ಕಂದಾಯ ಇಲಾಖೆ, ತಾಪಂನಲ್ಲಿ ದೂರು ಸ್ವೀಕಾರ ಕೇಂದ್ರ ಸ್ಥಾಪನೆಗೆ ಸಿಆರ್‌ಎಸ್‌ ಆದೇಶ

KannadaprabhaNewsNetwork |  
Published : Jun 25, 2025, 01:18 AM IST
24ಕೆಎಂಎನ್ ಡಿ22 | Kannada Prabha

ಸಾರಾಂಶ

ಅಕ್ರಮ ಸಕ್ರಮ ಸಮಸ್ಯೆ ಪರಿಹಾರಕ್ಕಾಗಿ ‘ಎ’ ಖಾತೆ, ‘ಬಿ’ ಖಾತೆ ಮಾಡುವ ಪ್ರಕ್ರಿಯೆ ಆರಂಭಿಸಿದ್ದೇವೆ. ಯಾವುದೇ ದಾಖಲೆಗಳನ್ನು ಮಾರ್ಪಡಿಸಲು ಒಂದಷ್ಟು ಸಮಯ ಬೇಕಾಗುತ್ತದೆ. ಪಂಚಾಯತ್ ರಾಜ್, ಕಂದಾಯ ಮತ್ತು ನಗರಾಭಿವೃದ್ಧಿ ಇಲಖೆಯಲ್ಲಿ ಸಾಕಷ್ಟು ಅಕ್ರಮ-ಸಕ್ರಮ ಸಮಸ್ಯೆಗಳಿದ್ದು, ಅವುಗಳಿಗೆ ಪರಿಹಾರೋಪಾಯ ಕಂಡು ಹಿಡಿಯುವ ಪ್ರಯತ್ನ ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಜನರ ದೈನಂದಿನ ದೂರುಗಳನ್ನು ಸ್ವೀಕರಿಸಿ ಕ್ರಮ ವಹಿಸಲು ಕಂದಾಯ ಇಲಾಖೆ ಮತ್ತು ತಾಲೂಕು ಪಂಚಾಯ್ತಿ ಕಚೇರಿಗಳಲ್ಲಿ ದೂರು ಸ್ವೀಕಾರ ಕೇಂದ್ರ ತೆರೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆದೇಶಿಸಿದರು.

ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಸರ್ಕಾರದಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜನಸ್ಪಂದನಾ ಸಭೆ ಉದ್ಘಾಟಿಸಿ ಮಾತನಾಡಿ, ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಜನರ ಎಲ್ಲಾ ಸಮಸ್ಯೆಗಳನ್ನು ಏಕ ಕಾಲಕ್ಕೆ ಪರಿಹರಿಸಲು ಸಾಧ್ಯವಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜನರ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಅಕ್ರಮ ಸಕ್ರಮ ಸಮಸ್ಯೆ ಪರಿಹಾರಕ್ಕಾಗಿ ‘ಎ’ ಖಾತೆ, ‘ಬಿ’ ಖಾತೆ ಮಾಡುವ ಪ್ರಕ್ರಿಯೆ ಆರಂಭಿಸಿದ್ದೇವೆ. ಯಾವುದೇ ದಾಖಲೆಗಳನ್ನು ಮಾರ್ಪಡಿಸಲು ಒಂದಷ್ಟು ಸಮಯ ಬೇಕಾಗುತ್ತದೆ. ಪಂಚಾಯತ್ ರಾಜ್, ಕಂದಾಯ ಮತ್ತು ನಗರಾಭಿವೃದ್ಧಿ ಇಲಖೆಯಲ್ಲಿ ಸಾಕಷ್ಟು ಅಕ್ರಮ-ಸಕ್ರಮ ಸಮಸ್ಯೆಗಳಿದ್ದು, ಅವುಗಳಿಗೆ ಪರಿಹಾರೋಪಾಯ ಕಂಡು ಹಿಡಿಯುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ನಾನು ಜಿಲ್ಲೆಯ ಜವಾಬ್ದಾರಿಯುತ ಸಚಿವನಾಗಿ ಜನರ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಪ್ರಯತ್ನ ಮಾಡುತ್ತಿದ್ದೇನೆ. ಜಿಲ್ಲೆಯಲ್ಲಿ ಉತ್ತಮ ಅಧಿಕಾರಿಗಳಿದ್ದಾರೆ. ಜಿಲ್ಲೆಯಲ್ಲಿ 20 ಸಾವಿರ ರೆವಿನ್ಯೂ ಪ್ರಕರಣ ಬಗೆಹರಿಸಲಾಗಿದೆ. ಕಳೆದ ಎಂಟು ತಿಂಗಳಿನಲ್ಲಿ ಪಾಂಡವಪುರ ಉಪ ವಿಭಾಗ ಒಂದರಲ್ಲಿಯೇ 8 ಸಾವಿರ ಪಹಣಿ ತಿದ್ದುಪಡಿ, 8 ಸಾವಿರ ಪೌತಿ ಖಾತೆ ಮಾಡಲಾಗಿದೆ ಎಂದರು.

