ಭತ್ತದ ಕಣಿಜದಲ್ಲಿ ಅನ್ನ, ಅಕ್ಷರ, ಸಾಹಿತ್ಯ ದಾಸೋಹ

KannadaprabhaNewsNetwork |  
Published : Feb 23, 2026, 02:15 AM IST
೨೨ಕೆಆರ್‌ಟಿ೧ಎ: ಕಾರಟಗಿ ತಾಲೂಕು ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಮಾತನಾಡಿದರು. | Kannada Prabha

ಸಾರಾಂಶ

ತುಂಗಭದ್ರಾ ಅಣೆಕಟ್ಟೆ ಕ್ರಸ್ಟ್ ಗೇಟ್ ವಿಚಾರ ಪ್ರಸ್ತಾಪಿಸಿ ಈ ಮಾಸತಾಂತ್ಯದೊಳಗೆ ಕನಿಷ್ಠ ೧೦ ಕ್ರಸ್ಟ್‌ ಗೇಟ್‌ ಜೋಡಿಸುವ ಕೆಲಸ ಪೂರ್ಣಗೊಳಿಸುತ್ತೇವೆ

ಕಾರಟಗಿ: ಭತ್ತದ ಕಣಿಜದಲ್ಲಿ ಅನ್ನ ಅಕ್ಷರ ದಾಸೋಹದ ಜತೆಗೆ ಈಗ ಕನ್ನಡ ಸಾಹಿತ್ಯದ ಸೇವೆ ಹೆಚ್ಚು ಹೆಚ್ಚು ನಡೆಯಲಿ. ಕನ್ನಡ ಸಾಹಿತ್ಯದಿಂದ ಮಾತ್ರ ಎಲ್ಲ ರೀತಿಯ ಬದಲಾವಣೆ ಸಾಧ್ಯವೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.

ತಾಲೂಕಿನ ಮರಲಾನಹಳ್ಳಿಯಲ್ಲಿ ನಡೆದ ಕಾರಟಗಿ ತಾಲೂಕು ೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಶನಿವಾರ ಮಾತನಾಡಿದರು.

ನಾಡಿಗೆ ಭತ್ತ ಮತ್ತು ಅಕ್ಕಿಯ ಮೂಲಕ ಈ ಪ್ರದೇಶ ಚಿರಪರಿಚಿತ. ಈಗ ಯುವ ಸಮೂಹ ಸಹ ಸಾಹಿತ್ಯ ಲೋಕಕ್ಕೆ ದಾಪುಗಾಲು ಇಡುತ್ತಿರುವುದಕ್ಕೆ ನನಗೆ ಹೆಚ್ಚು ಖುಷಿಯಾಗಿದೆ. ವ್ಯಾಪಾರ,ವಹಿವಾಟು, ಉದ್ಯಮ, ಇನ್ನಿತರ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಈ ಭಾಗದ ಯುವಕರು ಈಗ ಕನ್ನಡ ಸಾಹಿತ್ಯಕ್ಕೆ ದಾಪುಗಾಲು ಇಟ್ಟಿದ್ದಾರೆ ಎನ್ನುವುದಕ್ಕೆ ಗ್ರಾಮೀಣ ಪ್ರದೇಶದಲ್ಲಿ ಜಿಲ್ಲಾ ಮಟ್ಟದ ರೀತಿ ಕನ್ನಡ ಸಮ್ಮೇಳನ ನಡೆಸಿದ್ದೆ ಸಾಕ್ಷಿ ಎಂದರು.

