ಕನ್ನಡಪ್ರಭ ವಾರ್ತೆ ಮಂಡ್ಯ
ನಗರಸಭೆಯ ಶಾಸಕರ ಕಚೇರಿಯಲ್ಲಿ ಮಂಗಳವಾರ ನಡೆದ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ೨೦೧೮ರಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನೇ ಕೇಂದ್ರ ಸರ್ಕಾರ ಪುನರುಚ್ಚರಿಸಿರುವುದರಿಂದ ಕರ್ನಾಟಕದ ವಾದಕ್ಕೆ ಮತ್ತಷ್ಟು ಬಲ ಸಿಕ್ಕಿದೆ. ಕಾವೇರಿ ನದಿಯ ಮೇಲೆ ರಾಜ್ಯವು ತನ್ನ ವ್ಯಾಪ್ತಿಯಲ್ಲಿ ಯಾವುದೇ ಯೋಜನೆ ಅಥವಾ ಅಣೆಕಟ್ಟು ನಿರ್ಮಿಸಲು ಇತರೆ ರಾಜ್ಯಗಳ ಅನುಮತಿ ಕಡ್ಡಾಯವಲ್ಲ ಎಂಬ ಅಂಶವನ್ನು ಸ್ಪಷ್ಟಪಡಿಸಿದೆ. ಇದರಿಂದ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡು ಸೃಷ್ಟಿಸುತ್ತಿದ್ದ ಗೊಂದಲಕ್ಕೂ ಇದರಿಂದ ತೆರೆ ಬಿದ್ದಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರವು ಇನ್ನು ಯಾವುದೇ ವಿಳಂಬ ಮಾಡದೆ ಮೇಕೆದಾಟು ಯೋಜನೆ ಜಾರಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇದು ಕೇವಲ ಮಂಡ್ಯ ಅಥವಾ ದಕ್ಷಿಣ ಕರ್ನಾಟಕದ ಪ್ರಶ್ನೆಯಲ್ಲ, ಭವಿಷ್ಯದ ಕುಡಿಯುವ ನೀರಿನ ಭದ್ರತೆ ಹಾಗೂ ಜಲಸಂರಕ್ಷಣೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಯೋಜನೆಯಾಗಿದೆ ಎಂದರು.ವಿಜಯ್ ಆಗಮನವನ್ನು ಸ್ವಾಗತಿಸುವೆ:
ಮೇಕೆದಾಟು ಯೋಜನೆಗೆ ಬೆಂಬಲವಾಗಿ ಜಿಲ್ಲೆಯ ವಿವಿಧ ಸಂಘಟನೆಗಳು, ರೈತ ಮುಖಂಡರು ಹಾಗೂ ಹೋರಾಟಗಾರರ ಸಭೆಯನ್ನು ಶೀಘ್ರದಲ್ಲೇ ಕರೆಯುವುದಾಗಿ ತಿಳಿಸಿದ ಅವರು, ಯೋಜನೆಯ ಪರವಾಗಿ ಒಗ್ಗಟ್ಟಿನ ಧ್ವನಿ ಎತ್ತುವಂತೆ ಮನವಿ ಮಾಡುತ್ತೇನೆ ಎಂದರು.
ಪರಿಸರವಾದಿಗಳು ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರ ಹೋರಾಟದ ಭಾವನೆಯನ್ನು ಗೌರವಿಸುತ್ತೇವೆ. ಪರಿಸರದ ಬಗ್ಗೆ ಕಾಳಜಿ ವ್ಯಕ್ತಪಡಿಸುವುದು ಸಹಜ. ಆದರೆ, ಯೋಜನೆಯನ್ನು ಸಂಪೂರ್ಣವಾಗಿ ಸ್ಥಳಾಂತರಿಸಬೇಕು ಅಥವಾ ಕೈಬಿಡಬೇಕು ಎನ್ನುವುದು ಸೂಕ್ತ ಪರಿಹಾರವಲ್ಲ. ಪರಿಸರ ಸಂರಕ್ಷಣೆ ಹಾಗೂ ಅಭಿವೃದ್ಧಿ ಎರಡನ್ನೂ ಸಮತೋಲನದಲ್ಲಿ ಕೊಂಡೊಯ್ಯುವ ಮಾರ್ಗವನ್ನು ಸರ್ಕಾರ ಕಂಡುಕೊಳ್ಳಬೇಕು ಎಂದರು.
