ನಗರಸಭೆ 98 ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಮೀಸಲು ಕಗ್ಗಂಟು

KannadaprabhaNewsNetwork |  
Published : Apr 04, 2025, 12:51 AM ISTUpdated : Apr 04, 2025, 12:10 PM IST
ಸಿಕೆಬಿ-4 ಗುರುವಾರ ರಾತ್ರಿ 8-30 ಆದರೂ ನಗರಸಭೆ ಆಯುಕ್ತರು, ಅಧ್ಯಕ್ಷರು, ಸದಸ್ಯರು ಸುಧೀರ್ಘ ಚರ್ಚೆಯಲ್ಲಿ ಮುಳುಗಿರುವ ದೃಶ್ಯ | Kannada Prabha

ಸಾರಾಂಶ

ಏ.5ರಂದು ನಡೆಯಬೇಕಿದ್ದ ನಗರಸಭೆ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ಮುಂದೂಡಲು ಆಯುಕ್ತರ ಮೂಲಕ ಕಾಣದ ಕೈಗಳು ಪ್ರಯತ್ನಿಸುತ್ತಿದ್ದಾರೆಂದು ಆರೋಪಿಸಿ ಅಧ್ಯಕ್ಷ ಉಪಾಧ್ಯಕ್ಷರು ಮತ್ತು ಆಡಳಿತ ಪಕ್ಷದ ಸದಸ್ಯರು ಆಯುಕ್ತರ ವಿರುದ್ಧ ತಿರುಗಿ ಬಿದ್ದಿರುವ ಘಟನೆ ಇಲ್ಲಿನ ನಗರಸಭೆಯಲ್ಲಿ ಗುರುವಾರ ನಡೆದಿದೆ.

 ಚಿಕ್ಕಬಳ್ಳಾಪುರ : ಏ.5ರಂದು ನಡೆಯಬೇಕಿದ್ದ ನಗರಸಭೆ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ಮುಂದೂಡಲು ಆಯುಕ್ತರ ಮೂಲಕ ಕಾಣದ ಕೈಗಳು ಪ್ರಯತ್ನಿಸುತ್ತಿದ್ದಾರೆಂದು ಆರೋಪಿಸಿ ಅಧ್ಯಕ್ಷ ಉಪಾಧ್ಯಕ್ಷರು ಮತ್ತು ಆಡಳಿತ ಪಕ್ಷದ ಸದಸ್ಯರು ಆಯುಕ್ತರ ವಿರುದ್ಧ ತಿರುಗಿ ಬಿದ್ದಿರುವ ಘಟನೆ ಇಲ್ಲಿನ ನಗರಸಭೆಯಲ್ಲಿ ಗುರುವಾರ ನಡೆದಿದೆ.

ನಗರಸಭೆ ಸುಪರ್ಧಿಯಲ್ಲಿರುವ 98 ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ಏ.5ರಂದು ಕಾನೂನು ಬದ್ಧವಾಗಿ ನಡೆಸಲು ನಗರಾಡಳಿತ ಪ್ರಕಟಣೆ ಹೊರಡಿಸಿ, ಬೇಕಾದ ವ್ಯವಸ್ಥೆ ಮಾಡಿಕೊಂಡಿದೆ. ಈ ಸಂಬಂಧ ಅಧ್ಯಕ್ಷ ಉಪಾಧ್ಯಕ್ಷರು ಇತ್ತಿಚೆಗೆ ತುರ್ತು ಸುದ್ದಿಗೋಷ್ಟಿ ನಡೆಸಿ ಕಾಣದ ಕೈಗಳು ಹರಾಜು ಪ್ರಕ್ರಿಯೆ ನಿಲ್ಲಿಸಲು ಮುಂದಾಗಿದ್ದಾರೆ. ಒಂದು ವೇಳೆ ಹರಾಜು ಪ್ರಕ್ರಿಯೆ ನಿಂತಲ್ಲಿ ತಡೆಗೆ ಕಾರಣರಾದವರ ಮಾಹಿತಿ ಬಹಿರಂಗ ಪಡಿಸುವ ಎಚ್ಚರಿಕೆ ರವಾನಿಸಿದ್ದರು.ಇದರ ಬೆನ್ನಲ್ಲೆ ಗುರುವಾರ ರಾತ್ರಿ 8-30 ಗಂಟೆಯಾದರೂ ಕೂಡ ಅಧ್ಯಕ್ಷರು, ಉಪಾಧ್ಯಕ್ಷರು ಹರಾಜು ಪ್ರಕ್ರಿಯೆ ನಿಲ್ಲಬಾರದು, ಎಲ್ಲಾ ಸಮುದಾಯಗಳಿಗೂ ಅವಕಾಶ ನೀಡಬೇಕು ಎಂದು ಆಯುಕ್ತರ ಎದುರು ಪಟ್ಟು ಹಿಡಿದು ಕೂತಿದ್ದಾರೆ.

