ಸ್ವರಕ್ಷಣೆ ಜತೆ ಸಮಾಜ ರಕ್ಷಣೆ ಜವಾಬ್ದಾರಿ: ಡಿಸಿಪಿ ಉಮೇಶ್‌

KannadaprabhaNewsNetwork |  
Published : Jan 20, 2024, 02:04 AM IST
ಎಸಿಪಿ ಉಪಾಸೆ ಮಾತನಾಡುತ್ತಿರುವುದು  | Kannada Prabha

ಸಾರಾಂಶ

ಅಪರಾಧ ಚಟುವಟಿಕೆ ತಡೆಯುವುದು ಪೊಲೀಸ್‌ ಇಲಾಖೆಯ ಜವಾಬ್ದಾರಿ. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಬಂದೂಕು ತರಬೇತಿ ಪಡೆದ ಶಿಬಿರಾರ್ಥಿಗಳು ಪೋಲಿಸ್‌ ಇಲಾಖೆ ಜತೆಗೆ ಕೈಜೋಡಿಸಬೇಕು ಎಂದು ಮಂಗಳೂರು ನಗರ ಸಶಸ್ತ್ರ ಮೀಸಲು ಪಡೆಯ ಡಿಸಿಪಿ ಉಮೇಶ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರುಭಾರತೀಯ ಪ್ರಜೆಗಳಿಗೆ ಸ್ವರಕ್ಷಣೆ ಜತೆಗೆ ಸಮಾಜದ ರಕ್ಷಣೆಯ ಜವಾಬ್ದಾರಿ ಅತ್ಯಗತ್ಯ. ಸದೃಢ ಹಾಗೂ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ನಾಗರಿಕ ಬಂದೂಕು ತರಬೇತಿ ಕಾರ್ಯಕ್ರಮಗಳು ಪೂರಕವಾಗಿವೆ ಎಂದು ಮಂಗಳೂರು ನಗರ ಸಶಸ್ತ್ರ ಮೀಸಲು ಪಡೆಯ ಡಿಸಿಪಿ ಉಮೇಶ್‌ ಹೇಳಿದರು.

ಮಂಗಳೂರು ನಗರ ಸಶಸ್ತ್ರ ಮೀಸಲು ಪಡೆ ಸಹಯೋಗದಲ್ಲಿ ಶುಕ್ರವಾರ ನಾಗರಿಕ ಬಂದೂಕು ತರಬೇತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾಗರಿಕ ಬಂದೂಕು ತರಬೇತಿಯಲ್ಲಿ ಬಂದೂಕು ನಿರ್ವಹಣೆ, ಗುರಿ, ಲೋಡಿಂಗ್‌ ಬಗ್ಗೆ ತರಬೇತಿ ಹಾಗೂ ಮಾಹಿತಿ ನೀಡುವುದರ ಜತೆಗೆ ನಾಗರಿಕನಿಗೆ ತನ್ನ ಜವಾಬ್ದಾರಿ ನೆನಪಿಸುವ ಕೆಲಸವನ್ನೂ ಮಾಡಲಾಗುತ್ತದೆ. ಅಪರಾಧ ಚಟುವಟಿಕೆ ತಡೆಯುವುದು ಪೊಲೀಸ್‌ ಇಲಾಖೆಯ ಜವಾಬ್ದಾರಿ. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಬಂದೂಕು ತರಬೇತಿ ಪಡೆದ ಶಿಬಿರಾರ್ಥಿಗಳು ಪೋಲಿಸ್‌ ಇಲಾಖೆ ಜತೆಗೆ ಕೈಜೋಡಿಸಬೇಕು ಎಂದರು.

ನಗರ ಸಶಸ್ತ್ರ ಮೀಸಲು ಪಡೆಯ ಎಸಿಪಿ ಎಂ.ಎ.ಉಪಾಸೆ ಮಾತನಾಡಿ, ಒಂದು ವಾರ ನಡೆಯುವ ನಾಗರಿಕ ಬಂದೂಕು ತರಬೇತಿಯು ಕೇವಲ ಬಂದೂಕು ಪರವಾನಗಿ ಪಡೆಯಲು ನೀಡುವುದಲ್ಲ. ತುರ್ತು ಸಂದರ್ಭ ನಾಗರಿಕರ ಸ್ವರಕ್ಷಣೆಗಾಗಿ ತರಬೇತಿ ನೀಡುವುದಾಗಿದೆ. ಈ ಬಾರಿ 25ಕ್ಕೂ ಅಧಿಕ ಸಂಖ್ಯೆಯಲ್ಲಿ ನಾಗರಿಕರು ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಉತ್ತಮ ಬೆಳವಣಿಗೆ ಎಂದರು.

ಸಶಸ್ತ್ರ ಮೀಸಲು ಪಡೆಯ ಪೊಲೀಸ್‌ ನಿರೀಕ್ಷಕ ಮೂರ್ತಿ ನಾಯಕ್‌, ಪೊಲೀಸ್‌ ಉಪನಿರೀಕ್ಷಕ ಗಣೇಶ್‌, ಹೆಡ್‌ ಕಾನ್‌ಸ್ಟೆಬಲ್‌ ಪ್ರಮೋದ್‌ ಶೆಟ್ಟಿ, ಎಎಸ್‌ಐ ರೆಜಿ ಥಾಮಸ್‌ ಇದ್ದರು.

ರಕ್ಷಣೆಗೆ ನಾಗರಿಕ ಬಂದೂಕು ತರಬೇತಿ: ನಗರ ಸಶಸ್ತ್ರ ಮೀಸಲು ಪಡೆ ಪೊಲೀಸ್‌ ನಿರೀಕ್ಷಕ ಮೂರ್ತಿ ನಾಯಕ್‌ ಮಾತನಾಡಿ, ನಾಗರಿಕ ಬಂದೂಕುಗಳನ್ನು ರಕ್ಷಣಾತ್ಮಕವಾಗಿ ಉಪಯೋಗಿಸಲು, ಗುರಿ ಅಭ್ಯಾಸದಲ್ಲಿ ಉಪಯೋಗಿಸುವ ಹಲವು ತಂತ್ರಗಳು ಹಾಗೂ ಬಂದೂಕು ಉಪಯೋಗಿಸಲು ತಿಳಿದುಕೊಳ್ಳಬೇಕಾದ ನಿಯಮಗಳ ಬಗ್ಗೆ ತರಬೇತಿ ನೀಡಲಾಗುವುದು. ತರಬೇತಿಯಲ್ಲಿ ಸ್ವಯಂರಕ್ಷಣೆ ಮಾಡಿಕೊಳ್ಳುವ ಧ್ಯೇಯೋದ್ದೇಶದಿಂದ ಮೂರು ಮಾದರಿಯ ಫೈರಿಂಗ್‌, ಆಯುಧಗಳ ರಕ್ಷಣೆ, ಬಂದೂಕು ನಿರ್ವಹಣೆ ಮತ್ತು ಸ್ವಚ್ಛತೆ ಬಗ್ಗೆ ತರಬೇತಿ ನೀಡಲಾಗುವುದು. ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿದ ಬಗ್ಗೆ ಪ್ರಮಾಣ ಪತ್ರ ನೀಡಲಾಗುವುದು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಶವಂತಪುರದಿಂದ ಹೊರಡೋ ಈ ರೈಲಿನ ಮಾರ್ಗ ಬದಲಾವಣೆ
ಬೆಂಗಳೂರಿಗರೆ ಎಚ್ಚರ : ಇಲ್ಲಿನ ತರಕಾರಿಗಳು ಸೇಫ್ ಅಲ್ಲ..!