ಸಮತೋಲನದ ನಿರ್ಧಾರ ಅವಶ್ಯ:
ಪ್ರಸ್ತುತ ೬ನೇ ಹಂತದ ಯೋಜನೆ ಬಗ್ಗೆ ಚರ್ಚೆ ನಡೆಯುತ್ತಿದೆ. ಭವಿಷ್ಯದಲ್ಲಿ ಜನಸಂಖ್ಯೆ ಹಾಗೂ ನೀರಿನ ಬೇಡಿಕೆ ಹೆಚ್ಚಾದಂತೆ ಇನ್ನಷ್ಟು ಹಂತಗಳ ಅಗತ್ಯವೂ ಎದುರಾಗಬಹುದು. ಆದ್ದರಿಂದ ದೀರ್ಘಾವಧಿಯ ಜಲ ನಿರ್ವಹಣೆಯ ದೃಷ್ಟಿಯಿಂದ ಸರ್ಕಾರ ದೂರದೃಷ್ಟಿಯ ಯೋಜನೆಗಳನ್ನು ರೂಪಿಸಬೇಕು ಎಂದು ಶಾಸಕ ಪಿ.ರವಿಕುಮಾರ್ ಒತ್ತಾಯಿಸಿದರು.ಸಿಡಬ್ಲ್ಯುಆರ್ಸಿ ಆದೇಶವನ್ನು ಸರ್ಕಾರ ಪಾಲಿಸಬಾರದು: ಪಿ.ರವಿಕುಮಾರ್
ಕಾವೇರಿ ನೀರು ನಿಯಂತ್ರಣ ಸಮಿತಿ ಯಾವ ಆಧಾರದ ಮೇಲೆ ತಮಿಳುನಾಡಿಗೆ ನೀರು ಹರಿಸುವಂತೆ ಸೂಚನೆ ನೀಡಿದೆ ಎಂಬುದು ತಿಳಿದಿಲ್ಲ. ರಾಜ್ಯದ ಕಾವೇರಿ ಕಣಿವೆಯ ಜನರು ಹಾಗೂ ರೈತರ ಹಿತಾಸಕ್ತಿಯೇ ಮೊದಲ ಆದ್ಯತೆಯಾಗಬೇಕು ನಮ್ಮ ರೈತರಿಗೆ ಬೆಳೆ ಉಳಿಸಿಕೊಳ್ಳಲು ನೀರು ಬೇಕಾಗಿದೆ. ಜನರಿಗೆ ಕುಡಿಯಲು ನೀರು ಬೇಕಿದೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುವುದು ಸಮಂಜಸವಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.ಮೂರು ದಿನಗಳ ಹಿಂದೆ ನಾನು ತಮಿಳುನಾಡು ಪ್ರವಾಸಕ್ಕೆ ಹೋಗಿದ್ದೆ. ಆಗ ಚಿದಂಬರಂ ಸಮೀಪ ಕಾವೇರಿ ನದಿಯಲ್ಲಿ ಅಪಾರ ಪ್ರಮಾಣದ ನೀರು ಸಮುದ್ರಕ್ಕೆ ಸೇರುತ್ತಿರುವುದನ್ನು ಕಣ್ಣಾರೆ ನೋಡಿದ್ದೇನೆ. ಅವರ ಬಳಿ ಈಗಾಗಲೇ ಸಾಕಷ್ಟು ನೀರಿದ್ದರೂ ಅದು ಸಮುದ್ರಕ್ಕೆ ಹರಿದು ಹೋಗುತ್ತಿದೆ. ಆದರೂ, ಮತ್ತೆ ಕರ್ನಾಟಕದಿಂದ ನೀರು ಬಿಡಬೇಕು ಎನ್ನುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.