ಮೇಗೆ ಪೂರ್ಣ:ತುಂಗಭದ್ರಾ ಅಣೆಕಟ್ಟೆ ಕ್ರಸ್ಟ್ ಗೇಟ್ ವಿಚಾರ ಪ್ರಸ್ತಾಪಿಸಿ ಈ ಮಾಸತಾಂತ್ಯದೊಳಗೆ ಕನಿಷ್ಠ ೧೦ ಕ್ರಸ್ಟ್‌ ಗೇಟ್‌ ಜೋಡಿಸುವ ಕೆಲಸ ಪೂರ್ಣಗೊಳಿಸುತ್ತೇವೆ ಎಂದ ಅವರು, ನಾಡಿಗೆ ಅನ್ನ ನೀಡುವ ರೈತರಿಗೆ ಯಾವುದೇ ಕಾರಣಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ. ಅನ್ಯಾಯದ ಪ್ರಶ್ನೆ ಉದ್ಭವಿಸುವುದಿಲ್ಲ. ಮೇ ಅಂತ್ಯದೊಳಗೆ ಎಲ್ಲ ಕ್ರಸ್ಟ್‌ ಗೇಟ್‌ ಅಳವಡಿಸುವ ಕೆಲಸ ಪೂರ್ಣವಾಗುತ್ತದೆ ಎಂದರು.

ಸಮ್ಮೇಳನದಲ್ಲಿ ಕೈಗೊಂಡ ಐದು ನಿರ್ಣಯಗಳ ಕುರಿತು ಪ್ರಸ್ಥಾಪಿಸಿ ಮಾತನಾಡಿದ ಸಚಿವರು, ಪ್ರಸಕ್ತ ವರ್ಷಕ್ಕೆ ಮರಲಾನಹಳ್ಳಿಗೆ ಪ್ರೌಢಶಾಲೆ ಮಂಜೂರಾತಿ ಮಾಡಿಸಲಾಗುವುದು. ಕಾರಟಗಿಗೆ ಪದವಿ ಕಾಲೇಜು ವಿಷಯ ಕುರಿತು ವಿವರಿಸಿ ಕಳೆದ ಎರಡುವರೆ ವರ್ಷಗಳಿಂದ ಈ ಕೆಲಸಕ್ಕಾಗಿ ಹೋರಾಡುತ್ತಿರುವೆ. ರಾಜ್ಯ ಸರ್ಕಾರ ಎಲ್ಲಿಯೂ ಹೊಸ ಪದವಿ ಕಾಲೇಜು ಪ್ರಾರಂಭ ಮಾಡಿಲ್ಲ.ಮಾಡುವ ಪ್ರಸ್ಥಾವನೆ ಹಾಗೆ ಇದೆ. ಕೊಟ್ಟರೆ ಮೊದಲ ಕಾರಟಗಿಗೆ ಪದವಿ ಕಾಲೇಜು ಖಂಡಿತ ಮಂಜೂರಾತಿ ಸಿಗಲಿದೆ ಎಂದರು.

ಚಿಂತಕ ಬಸವಂತರಾಯ ಕುರಿ ಮಾತನಾಡಿ, ತೆಲುಗು ಮತ್ತು ಕನ್ನಡಿಗರು ಸೇರಿ ಚಿಕ್ಕ ಹಳ್ಳಿಯಲ್ಲಿ ಜಿಲ್ಲಾ ಮಟ್ಟದ ಬೆರುಗು ಮೂಡಿಸುವ ಹಾಗೆ ಕನ್ನಡ ಸಮ್ಮೇಳನ ಮಾಡಿದ್ದು ಸಣ್ಣ ಮಾತಲ್ಲ. ಹಳ್ಳಿ ಹಳ್ಳಿಗಳಲ್ಲಿ ನಮ್ಮತನ, ಕನ್ನಡ ಇನ್ನೂ ಉಳಿದಿದೆ. ಕನ್ನಡ ಭಾಷೆ ನಮ್ಮ ಸ್ವಾಭಿಮಾನ, ಕನ್ನಡ ಭಾಷೆ ನಮ್ಮ ಜೀವನದ ಸುಧಾರಣೆ ಮಾಡುತ್ತದೆ ಎಂದರು.

ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ ಡಾ. ಸಿ.ಬಿ.ಚಿಲ್ಕರಾಗಿ, ಬಂಜಾರ ಅಕಾಡೆಮಿ ಸದಸ್ಯ ಕುಮಾರ ರಾಥೋಡ್, ದೀಪಾ ರಾಥೋಡ್, ಶಶಿಧರಗೌಡ ಪಾಟೀಲ್, ಶರಣೇಗೌಡ ಮಾ.ಪಾಟೀಲ್, ಅಮರೇಶ ಕುಳಗಿ, ಮಂಜುನಾಥ ಮೇಗೂರು, ಚೆನ್ನಬಸಪ್ಪ ಸುಂಕದ್, ನಾಗರಾಜ ಅರಳಿ, ಸೋಮನಾಥ ದೊಡ್ಡಮನಿ, ಶ್ರೀಕಾಂತ ಈಡಿಗೇರ್, ಕೆ. ಶ್ರೀಹರಿ, ಶರಣಪ್ಪ ಕೋಟ್ಯಾಳ, ಹನುಮಂತಪ್ಪ ತೊಂಡಿಹಾಳ ಸೇರಿದಂತೆ ಇತರರು ಇದ್ದರು. ಶರಣಪ್ಪ ನಾಯಕ, ಅಂಬಿಗೇರ್, ಮಂಜುನಾಥ ಚಿಕ್ಕೇನಕೊಪ್ಪ ಕಾರ್ಯಕ್ರಮ ನಿರ್ವಹಿಸಿದರು.

ಐದು ನಿರ್ಣಯಗಳು:

ಕಾರಟಗಿ ತಾಲೂಕಿನ ಮೂರನೇ ಸಮ್ಮೇಳನದಲ್ಲಿ ಒಟ್ಟು ಐದು ನಿರ್ಣಯ ಕೈಗೊಳ್ಳಲಾಗಿದೆ.

೧) ಮರಲಾನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿ ಮಹಾವಿದ್ಯಾಲಯ ಪ್ರಾರಂಭಿಸುವುದು.

೨) ಕಾರಟಗಿ ಪಟ್ಟಣಕ್ಕೆ ಸಾರ್ವಜನಿಕ ಗ್ರಂಥಾಲಯ ಪ್ರಾರಂಭಿಸುವುದರ ಜತೆಗೆ ಗ್ರಾಮೀಣ ಪ್ರದೇಶದಲ್ಲಿರುವ ಗ್ರಂಥಾಲಯ ಡಿಜಿಟಲ್ ಗ್ರಂಥಾಲಯಗಳನ್ನಾಗಿ ಪರಿವರ್ತಿಸುವುದು.

೩)ಕಾರಟಗಿ ಪಟ್ಟಣದಲ್ಲಿ ಹಾಗೂ ಗ್ರಾಮೀಣ ಪ್ರದೇಶಕ್ಕೆ ತಲಾ ಒಂದು ಪದವಿ ಮಹಾವಿದ್ಯಾಲಯ ಪ್ರಾರಂಭಿಸುವುದು.

೪)ರೈಸ್ ಟೆಕ್ನಾಲಜಿ ಪಾರ್ಕ್ನಲ್ಲಿ ಆಹಾರ ಘಟಕ ಪ್ರಾರಂಭಿಸಿ ಸ್ಥಳೀಯ ಉದ್ಯೋಗ ಕಲ್ಪಿಸುವುದು.

೫) ರೈಸ್ ಪಾರ್ಕ್‌ನಲ್ಲಿ ಬಿಟೆಕ್ ಫುಡ್ ಟೆಕ್ನಾಲಜಿ ಕಾಲೇಜು ಪ್ರಾರಂಭಿಸುವುದರ ಜತೆಗೆ ಆಹಾರ ಸಂಸ್ಕಣಾ ಘಟಕ ಪ್ರಾರಂಭಿಸುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿಯವರಂತೆ ನಿಂದಿಸುವ ಕೆಲಸ ಮಾಡಿಲ್ಲ
ಬಾಡಿಗೆ ಪಾವತಿಸದಿರುವ ಅಂಗಡಿಗಳಿಗೆ ಬೀಗ ಜಡಿದ ನಗರಸಭೆ