ಸಿರುಗುಪ್ಪ: ತಾಲೂಕಿನ ಬಗ್ಗೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ತಾತ್ಕಾಲಿಕ ರಸ್ತೆ ವಿವಾದದಿಂದ ಗ್ರಾಮದೊಳಗೆ ಆ್ಯಂಬುಲೆನ್ಸ್ ಬಾರದಂತಾಗಿ ಬಾಲಕಿಯನ್ನು ಹೆಗಲ ಮೇಲೆ ಹೊತ್ತು ತಂದು ಆ್ಯಂಬುಲೆನ್ಸ್ ಮೂಲಕ ಸಿರುಗುಪ್ಪ ಆಸ್ಪತ್ರೆಗೆ ಕಳುಹಿಸಿದ ಘಟನೆ ಶುಕ್ರವಾರ ನಡೆದಿದೆ.
ಆಗ ಸ್ಥಳಕ್ಕೆ ಆಗಮಿಸಿದ್ದ ತಹಸೀಲ್ದಾರ್ ಗೌಸಿಯಾಬೇಗಂ, ಜನರಿಗೆ ತೊಂದರೆ ಕೊಡಬೇಡಿ. ಅವರಿಗೆ ತಿರುಗಾಡಲು ಅವಕಾಶ ಮಾಡಿಕೊಡಬೇಕು. ಹಾಗಾಗಿ ತಾತ್ಕಾಲಿಕ ರಸ್ತೆ ಮಾಡಿಕೊಡುತ್ತೇವೆ ಎಂದು ಜಾಗದ ಮಾಲೀಕನ ಮನವೊಲಿಸಿ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದರು. ಆದರೆ ಈ ದಾರಿ ವಿಚಾರ ನ್ಯಾಯಾಲಯದ ಮೆಟ್ಟಿಲೇರಿ ನ್ಯಾಯಾಲಯ ಶಾಶ್ವತ ತಡೆಯಾಜ್ಞೆ ನೀಡಿರುವುದರಿಂದ, ಯಥಾಸ್ಥಿತಿ ಕಾಯ್ದುಕೊಂಡು ಹೋಗಬೇಕು ಎಂದು ತಹಸೀಲ್ದಾರ್ ಸೂಚಿಸಿದ್ದರು.
ಆದರೆ ಇದಕ್ಕೆ ಒಪ್ಪದ ಜಾಗದ ಮಾಲೀಕ ಶುಕ್ರವಾರ ಬೆಳಗ್ಗೆ ಎರಡು ಜೆಸಿಬಿಗಳ ಮೂಲಕ ರಸ್ತೆ ಅಗೆಯಲು ಮುಂದಾದಾಗ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆಆಗಮಿಸಿದ ಪೊಲೀಸರು ಜೆಸಿಬಿಯಿಂದ ರಸ್ತೆ ಅಗೆಯುವುದನ್ನು ತಡೆದು, ಪೊಲೀಸ್ ಠಾಣೆಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚಿಸಿ, ಜೆಸಿಬಿಯನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋದರು.ರಸ್ತೆ ವಿವಾದದಿಂದ ಆ್ಯಂಬುಲೆನ್ಸ್ ಗ್ರಾಮದೊಳಗೆ ಬರಲಾಗದೇ ಅನಾರೋಗ್ಯ ಪೀಡಿತ ಬಾಲಕಿಯನ್ನು ಹೊತ್ತುಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.