ತಡರಾತ್ರಿಯಾದರೂ ಸಭೆ ಮಾಡಲು ಕಾರಣ ಪರಿಶಿಷ್ಟಜಾತಿ ಜನಾಂಗದವರನ್ನು ಹರಾಜು ಪ್ರಕ್ರಿಯೆಯಿಂದ ದೂರವಿಡುವುದೇ ಆಗಿದೆ ಎನ್ನುವ ಆರೋಪಗಳು ಕೂಡ ಸಾರ್ವಜನಿಕ ವಲಯದಲ್ಲಿ ಬಿರುಗಾಳಿಯಂತೆ ಹರಡಿದ್ದು ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.

ಈಗಿರುವ ಮಳಿಗೆಗಳಲ್ಲಿ ಬಹುತೇಕ ಬಲಜಿಗ ಸಮುದಾಯವೇ ಹೆಚ್ಚಿನ ಸಂಖ್ಯೆಯಲ್ಲಿ ಅಂಗಡಿಗಳನ್ನು ನಡೆಸುತ್ತಿದ್ದಾರೆ. ಮೀಸಲಾತಿ ಜಾರಿಯಾದರೆ 18 ರಿಂದ 20 ಅಂಗಡಿಗಳು ಎಸ್ಸಿ,ಎಸ್‌ಟಿ ವರ್ಗದ ಪಾಲಾಗಲಿವೆ.ಇದು ಆಗದಂತೆ ನೋಡಿಕೊಳ್ಳುವ ಕೆಲಸವನ್ನು ಬಲಜಿಗ ಮುಖಂಡರು ಮಾಡುತ್ತಿದ್ದಾರೆ ಎಂಬ ದೂರಿದೆ. ಇದಕ್ಕೆ ಪುಷ್ಟಿನೀಡುವಂತೆ ಬಲಜಿಗ ಸಮುದಾಯದ ಅಂಗಡಿ ಮಾಲೀಕರು ಶಾಸಕ ಪ್ರದೀಪ್ ಈಶ್ವರ್ ಅವರನ್ನು ಬುಧವಾರ ಭೇಟಿ ಮಾಡಿ ಹರಾಜು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ ಎನ್ನುವ ಸಂಗತಿ ಕೂಡ ನಗರದಾದ್ಯಂತ ಕೇಳಿಬರುತ್ತಿದೆ.ಒಂದು ವೇಳೆ ಮಳಿಗೆಗಳ ಹರಾಜು ನಿಂತಲ್ಲಿ, ಇದರಲ್ಲಿ ಶಾಸಕರ ಪಾತ್ರವನ್ನು ಅಲ್ಲಗಳೆಯುವಂತಿಲ್ಲ, ಶಾಸಕರ ಬೆಂಬಲದಲ್ಲಿಯೇ ಆಯುಕ್ತರು ಹರಾಜು ಪ್ರಕ್ರಿಯೆ ಮುಂದೂಡಲು ಮುಂದಾಗಿದ್ದಾರೆ ಎಂಬ ಆರೋಪವನ್ನು ನಗರಸಭೆ ಹೊತ್ತುಕೊಳ್ಳಬೇಕಾಗಬಹುದು ಎಂಬ ಮಾತುಗಳು ಕೂಡ ಕಾಡ್ಗಿಚ್ಚಿನಂತೆ ಹರಿದಾಡಿ ಕ್ಷಣಕ್ಕೊಂದು ಬಣ್ಣ ಪಡೆಯುತ್ತಿವೆ.ಇದೇ ಕಾರಣಕ್ಕೆ ಗುರುವಾರ ರಾತ್ರಿ 8-30 ಗಂಟೆ ಆದರೂ ನಗರಸಭೆಯಲ್ಲಿ ಆಯುಕ್ತರು ಕುಳಿತ್ತಿ ದ್ದಾರೆ. ಇವರ ಜತೆಗೆ ಅಧ್ಯಕ್ಷ ಉಪಾಧ್ಯಕ್ಷರು ವಾಗ್ವಾದ ನಡೆಸಿದ್ದಾರೆ. ಆಯುಕ್ತರು ತಾವೇ ಹೊರಡಿಸಿರುವ ಪ್ರಕಟಣೆಯಂತೆ ಹರಾಜು ಪ್ರಕ್ರಿಯೆ ನಡೆಸುವರೋ, ಇಲ್ಲಾ ಒತ್ತಡಕ್ಕೆ ಮಣಿದು ಕುಂಟು ನೆಪಗಳನ್ನು ಹೇಳಿ ಮುಂದೂಡುವರೋ ಕಾದು ನೋಡಬೇಕಿದೆ.ಈ ಎಲ್ಲಾ ಬೆಳವಣಿಗೆಗಳು ಏ.5ರಂದು ಹರಾಜು ಪ್ರಕ್ರಿಯೆ ನಡೆಯುವುದೋ ಇಲ್ಲವೋ ಎಂಬ ಬಗ್ಗೆ ಗುಮಾನಿಯನ್ನು ಸಾರ್ವಜನಿಕ ವಲಯದಲ್ಲಿ ಮೂಡಿಸಿರುವುದು ಸುಳ್ಳಲ್ಲ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