ಬೆಂಗಳೂರು : ಭಾರಿ ಮಳೆಗೆ ಕುಸಿದ ರಸ್ತೆ, 150 ಮರ ಧರೆಗೆ

KannadaprabhaNewsNetwork |  
Published : May 09, 2024, 01:33 AM ISTUpdated : May 09, 2024, 05:36 AM IST
ಪಾಟರಿಟೌನ್‌ನಲ್ಲಿ ಕುಸಿದ ಮೆಟ್ರೋ ನಿಲ್ದಾಣದ ಮೇಲ್ಭಾಗ | Kannada Prabha

ಸಾರಾಂಶ

ಬೆಂಗಳೂರಿನಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಬುಧವಾರ ಸಂಜೆ ಮಳೆಗೆ ರಸ್ತೆ ಕುಸಿದಿದೆ. 150 ಮರಗಳು, ಕೊಂಬೆಗಳು ಬಿದ್ದಿವೆ.

  ಬೆಂಗಳೂರು :  ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಪಾಟರಿಟೌನ್‌ನಲ್ಲಿ ನಿರ್ಮಾಣ ಹಂತದ ಅಂಡರ್‌ ಗ್ರೌಂಡ್‌ ಮೆಟ್ರೋ ನಿಲ್ದಾಣದ ಮೇಲ್ಭಾಗದಲ್ಲಿ ಭೂ ಕುಸಿತ ಉಂಟಾಗಿದ್ದು, ಕೆಲ ಹೊತ್ತು ಜನರು ಆತಂಕಕ್ಕೆ ಒಳಗಾದ ಘಟನೆ ನಡೆಯಿತು.

ರಸ್ತೆ ಮಧ್ಯೆಯೇ ಭೂ ಕುಸಿತ ಸೃಷ್ಟಿಯಾಗಿದ ಪರಿಣಾಮ ನಿರ್ಮಾಣ ಹಂತದಲ್ಲಿರುವ ನಿಲ್ದಾಣಕ್ಕೆ ಹೊಂದಿಕೊಂಡ ರಸ್ತೆಯ ಎರಡು ತುದಿಗಳ ನಡುವಿನ ಸಂಪರ್ಕ ಕಡಿತಗೊಂಡಿದೆ. ಬ್ಯಾರಿಕೇಡ್‌ ಅಳವಡಿಕೆ ಮಾಡಿ ರಸ್ತೆ ಬಂದ್‌ ಮಾಡಲಾಗಿದೆ. ರಸ್ತೆ ಕುಸಿಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇನ್ನು ಗಾಳಿ ಮಳೆಗೆ ನಗರದಾದ್ಯಂತ 150ಕ್ಕೂ ಅಧಿಕ ಮರ ಹಾಗೂ ಮರದ ಕೊಂಬೆಗಳು ಧರೆಗುರುಳಿದ್ದು, ಕಾರು, ಆಟೋ, ಬೈಕ್‌ ಜಖಂಗೊಂಡ ವರದಿಯಾಗಿದೆ.

ಬೆಂಗಳೂರಿನಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಬುಧವಾರ ಸಂಜೆ 5 ಗಂಟೆ ಸುಮಾರಿ ಆರಂಭಗೊಂಡ ಗುಡುಗು, ಮಿಂಚು, ಗಾಳಿ ಸಹಿತ ಸುಮಾರು 20 ರಿಂದ 30 ನಿಮಿಷಗಳ ಕಾಲ ಧಾರಾಕಾರವಾಗಿ ಮಳೆ ಸುರಿಯಿತು. ಬೆಂಗಳೂರಿನ ಪೂರ್ವ ಭಾಗ ಹಾಗೂ ರಾಜರಾಜೇಶ್ವರಿ ನಗರ ಭಾಗದಲ್ಲಿ ಹೆಚ್ಚಿನ ಪ್ರಮಾಣ ಮಳೆಯಾಗಿದೆ.

ಗಾಳಿ ಮಳೆಗೆ ಆರ್‌ಆರ್‌ ನಗರ ವ್ಯಾಪ್ತಿಯಲ್ಲಿ 70, ಪೂರ್ವ ವಲಯದಲ್ಲಿ 24, ಪಶ್ಚಿಮ ವಲಯದಲ್ಲಿ 30 ಮರ ಮತ್ತು ಮರ ಕೊಂಬೆ ಬಿದ್ದಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ವಸಂತನಗರದಲ್ಲಿ ಮರದೊಂದಿಗೆ ವಿದ್ಯುತ್‌ ಕಂಬ ಆಟೋದ ಮೇಲೆ ಬಿದ್ದು, ಆಟೋ ಸಂಪೂರ್ಣವಾಗಿ ಜಖಂಗೊಂಡಿದೆ. ಆಟೋ ಚಾಲಕ ಅದೃಷ್ಟವಶಾತ್‌ ಪಾರಾಗಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ. ಭಾರೀ ಸಂಖ್ಯೆ ಮರ ಮತ್ತು ಮರದ ಕೊಂಬೆ ಬಿದ್ದ ಪರಿಣಾಮ ಕಾರು ಮತ್ತು ಬೈಕ್‌ ಹಾನಿಗೆ ಒಳಗಾಗಿವೆ.

