ಸಿರುಗುಪ್ಪ: ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆಯ ಸಮಿತಿಯ ವತಿಯಿಂದ ಶುಕ್ರವಾರ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ ಶಾಸಕ ಬಿ.ಎಂ. ನಾಗರಾಜ ಅವರು ಧ್ವಜಾರೋಹಣ ನೆರವೇರಿಸಿದರು.
ಶಾಸಕ ಬಿ.ಎಂ. ನಾಗರಾಜ, ತಹಸೀಲ್ದಾರ್ ಗೌಸಿಯಾ ಬೇಗಂ, ಡಿವೈಎಸ್ಪಿ ಸಂತೋಷ ಚವ್ಹಾಣ ಅವರು ತೆರದ ವಾಹನದಲ್ಲಿ ವಿವಿಧ ಶಾಲಾ ಮಕ್ಕಳಿಂದ ಧ್ವಜವಂದನೆ ಸ್ವೀಕರಿಸಿದರು.ಆನಂತರ ವಿವಿಧ ಶಾಲಾ ವಿದ್ಯಾರ್ಥಿಗಳ ತಂಡದಿಂದ ಪಥಸಂಚಲನ ನಡೆಸಿ, ಗಣ್ಯರಿಗೆ ಧ್ವಜವಂದನೆ ಸಲ್ಲಿಸಿದರು.
ವೇದಿಕೆ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಗೌಸೀಯ ಬೇಗಂ ಮಾತನಾಡಿ, ದೇಶದ ಗಡಿ ಕಾಯುವ ಸೈನಿಕರು, ದೇಶಕ್ಕೆ ಅನ್ನ ನೀಡುವ ರೈತರು, ನಮಗಾಗಿ ದುಡಿಯುತ್ತಿರುವ ಕಾರ್ಮಿಕರ ಸೇವೆಯನ್ನು ಈಶ ಸೇವೆಯೆಂದು ಭಾವಿಸಿ ಅವರಿಗೆ ಗೌರವ ನೀಡುವ ಪರಂಪರೆಯನ್ನು ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದರು.ಶಾಸಕ ಬಿ.ಎಂ. ನಾಗರಾಜ ಮಾತನಾಡಿ, ಇಂದು ಅನೇಕ ಸವಾಲುಗಳ ಮಧ್ಯೆ ಸಿರುಗುಪ್ಪ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ತಂಡದಿಂದ ದೇಶಭಕ್ತಿಗಳಿಗೆ ನೃತ್ಯ ಪ್ರದರ್ಶಿಸಿದರು. ನೃತ್ಯದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಪ್ರೋತ್ಸಾಹಿಸಲಾಯಿತು.ಸ್ವಾತಂತ್ರ್ಯೋತ್ಸವ ಅಂಗವಾಗಿ ವಿವಿಧ ಕ್ರೀಡಾಕೂಟಗಳು ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ಪಥಸಂಚನದಲ್ಲಿ ಭಾಗವಹಿಸಿದ ವಿದ್ಯಾರ್ಥಿ ತಂಡಗಳಿಗೆ ಪ್ರಶಸ್ತಿ ಪತ್ರ ನೀಡಿದರು.
ಅಂಗವಿಕಲರಿಗೆ ತ್ರಿಚಕ್ರವಾಹನಗಳನ್ನು ಶಾಸಕರು ನೀಡಿದರು. ವಿದ್ಯುತ್ ಸರಬರಾಜು ಇಲಾಖೆಯ ಎಇಇ ಅವರು ಸೌರಫಲಕ ಅಳವಡಿಕೆ ಕುರಿತು ಮಾಹಿತಿ ನೀಡಿದರು.ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಶಾಸಕರು ಲಗು ಉಪಾಹಾರ ನೀಡಿದ್ದರು.
ನಗರಸಭೆ ಅಧ್ಯಕ್ಷೆ ಬಿ. ರೇಣುಕಮ್ಮ ಸಣ್ಣವೆಂಕಟೇಶ, ಉಪಾಧ್ಯಕ್ಷೆ ಯಶೋದಾಮೂರ್ತಿ, ಪೌರಾಯುಕ್ತ ಗಂಗಾಧರ, ತಾಪಂ ಇಒ ಪವನ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಗುರಪ್ಪ, ಜಿಪಂ ಉಪವಿಭಾಗ ಎಇಇ ತಿಪ್ಪೇಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಡ್ಡೆರು ಸಿದ್ದಯ್ಯ, ಪರಿಶಿಷ್ಟ ಪಂಗಡ ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಮ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಬಿ. ರಮೇಶ ಭಾಗವಹಿಸಿದ್ದರು.