ಕನ್ನಡಪ್ರಭ ವಾರ್ತೆ ಕುಶಾಲನಗರಸ್ವಚ್ಛ ಕಾವೇರಿಗಾಗಿ ತಲಕಾವೇರಿ ಕ್ಷೇತ್ರದಿಂದ ಚಾಲನೆಗೊಂಡು ಜಿಲ್ಲೆಯ ವಿವಿಧ ಕಡೆ ತೆರಳಿ ನದಿ ಸಂರಕ್ಷಣೆಯ ಬಗ್ಗೆ ಜನರಲ್ಲಿ ಅರಿವು ಜಾಗೃತಿ ಮೂಡಿಸಿದ ಕಾವೇರಿ ನದಿ ಜಾಗೃತಿ ತೀರ್ಥ ಯಾತ್ರೆ ತಂಡ, ಕೊಡಗು ಜಿಲ್ಲೆಯ ಗಡಿ ದಾಟಿ ಕೊಣನೂರು ಮೂಲಕ ಹಾಸನ ಜಿಲ್ಲೆಯ ರಾಮನಾಥಪುರದತ್ತ ಸಾಗಿತು.ನ.24ರಂದು ತಲಕಾವೇರಿ ಕ್ಷೇತ್ರದಿಂದ ಪವಿತ್ರ ಕಾವೇರಿ ತೀರ್ಥ ಹೊತ್ತು ಸಾಗಿದ ಕಾವೇರಿ ರಥ, ಕುಶಾಲನಗರ ಸಮೀಪ ಕಣಿವೆಯಲ್ಲಿ ಶ್ರೀರಾಮಲಿಂಗೇಶ್ವರ ದೇವಾಲಯ ಬಳಿ ಕಾವೇರಿಗೆ ಮಹಾ ಆರತಿ ಬೆಳಗಿ ನಂತರ ರಾಮನಾಥಪುರದತ್ತ ತೆರಳಿತು.ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎನ್. ಸುರೇಶ್ ಮತ್ತು ಆಡಳಿತ ಮಂಡಳಿ ಸದಸ್ಯರು ತಂಡವನ್ನು ಬರಮಾಡಿಕೊಂಡರು. ಶ್ರೀ ರಾಮಲಿಂಗೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಕಾವೇರಿ ನದಿಗೆ ಮಹಾ ಆರತಿ ಬೆಳಗಲಾಯಿತು. ದೇವಾಲಯದ ಅರ್ಚಕರಾದ ರಾಘವೇಂದ್ರ ಆಚಾರ್, ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್. ಸುರೇಶ್ ದಂಪತಿ ತಂಡಕ್ಕೆ ಶುಭ ಕೋರಿದರು.
ರಾಮನಾಥಪುರದಲ್ಲಿ ಸ್ವಾಗತ
ತಲಕಾವೇರಿಯಿಂದ ಪೂಂಪ್ ಹಾರ್ ತನಕ ತೆರಳುವ ಕಾವೇರಿ ನದಿ ಜಾಗೃತಿ ತೀರ್ಥಯಾತ್ರೆ ತಂಡ ಹಾಸನ ಜಿಲ್ಲೆಯ ರಾಮನಾಥಪುರದತ್ತ ಸಾಗಿದ ಸಂದರ್ಭ ಅರಕಲಗೂಡು ಶಾಸಕ ಎ.ಮಂಜು, ಕಾವೇರಿ ನದಿ ಸ್ವಚ್ಛತಾ ಆಂದೋಲನ ಹಾಸನ ಜಿಲ್ಲಾ ಸಂಚಾಲಕ ಎಂ.ಎನ್. ಕುಮಾರಸ್ವಾಮಿ ಮತ್ತಿತರರು ಬರಮಾಡಿಕೊಂಡರು.ಈ ಸಂದರ್ಭ ಮಾತನಾಡಿದ ಶಾಸಕ ಎ.ಮಂಜು, ಪ್ರತಿಯೊಬ್ಬರೂ ನದಿ ಜಲಮೂಲಗಳ ರಕ್ಷಣೆಗಾಗಿ ಕಾವೇರಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಮುಖರೊಂದಿಗೆ ಕೈಜೋಡಿಸಬೇಕು. ಕಾವೇರಿ ನದಿ ಸಂರಕ್ಷಣೆಗಾಗಿ ರಾಜ್ಯ ಸರ್ಕಾರದ ಮೂಲಕ ಯೋಜನೆಗಳನ್ನು ರೂಪಿಸುವುದು ಮತ್ತು ರಾಮನಾಥಪುರದಲ್ಲಿ ವಿಶೇಷವಾಗಿ ಕಾವೇರಿ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.ಬಳಿಕ ಕಾವೇರಿ ನದಿ ತಟದಲ್ಲಿ ಪೂಜೆ ಸಲ್ಲಿಸಿ ನದಿಗೆ ಆರತಿ ಬೆಳಗಿ ಬೀಳ್ಕೊಟ್ಟರು.