- ಕಾಡಾನೆಗಳು,ಕಾಡುಕೋಣಗಳ ಹಾವಳಿ । ಕೆರೆ ಪಂಚಾಯಿತಿ ಗ್ರಾಮಗಳೆಲ್ಲ ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೆ .ನೆಮ್ಮಾರ್ ಅಬೂಬಕರ್ಕನ್ನಡಪ್ರಭ ವಾರ್ತೆ, ಶೃಂಗೇರಿದೂರ ದೂರದಲ್ಲಿ ಗುಂಪು ಮನೆಗಳು, ಒಂಟಿ ಮನೆಗಳು, ಪರಿಶಿಷ್ಟ ಜಾತಿ, ಪಂಗಡಗಳ ಕಾಲೋನಿಗಳು, ಗಿರಿಜನ ಹಾಡಿಗಳು ಸಹಿತ ಅಲ್ಲಲ್ಲಿ ಜನವಸತಿ ಪ್ರದೇಶಗಳಿರುವ ಇಲ್ಲಿ ಓಡಾಡಲು ಸರಿಯಾದ ರಸ್ತೆಗಳಿಲ್ಲ. ಸೇತುವೆಗಳಿಲ್ಲ, ಕೆಲವೆಡೆ ವಿದ್ಯುತ್ ಸಂಪರ್ಕಗಳೇ ಇಲ್ಲ. ಮೊಬೈಲ್, ದೂರವಾಣಿಯಂತೂ ಮರೀಚಿಕೆ.ಮಣ್ಣು, ಜಲ್ಲಿಕಲ್ಲು, ಕಾಲುದಾರಿಗಳಲ್ಲಿಯೇ ಬಹುತೇಕ ಗ್ರಾಮಸ್ಥರ ಸಂಚಾರ. ಯಾವ ಕ್ಷಣದಲ್ಲಿ ಕಾಡಾನೆ, ಕಾಡುಕೋಣಗಳು ಸಹಿತ ಕಾಡುಪ್ರಾಣಿಗಳು ಮೈಮೇಲೆ ಎರಗುತ್ತದೆಯೋ ಎಂಬ ಭಯದೊಂದಿಗೆ ಜೀವಿಸುತ್ತಿರುವ ಗ್ರಾಮಸ್ಥರ ಮೇಲೆ ಇದೀಗ ಪರಿಸರ ಸೂಕ್ಷ್ಮ ವಲಯದ ತೂಗುಕತ್ತಿಯಾಗಿ ನಿಂತಿದೆ.ಶೃಂಗೇರಿ ತಾಲೂಕಿನ ಸೂಕ್ಷ್ಮ ವಲಯ ವ್ಯಾಪ್ತಿಗೆ ಒಳಪಟ್ಟ ಕೆರೆ ಪಂಚಾಯಿತಿ ಸುತ್ತಮುತ್ತಲಿನ ಗ್ರಾಮಸ್ಥರ ಜ್ವಲಂತ ಸಮಸ್ಯೆ ಇದು. ಈ ಜನರು ಪ್ರಕೃತಿ, ಪ್ರಾಣಿ ಪಕ್ಷಿಗಳ ನಡುವೆ ಕೃಷಿ, ಬೇಸಾಯ, ಗುಡಿಕೈಗಾರಿಕೆಯಂತಹ ಕುಲಕಸುಬು ಜತೆ ಜೀವನೋಪಾಯ ಕಂಡುಕೊಂಡವರು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪ್ರದೇಶ ಘೋಷಣೆಯಿಂದ ಇವರ ಬದುಕು ಕಷ್ಟಕ್ಕೆ ಸಿಲುಕಿತು. ಈ ಮೊದಲೇ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿದ್ದ ಈ ಪ್ರದೇಶದಲ್ಲಿ ಕಟ್ಟುಪಾಡುಗಳು ವಿಧಿಸಲ್ಪಟ್ಟು ರಸ್ತೆ, ಸೇತುವೆ, ವಿದ್ಯುತ್, ಕುಡಿವ ನೀರು ಸಹಿತ ಮೂಲ ಸೌಕರ್ಯಕ್ಕೆ ಅಡ್ಡಿಯಾಗಿತ್ತು. ಇಲ್ಲಿ ಅಭಿವೃದ್ಧಿಯೇ ಮರೀಚಿಕೆಯಾಗಿ ಗ್ರಾಮಗಳೆಲ್ಲ ನಕ್ಸಲ್ ಪೀಡಿತ ಪ್ರದೇಶಗಳಾದವು. ಇದರಿಂದ ಇನ್ನೂ ಕೆಲ ವರ್ಷ ಕಾಲ ಸಂಕಷ್ಟದಲ್ಲಿ ನರಳಿತು. ನಂತರದಲ್ಲಿ ನಕ್ಸಲ್ ಪ್ಯಾಕೇಜ್ ವಿಶೇಷ ಅನುದಾನದಡಿ ಅಭಿವೃದ್ಧಿ ಕಾಮಗಾರಿಗಳಿಗೆ ಅರಣ್ಯ ಇಲಾಖೆ ಅಡ್ಡಿಯಾಗಿ ಮತ್ತೆ ಗ್ರಾಮ ಹಾಗೂ ಗ್ರಾಮಸ್ಥರ ಬವಣೆ ಹೇಳತೀರದಾಯಿತು.ಇದೀಗ ಮತ್ತೆ ಕೇಂದ್ರದ ಪರಿಸರ, ಅರಣ್ಯ, ಹವಾಮಾನ ಬದಲಾವಣೆ ಸಚಿವಾಲಯ ಕಸ್ತೂರಿ ರಂಗನ್ ವರದಿಯಂತೆ ಪರಿಸರ ಸೂಕ್ಷ್ಮ ವಲಯ 7 ನೇ ಅಧಿಸೂಚನೆ ಹೊರಡಿಸಿ ಅದರಡಿ ಕೆರೆ ಪಂಚಾಯಿತಿ ಎಲ್ಲಾ ಗ್ರಾಮಗಳು ಸೇರಿಸಿದೆ. ಇದರಿಂದ ಈ ಜನರ ಜೀವನ ಬೆಂಕಿಯಿಂದ ಬಾಣಲೆಗೆ ಎಂಬಂತಾಗಿದೆ. ರಸ್ತೆ, ಸೇತುವೆ, ವಿದ್ಯುತ್,ಮೊಬೈಲ್ ಟವರ್ ಗಳ ಸಹಿತ ಮೂಲ ಸೌಕರ್ಯ ಕನಸಿನ ಮಾತಾಗಿರುವ ಇಲ್ಲಿ ಈ ವರದಿ ಯಥಾವತ್ ಜಾರಿಯಾದರೆ ಬದುಕು ದುರ್ಬರವಾದೀತು ಎಂಬ ನೋವು ಮಡುಗಟ್ಟಿದೆ.ಕೆರೆಕಟ್ಟೆ, ಭಲೇಕಡಿ, ಮುಡುಬ, ಶೀರ್ಲು, ಹಾದಿ ಕಿರೂರು, ಮಾತೋಳ್ಳಿ, ಸುಂಕದ ಮಕ್ಕಿ ಸೇರಿ ಬಹುತೇಕ ಈ ಭಾಗದ ಕುಗ್ರಾಮ ಗಳಲ್ಲಿ ವಾಹನ ಸಂಚಾರಗಳಿಲ್ಲದಿದ್ದರೂ ಕಾಡಾನೆ, ಕಾಡುಕೋಣಗಳ ಸಂಚಾರಕ್ಕೆ ಕೊರತೆಯಿಲ್ಲ ಇವುಗಳಿಂದ ಜಮೀನು ನಾಶದ ಜೊತೆಗೆ ಜೀವವನ್ನು ತೆರುವ ಪರಿಸ್ಥಿತಿಯನ್ನು ಸ್ಥಳೀಯರು ಎದುರಿಸುತ್ತಿದ್ದಾರೆ.ಕೆಲವರು ಸ್ವಇಚ್ಛೆಯಿಂದ ರಾಷ್ಟ್ರೀಯ ಉದ್ಯಾನವನ ಸಂತ್ರಸ್ತರೆಂದು ಪರಿಹಾರ ಪಡೆದರೆ, ಕೆಲವರು ತುದಿಗಾಲಲ್ಲಿ ನಿಂತಿದ್ದಾರೆ. ಉಳಿದವರು ಭಯ ಭೀತಿ,ಆತಂಕದ ನಡುವೆಯೇ ಇಲ್ಲಿಯೇ ಬದುಕು ಸಾಗಿಸುತ್ತಿದ್ದಾರೆ. ಬಹುತೇಕ ಶಾಲೆಗಳು ಮುಚ್ಚಿವೆ. ಅರಣ್ಯ ನೀತಿಗಳೇ ಬದುಕನ್ನು ಅಸಹನೀಯವಾಗಿಸಿರುವಾಗ ವರದಿ ಯಥಾವತ್ ಜಾರಿಯಾದರೆ ಇನ್ನೆಷ್ಟು ಕಂಟಕ ಎದುರಿಸಬೇಕಾಗಬಹುದು ಎಂಬುದು ಗ್ರಾಮಸ್ಥರ ಅಳಲು.