ಸುಳ್ಳು ಜಾತಿ ಪತ್ರಕ್ಕೆ ಕಡಿವಾಣ ಹಾಕದಿದ್ದರೆ ಕ್ರಾಂತಿ: ರಾಜಶೇಖರ್

KannadaprabhaNewsNetwork | Published : Dec 25, 2023 1:30 AM

ಸಾರಾಂಶ

ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಪಂಗಡದವರಿಂದ ಕ್ರಾಂತಿ, ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವ ಪ್ರಕರಣಗಳಿಗೆ ಸರ್ಕಾರ ಕಡಿವಾಣ ಹಾಕಬೇಕು. ಸಂವಿಧಾನಬದ್ಧವಾಗಿ ನೀಡುವ ಮೀಸಲಾತಿ ಹಕ್ಕು ಪಡೆದುಕೊಳ್ಳುವುದರಲ್ಲಿ ನಮ್ಮದು ಯಾವುದೇ ತಕರಾರು ಇಲ್ಲ.

ಕನ್ನಡಪ್ರಭ ವಾರ್ತೆ ಶಹಾಪುರ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವ ಪ್ರಕರಣಗಳಿಗೆ ಸರ್ಕಾರ ಕಡಿವಾಣ ಹಾಕದಿದ್ದರೆ, ಮುಂದಿನ ದಿನಗಳಲ್ಲಿ ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಪಂಗಡದವರಿಂದ ಖಂಡಿತವಾಗಿಯೂ ದೊಡ್ಡ ಕ್ರಾಂತಿಯನ್ನೆ ಎದುರಿಸಬೇಕಾಗುತ್ತದೆ ಎಂದು ಉತ್ತರ ಕರ್ನಾಟಕ ವಾಲ್ಮೀಕಿ ನಾಯಕ ಜನಾಂಗದ ಮುಖಂಡ ರಾಜಶೇಖರ ನಾಯಕ ಬೆಳಗಾವಿ ಎಚ್ಚರಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ವಾಲ್ಮೀಕಿ ಸಮುದಾಯದ ಉತ್ತರ ಕರ್ನಾಟಕ ಜಿಲ್ಲಾ ಅಧ್ಯಕ್ಷರ ಮತ್ತು ಹಿತ ಚಿಂತಕರ ಹಾಗೂ ಹೋರಾಟಗಾರರ ಸಭೆಯಲ್ಲಿ ಭಾಗವಹಿಸಿದ ಅವರು, ಈಗ ಹೊಸದಾಗಿ ಕೋಲಿ ಸಮಾಜದವರು ತಳವಾರ ಜಾತಿ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ. ಸಂವಿಧಾನಬದ್ಧವಾಗಿ ನೀಡುವ ಮೀಸಲಾತಿ ಹಕ್ಕು ಪಡೆದುಕೊಳ್ಳುವುದರಲ್ಲಿ ನಮ್ಮದು ಯಾವುದೇ ತಕರಾರು ಇಲ್ಲ. ಆದರೆ, ಎಸ್ಟಿ ಹೆಸರಿನಲ್ಲಿ ನಕಲಿ ಜಾತಿ ಪತ್ರ ಪಡೆದವರ ಹಾಗೂ ನೀಡಿದ ಅಧಿಕಾರಿಗಳ ವಿರುದ್ಧ ವಂಚನೆ ದೂರು ದಾಖಲಿಸುವ ಕಾರ್ಯ ನಡೆದಿದೆ ಎಂದು ಆರೋಪಿಸಿದರು.

ಹಿಂದುಳಿದ ವರ್ಗ (ಅ) ಅಡಿಯಲ್ಲಿ ಬರುವ ಗೊಂಡ, ತಳವಾರ ಸಮಾಜದವರು ಪರಿಶಿಷ್ಟ ಪಂಗಡ(ಎಸ್.ಟಿ) ನಕಲಿ ಪ್ರಮಾಣ ಪತ್ರ ಕಡಿವಾಣ ಹಾಕಿ ತಕ್ಷಣ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಒತ್ತಾಯಿಸಿದರು. ರಾಜ್ಯ ಸರಕಾರ ನಕಲಿ ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ವಾಲ್ಮೀಕಿ ನಾಯಕ ಸಮಾಜದವರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವಾಲ್ಮೀಕಿ ನಾಯಕರ ಸಂಘದ ಜಿಲ್ಲಾಧ್ಯಕ್ಷ ಗೌಡಪ್ಪಗೌಡ ಆಲ್ದಾಳ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕಾಗಿ ಗಂಭೀರವಾಗಿ ತನಿಖೆಗಳೂ ನಡೆಯಬೇಕಿದೆ. ಸುಳ್ಳು ಜಾತಿ ಪ್ರಮಾಣ ಪಡೆಯುವ ಪ್ರಕರಣಗಳನ್ನು ಬಯಲಿಗೆ ತರುವ ಮೂಲಕ ಸರ್ಕಾರಕ್ಕೆ, ಸಂಬಂಧಪಟ್ಟ ಇಲಾಖೆಗೆ ದೂರು ಸಲ್ಲಿಸಲು ಹೋರಾಟವನ್ನು ವ್ಯವಸ್ಥಿತವಾಗಿ ಮಾಡಬೇಕು ಎಂದರು.

ವಾಲ್ಮೀಕಿ ಸಮಾಜದ ಉತ್ತರ ಕರ್ನಾಟಕ ಅಧ್ಯಕ್ಷ ಮರೆಪ್ಪ ಮಗ್ದಂಪುರ, ತಾಲೂಕ ಅಧ್ಯಕ್ಷ ಮರೆಪ್ಪ ಪ್ಯಾಟಿ ಶಿರವಾಳ, ಡಾ.ಪ್ರಭು ಹುಲಿನಾಯಕ, ಶ್ರವಣಕುಮಾರ, ರವಿಕುಮಾರ ಯಕ್ಷಿಂತಿ, ಸತ್ಯನಾರಾಯಣ ಅನವಾರ ಇದ್ದರು.

Share this article