ಲಂಚಕೊಟ್ಟು ತಾಲೂಕು ಕಚೇರಿ ಮುಂದೆ ನಿಲ್ಲುವುದು ನಿಲ್ಲಬೇಕು. ರೈತರು ತಮ್ಮ ತಮ್ಮ ಭೂದಾಖಲೆಗಳನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಜನರು, ರೈತರ ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಆಗಲೇಬೇಕಾಗುತ್ತದೆಂದು ಎಚ್ಚರಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಶಾಶ್ವತರಲ್ಲ. ಒಬ್ಬರ ಅಧಿಕಾರದ ಅವಧಿಯಲ್ಲಿ ಆದ ಅಭಿವೃದ್ಧಿ ಕಾಮಗಾರಿಗಳನ್ನು ಮತ್ತೊಬ್ಬರ ಅಧಿಕಾರದ ಅವಧಿಯಲ್ಲಿ ಮುಂದುವರಿಸಲೇ ಬೇಕು. ಅಭಿವೃದ್ಧಿಯಲ್ಲಿ ಪಕ್ಷ, ರಾಜಕಾರಣ ಸಲ್ಲದು. ಕೆಲಸ ಮಾಡುವವರನ್ನು ಬೈಯ್ಯವುದು ಸಹಜ. ನಾವು ಅಭಿವೃದ್ಧಿ ಕೆಲಸಗಳನ್ನು ಮಾಡಿದಷ್ಟು ವಿರೋಧಿಗಳ ಸಂಖ್ಯೆ ಹೆಚ್ಚಾಗುತ್ತದೆ. ಇದರ ಅನುಭವ ನನಗಾಗಿದೆ. ವಿರೋಧಿಗಳ ಟೀಕೆಗೆ ಹೆದರಿ ಅಭಿವೃದ್ಧಿ ಕೆಲಸದಿಂದ ಹಿಂಜರಿಯುವವನು ನಾನಲ್ಲ ಎಂದರು.

ಕಳೆದ ಅವಧಿಯಲ್ಲಿ ರಾಜ್ಯದಲ್ಲಿ 3 ಜನ ಮುಖ್ಯಮಂತ್ರಿಗಳಿದ್ದರು. ನಮ್ಮ ಅಧಿಕಾರದ ಅವಧಿಯಲ್ಲಿ ನಾನು ತಂದಿರುವ ಅನುದಾನ ಮತ್ತು ಹಿಂದಿನ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ತಂದಿರುವ ಅನುದಾನವನ್ನು ವಿಶ್ಲೇಷಿಸಲಿ ಎಂದು ಟೀಕೆಗಾರರಿಗೆ ಸವಾಲು ಹಾಕಿದರು.

ಇದೇ ವೇಳೆ ಪಂಚಾಯತ್ ರಾಜ್, ಇಲಾಕೆ, ಕಂದಾಯ ಮತ್ತು ಶಿಶು ಅಭಿವೃದ್ಧಿ ಇಲಾಖೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಚಿವರು ಫಲಾನುಭವ ಮಜೂರಾತಿ ಪತ್ರ ವಿತರಿಸಿದರು.

ಈ ವೇಳೆ ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್. ದೇವರಾಜು, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಪುರಸಭೆ ಅಧ್ಯಕ್ಷೆ ಪಂಕಜ ಪ್ರಕಾಶ್, ಜಿಲ್ಲಾಧಿಕಾರಿ ಡಾ.ಕುಮಾರ್, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಪಾಂಡವಪುರ ಉಪ ವಿಭಾಗಾಧಿಕಾರಿ ಡಾ.ಕೆ.ಆರ್.ಶ್ರೀನಿವಾಸ್, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಇಒ ಕೆ.ಸುಷ್ಮಾ, ಬಿಇಒ ತಿಮ್ಮೇಗೌಡ ಸೇರಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಮನ್ಮುಲ್ ನಿರ್ದೇಶಕ ಎಂಬಿ.ಹರೀಶ್, ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಕೆ.ಅಶೋಕ್, ತಾಲೂಕು ಕಾಂಗ್ರೆಸ್ ಉಸ್ತುವಾರಿ ಚಿನಕುರಳಿ ರಮೇಶ್ ಇದ್ದರು.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