಳು ಇವೆ. ಇನ್ನು ಹಲವಾರು ಇಲಾಖೆಗಳಲ್ಲಿ ತಾತ್ಕಾಲಿಕ - ನಿಯೋಜನೆ ಹುದ್ದೆಗಳಿದ್ದು, ಸದರಿ ಮಾಹಿತಿಯನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆಯಬೇಕಿದೆ. ಆದರೆ, ಆದೇಶ ಲಭ್ಯವಿಲ್ಲವೆಂಬ ಕಾರಣ ಹಾಗೂ ಸದರಿ ಇಲಾಖೆಗಳಿಂದ ಮಾಹಿತಿ ಒದಗಿಸಿಲ್ಲ ಎಂಬ ಕಾರಣಗಳಿಂದ ಕಡಿತಗೊಳಿಸಿರುವುದು ಸಮರ್ಥನೀಯವಲ್ಲ ಎಂದು ನೌಕರರು ಕಿಡಿಕಾರಿದರು.
ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿಗೆ ಕಂದಾಯ ಇಲಾಖೆ ನೌಕರರ ಮನವಿ ಸಲ್ಲಿಸಿದರು.