ಭಾರೀ ಸಂಚಾರ ದಟ್ಟಣೆ

ಮಳೆಯಿಂದ ನಗರದ ರಸ್ತೆ, ಅಂಡರ್‌ ಪಾಸ್‌, ಫ್ಲೈಓವರ್‌ ಮೇಲೆ ಭಾರಿ ಪ್ರಮಾಣ ನೀರು ಹರಿದ ಪರಿಣಾಮ ನಗರದ ಹಲವು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ವಾಹನ ಸವಾರರು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಪರದಾಡಿದರು. ಏಕಾಏಕಿ ಮಳೆ ಆರಂಭಗೊಂಡಿದ್ದರಿಂದ ಕಚೇರಿ ಕೆಲಸ ಮುಗಿಸಿ ಮನೆ ಹೊರ ನೌಕರರು ಮಳೆಯಲ್ಲಿ ನೆನೆಯಬೇಕಾಯಿತು. ಮಳೆಯಿಂದ ರಕ್ಷಣೆ ಪಡೆಯುವುದಕ್ಕೆ ಬೈಕ್‌ ಸವಾರರು ಫ್ಲೈಓವರ್‌ ಕೆಳ ಭಾಗ, ಬಸ್‌ ನಿಲ್ದಾಣ, ಅಂಡರ್‌ ಪಾಸ್‌ ಗಳಲ್ಲಿ ಆಶ್ರಯ ಪಡೆದುಕೊಂಡರು.

ಆರ್‌.ಟಿ.ನಗರ ಸಮೀಪ ಜಯಮಹಲ್‌ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಭಾರಿ ಮಳೆಯಿಂದ ರಸ್ತೆ ತುಂಬಾ ನೀರು ನಿಂತಿದೆ. ಹೀಗಾಗಿ, ಜನ ಬೈಕಿನಿಂದ ಇಳಿದು ಮಳೆಯಲ್ಲಿಯೇ ತಳ್ಳಿಕೊಂಡು ಹೋಗುತ್ತಿದ್ದರು. ಇತ್ತ ನಗರದ ಸುರಂಗ ಮಾರ್ಗ, ಕೆಳ ಸೇತುವೆಗಳಲ್ಲಿ 2-3 ಅಡಿ ನೀರು ನಿಂತಿದ್ದು, ವಾಹನ ಸವಾರರು ಪರದಾಡಿದರು.

ಸರಾಸರಿ 1.4 ಸೆಂ.ಮೀ. ಮಳೆಬುಧವಾರ ನಗರದಲ್ಲಿ ಸರಾಸರಿ 1.4 ಸೆಂ.ಮೀ ಮಳೆಯಾಗಿದೆ. ದೊಡ್ಡ ಬಿದರಕಲ್ಲಿನಲ್ಲಿ ಅತಿ ಹೆಚ್ಚು 6.6 ಸೆಂ.ಮೀ ಮಳೆಯಾಗಿದೆ. ನಾಯಂಡನಹಳ್ಳಿ, ಆರ್‌.ಆರ್‌.ನಗರದಲ್ಲಿ ತಲಾ 5.1, ಮಾರುತಿ ಮಂದಿರದಲ್ಲಿ 4.2, ಪುಲಕೇಶಿನಗರದಲ್ಲಿ 3.8, ವಿದ್ಯಾಪೀಠದಲ್ಲಿ 3.7, ನಾಗೇನಗಳ್ಳಿಯಲ್ಲಿ 3, ಗೊಟ್ಟಿಗೇರೆಯಲ್ಲಿ 2.2, ಕೊಟ್ಟಿಗೆಪಾಳ್ಯ, ಉತ್ತರಹಳ್ಳಿಯಲ್ಲಿ ತಲಾ 2.1, ಅಂಜನಾಪುರ ಹಾಗೂ ಸಂಪಗಿ ರಾಮನಗರದಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ. 

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತರಕಾರಿಯಲ್ಲಿ ಹಾನಿಕಾರಕ ಅಂಶ ಪತ್ತೆ: ಶೀಘ್ರ ಸೂಕ್ತ ಮಾರ್ಗಸೂಚಿ
ಸಿಲಿಂಡರ್‌ಗೆ ಹಾಹಾಕಾರ: ಊಟ, ತಿಂಡಿ ಹರೋಹರ!