ಕನ್ನಡಪ್ರಭ ವಾರ್ತೆ ಅರಕಲಗೂಡು
ಗೊರೂರು ಹೇಮಾವತಿ ಜಲಾಶಯದಿಂದ ಅಧಿಕ ಪ್ರಮಾಣದ ನೀರು ಹೊರ ಬಿಟ್ಟಿರುವುದರಿಂದ ಅಪಾಯದ ಮಟ್ಟ ಮೀರಿ ನದಿ ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದ ಬೆಳೆ ಜಮೀನು ಮುಳುಗಡೆಯಾಗಿದೆ. ಮರಡಿ, ಅತ್ನಿ, ಹೊನ್ನೇಗೌಡನಹಳ್ಳಿ ಸೇರಿದಂತೆ ಕಸಬಾ ಹೋಬಳಿ ಭಾಗದಲ್ಲಿ ಹೇಮಾವತಿ ನದಿ ಹಾದುಹೋಗಿರುವ ಉದ್ದಕ್ಕೂ ರೈತರು ಬೆಳೆದಿದ್ದ ವಿವಿಧ ಬೆಳೆಗಳು ನೀರು ಪಾಲಾಗಿವೆ.
ಕಾವೇರಿ ಪ್ರವಾಹದಿಂದಾಗಿ ಕೊಣನೂರು ಮತ್ತು ರಾಮನಾಥಪುರ ಹೋಬಳಿ ಭಾಗದ ನದಿ ಪಾತ್ರದ ತಗ್ಗು ಪ್ರದೇಶದ ಬೆಳೆ ಜಮೀನು ನೆರೆಗೆ ತುತ್ತಾಗಿ ಹಾಳಾಗಿದೆ. ತಂಬಾಕು, ಆಲಸಂದೆ, ಶುಂಠಿ, ದ್ವಿದಳ ಧಾನ್ಯ ಬೆಳೆಗಳು ಹಾಗೂ ತೋಟದ ಬೆಳೆ ಪ್ರವಾಹದ ನೀರಿನಲ್ಲಿ ಮುಳುಗಿ ನಾಶವಾಗಿ ರೈತರಿಗೆ ಅಪಾರ ಪ್ರಮಾಣದ ಆರ್ಥಿಕ ಸಂಕಷ್ಟ ತಂದೊಡ್ಡಿದೆ.ಮುಂಗಾರು ಸೋನೆ ಮಳೆ ಸಮಯದಲ್ಲಿ ಪ್ರತಿ ವರ್ಷ ನದಿ ಪಾತ್ರದ ಅಚ್ಚುಕಟ್ಟಿನಲ್ಲಿ ಬೆಳೆದ ಬೆಳೆಗಳು ನೆರೆಗೆ ಸಿಲುಕಿ ಬಲಿಯಾಗುತ್ತಿವೆ. ದುರಾದೃಷ್ಟವಶಾತ್ ಒಂದು ಸಲವೂ ಸಹ ಬಿಡಿಗಾಸು ಪರಿಹಾರ ಸಿಕ್ಕಿಲ್ಲ. ಅಪಾರ ಪ್ರಮಾಣದ ಹಣ ವ್ಯಯಿಸಿ ಕಷ್ಟಪಟ್ಟು ಬೆಳೆದ ಬೆಳೆಗಳ ಫಸಲು ಕೈ ಸೇರುವ ಹೊತ್ತಿಗೆ ನೀರು ಪಾಲಾಗುತ್ತಿವೆ. ಇತ್ತ ಕೈಗೆ ಬಂದ ತುತ್ತು ಬಾಯಿಗೆ ಬಾರದಾಗುತ್ತಿವೆ. ಇನ್ನೊಂದೆಡೆ ಬೆಳೆ ಹಾನಿ ಪರಿಹಾರವೂ ಕೈಸೇರುತ್ತಿಲ್ಲದ ಕಾರಣ ಆರ್ಥಿಕವಾಗಿ ನಷ್ಟ ಅನುಭವಿಸುವಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.