ಬೀದರ್: ನ್ಯಾ. ನಾಗಮೋಹನದಾಸ್ ಅವರ ವರದಿಯಿಂದ ಬಲಗೈ ಸಮುದಾಯಕ್ಕೆ ತೀವ್ರ ಅನ್ಯಾಯವಾಗಿದೆ. ಹೀಗಾಗಿ ‘ಒಳಮೀಸಲಾತಿ ವರದಿಯ ಒಳಸಂಚು’ ಕುರಿತು ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟದಿಂದ ಅ.5ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾ ರಂಗಮಂದಿರದಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಆಯೋಜಕ ಅನೀಲಕುಮಾರ ಬೆಲ್ದಾರ್ ತಿಳಿಸಿದರು.
ಒಳಮೀಸಲಾತಿಯ ಒಳಸಂಚುಗಳು ಹಾಗೂ ಮುಂದಿನ ನಮ್ಮ ಸಮುದಾಯದ ಭವಿಷ್ಯದ ಕುರಿತು ಬಲಗೈ ಸಮುದಾಯಗಳು ತೆಗೆದುಕೊಳ್ಳಬೇಕಾದ ತಿರ್ಮಾನಗಳ ಬಗ್ಗೆ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಬೆಲ್ದಾರ್ ತಿಳಿಸಿದರು.
ಒಕ್ಕೂಟದ ಮುಖಂಡರಾದ ರಮೇಶ ಡಾಕುಳಗಿ ಮಾತನಾಡಿ, ಆ.19ರಂದು ನಡೆದ ಸಚಿವ ಸಂಪುಟವು ನ್ಯಾ.ನಾಗಮೋಹನದಾಸ್ ವರದಿಯನ್ನು ಭಾಗಶಃ ಮಾರ್ಪಡಿಸಿ ಪ್ರವರ್ಗ ಎ,ಬಿ,ಸಿ ಎಂದು ನಾಲ್ಕು ಭಾಗಗಳಾಗಿ ಹಣ ಹಾಗೂ ರಾಜಕೀಯ ಒಳಸಂಚಿನಿಂದ ಉದ್ದೇಶಪೂರ್ವಕವಾಗಿಯೇ ವರ್ಗಿಕರಿಸಿ, ಹೆಚ್ಚು ಜನಸಂಖ್ಯೆವುಳ್ಳ ಬಲಗೈ ಸಮುದಾಯವನ್ನು 2ನೇ ಸ್ಥಾನದಲ್ಲಿ ಬರುವಂತೆ ನೋಡಿಕೊಳ್ಳಲಾಗಿದೆ ಎಂದರು.ವಿಚಾರ ಸಂಕಿರಣದಲ್ಲಿ ಮುಂದಿನ ಹೋರಾಟದ ಕುರಿತು ಪೂಜ್ಯ ಜ್ಞಾನಪ್ರಕಾಶ ಸ್ವಾಮೀಜಿಯವರೇ ನಿರ್ಣಯ ಕೈಗೊಳ್ಳಲಿದ್ದಾರೆ. ಬಲಗೈ ಸಮುದಾಯದ ಪ್ರಗತಿಪರ ಚಿಂತಕರು, ವಿದ್ಯಾರ್ಥಿಗಳು, ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕೋರಿದರು.
ಒಕ್ಕೂಟದ ಮುಖಂಡರಾದ ಬಾಬುರಾವ ಪಾಸ್ವಾನ್, ಪ್ರಮುಖರಾದ ಶ್ರೀಪತರಾವ್ ದೀನೆ, ಶಿವಕುಮಾರ ನೀಲಿಕಟ್ಟಿ, ಪ್ರದೀಪ ನಾಟೇಕಾರ, ಅಶೋಕ ಮಾಳಗೆ, ಪ್ರಕಾಶ ಮಾಳಗೆ, ತುಕಾರಾಮ ಲಾಡಕರ್, ಸುಧಾಕರ ರಾಜಗಿರಾ, ರಮೇಶ ಪಾಸ್ವಾನ್, ರಮೇಶ ಮಂದಕನಳ್ಳಿ, ರಾಜಕುಮಾರ ಶೇರಿಕಾರ ಸೇರಿದಂತೆ ಹಲವರಿದ್ದರು.