ರೋಣ: ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಅವರಿಗೂ ಉತ್ತಮ ಶಿಕ್ಷಣ ದೊರಕಲಿ ಎಂಬ ಹಿತದೃಷ್ಟಿಯಿಂದ ಪಟ್ಟಣದಲ್ಲಿ ₹38 ಕೋಟಿ ವೆಚ್ಚದಲ್ಲಿ ಕಾರ್ಮಿಕ ವಸತಿ ಶಾಲೆ ನಿರ್ಮಿಸಲಾಗುವುದು. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದೆ ಎಂದು ಖನಿಜ ಅಭಿವೃದ್ಧಿ ನಿಗಮ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.
ಕಾರ್ಮಿಕರ ಮಕ್ಕಳ ವಸತಿಶಾಲೆ ನಿರ್ಮಾಣ ಕಾಮಗಾರಿ ಶೀಘ್ರ ಕೈಗೊಳ್ಳಲಾಗುವುದು. ಈಗಾಗಲೆ ಅಲ್ಪಸಂಖ್ಯಾತರ ವಸತಿ ಶಾಲೆಯು ಪಾಲಿಟೆಕ್ನಿಕ್ ಕಾಲೇಜಿನ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಪ್ರಾರಂಭಿಸಿದ್ದು, ಇದರ ಕಟ್ಟಡವನ್ನು ಅಬ್ಬಿಗೇರಿ ರಸ್ತೆಯಲ್ಲಿನ ಅಟಲ ಬಿಹಾರಿ ವಾಜಪೇಯಿ ವಸತಿಶಾಲೆ ಬಳಿ 7 ಎಕರೆ ಪ್ರದೇಶಲ್ಲಿ ಸ್ಥಾಪಿಸಲಾಗುವುದು.
₹12 ಕೋಟಿ ವೆಚ್ಚದಲ್ಲಿ ರೈತರಿಗ ಅನುಕೂಲವಾಗುವಲ್ಲಿ ಬೆಳೆ ಶಿಥಲೀಕರಣ ಘಟಕ( ಕೋಲ್ಡ್ ಸ್ಟೋರೇಜ್) ನಿರ್ಮಿಸಲಾಗುವುದು. ಮುಖ್ಯಮಂತ್ರಿಗಳ ಸಣ್ಣ ಮತ್ತು ದೊಡ್ಡ ಪಟ್ಟಣ ಅಭಿವೃದ್ಧಿ ಅನುದಾನದಲ್ಲಿ ₹8 ಕೋಟಿ ವೆಚ್ಚದಲ್ಲಿ ವಾರ್ಡ್ 22, 19, 22, 5, 7,11 ಸೇರಿದಂತೆ ವಿವಿಧ ವಾರ್ಡ್ನಲ್ಲಿ ಸಿಸಿ ರಸ್ತೆ ಚರಂಡಿ ನಿರ್ಮಿಸಲಾಗುವುದು. ₹1.5 ಕೋಟಿ ವೆಚ್ಚದಲ್ಲಿ ಸೂಡಿ ವೃತ್ತದಿಂದ ಸಿದ್ಧಾರೂಢಮಠದ ವರೆಗೆ ರಸ್ತೆ ಅಭಿವೃದ್ಧಿ ಮಾಡಲಾಗುವುದು. ಬಾಸಲಾಪುರ ರಸ್ತೆ ಸುಭಾಸ ನಗರಕ್ಕೆ ತೆರಳುವ ರಸ್ತೆಗೆ ₹1 ಕೋಟಿ ವೆಚ್ಚದಲ್ಲಿ ಎರಡು ಬದಿ ಚರಂಡಿ ನಿರ್ಮಿಸಲಾಗುವುದು. ರೋಣ ಪಟ್ಟಣ ಪ್ರವೇಶದ ನಾಲ್ಕು ಕಡೆ ಸ್ವಾಗತ ಕಮಾನು ನಿರ್ಮಿಸಲಾಗುವುದು. ₹1.5 ಕೋಟಿ ವೆಚ್ಚದಲ್ಲಿ ಭಾರತರತ್ನ ಭೀಮಸೇನ ಜೋಶಿ ಜನ್ಮಸ್ಥಳವಾದ ರೋಣದಲ್ಲಿ ಡಾ. ಭೀಮಸೇನ ಜೋಶಿ ಸ್ಮಾರಕಭವನ ನಿರ್ಮಿಸಲಾಗುವುದು ಎಂದರು.ಪುರಸಭೆ ಸದಸ್ಯ ಮಲ್ಲಯ್ಯ ಗುರುಬಸಪ್ಪನಮಠ ಮಾತನಾಡಿ, ಹಿಂದುಸ್ತಾನಿ ಸಂಗೀತ ದಿಗ್ಗಜ ಡಾ. ಭೀಮಸೇನ ಜೋಶಿ ಅವರ ಜನ್ಮಸ್ಥಳ ರೋಣ ಪಟ್ಟಣ ಎಂಬುದು ಹೆಮ್ಮೆಯ ಸಂಗತಿ. ಅವರ ನೆನಪಿಗಾಗಿ ರೋಣದಲ್ಲಿ ಸ್ಮಾರಕ ಭವನ ನಿರ್ಮಿಸಲು ಸರ್ಕಾರ ₹1.5 ಕೋಟಿ ಬಿಡುಗಡೆ ಮಾಡಿದ್ದು, ಸ್ಮಾರಕ ಭವನ ನಿರ್ಮಾಣಕ್ಕೆ ನನ್ನ ಜಮೀನು ಸರ್ವೆ ನಂಬರ್ 1005/2 ರಲ್ಲಿ 5 ಗುಂಟೆ ಜಾಗ ದಾನವಾಗಿ ಕೊಡುತ್ತೇನೆ. ನಾಳೆಯೇ ಕಾಗದ ಪತ್ರ ನೊಂದಣಿ ಮಾಡಿಸಿ ಕೊಡುತ್ತೇನೆ ಎಂದು ವಾಗ್ದಾನ ಮಾಡಿದರು.