ರಸ್ತೆ ಅಗಲೀಕರಣ: ಭೂ ಸ್ವಾಧೀನ, ಪರಿಹಾರ ಮಾಹಿತಿ ಸಂಗ್ರಹಕ್ಕೆ ಸೂಚನೆ

KannadaprabhaNewsNetwork |  
Published : Sep 16, 2026, 02:00 AM IST
ಚಿತ್ರ 2 | Kannada Prabha

ಸಾರಾಂಶ

ಸಚಿವ ಟಿ.ರಘುಮೂರ್ತಿ ನೇತೃತ್ವದಲ್ಲಿ ಸಭೆ । ಸಿಎಂ ಮನ ಒಲಿಸಿ ಅನುದಾನ ತರಲು ಪ್ರಯತ್ನ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ನಗರದ ಚಳ್ಳಕೆರೆ ವೃತ್ತದಿಂದ ಹೊಳಲ್ಕೆರೆ ರಸ್ತೆಯ ಕನನ ವೃತ್ತದವರೆಗೆ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಅಗತ್ಯವಿರುವ ಭೂಸ್ವಾಧೀನ ಹಾಗೂ ಕಟ್ಟಡ ಪರಿಹಾರದ ನಿಖರ ಮಾಹಿತಿಯನ್ನು ಸಂಗ್ರಹಿಸುವಂತೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಸೂಚಿಸಿದರು.

ಮಂಗಳವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಈ ಕುರಿತು ಸಭೆ ನಡೆಸಿ ಅವರು ಮಾತನಾಡಿದರು.

ಒಟ್ಟು 3.5 ಕಿ.ಮೀ ಉದ್ದದ ಮುಖ್ಯರಸ್ತೆಯಲ್ಲಿ ಚಳ್ಳಕೆರೆ ಗೇಟ್‍ನಿಂದ ಪ್ರವಾಸಿ ಮಂದಿರದ ವರೆಗಿನ ರಸ್ತೆಯಲ್ಲಿ ಯಾವುದೇ ಅತಿಕ್ರಮಣ ಇಲ್ಲ. ಆದರೆ ಪ್ರವಾಸಿ ಮಂದಿರದಿಂದ ಕನಕ ವೃತ್ತದ ವರೆಗಿನ ಸುಮಾರು 2 ಕಿ.ಮೀ. ರಸ್ತೆಯಲ್ಲಿ ಸಾಕಷ್ಟ ಕಟ್ಟಡಗಳ ಇವೆ. ರಸ್ತೆಯ ಮಧ್ಯಭಾಗದಿಂದ ಎರಡು ಭಾಗದಲ್ಲಿ 21 ಮೀಟರ್ ಹೊಸ ರಸ್ತೆ ನಿರ್ಮಿಸಲು ಯೋಚಿಸಲಾಗುತ್ತಿದೆ. ಸದ್ಯ ಎರಡೂ ಭಾಗದಲ್ಲಿ 31.5 ಮೀಟರ್ ರಸ್ತೆ ಇದೆ. ಉಳಿದ 6.5 ಮೀಟರ್ ಜಾಗಕ್ಕೆ ಭೂಸ್ವಾಧೀನ ಹಾಗೂ ಕಟ್ಟಡಗಳಿಗೆ ಮಾರುಕಟ್ಟೆ ದರದಲ್ಲಿ ಪರಿಹಾರ ನೀಡಬೇಕಾಗುತ್ತಿದೆ. ಆದ್ದರಿಂದ ಪ್ರತಿಯೊಂದು ಕಟ್ಟಡಗಳ ವಿವರ, ಸ್ವಾಧೀನ ಪಡೆಸಿಕೊಳ್ಳುವ ಭೂಮಿ ದರಗಳ ವಿವರವನ್ನು ಸಂಗ್ರಹಿಸಿದರೆ, ಸರ್ಕಾರ ಮಟ್ಟದಲ್ಲಿ ಮುಖ್ಯಮಂತ್ರಿಗಳ ಮನ ಒಲಿಸಿ ಯೋಜನೆಗೆ ಅನುದಾನ ತರಲಾಗುವುದು ಎಂದು ಸಚಿವ ಟಿ.ರಘುಮೂರ್ತಿ ಹೇಳಿದರು.

ಪಿ.ಬಿ.ರಸ್ತೆಯಲ್ಲಿ ಕಳೆದ 60-70 ವರ್ಷಗಳಿಂದ ಖಾಸಗಿ ವ್ಯಕ್ತಿಗಳು ಜಾಗದ ಒಡೆತನ ಹೊಂದಿದ್ದಾರೆ. ಜಾಗದ ಮೇಲೆ ಸಾಕಷ್ಟು ವ್ಯವಹಾರಗಳು ನಡೆದಿವೆ. ಕೆಲವೆಡೆ ಒತ್ತುವರಿ ಹಾಗೂ ನಿಯಮ ಬಾಹೀರವಾಗಿ ಕಟ್ಟಡ ನಿರ್ಮಿಸಿರುವುದು ಕಂಡುಬಂದಿದೆ. ಭೂಸ್ವಾಧೀನಕ್ಕೆ ಒಳಪಡುವ 500ಕ್ಕೂ ಹೆಚ್ಚು ಸ್ವತ್ತಿನ ಮಾಲೀಕರಿಗೆ ನಗರಸಭೆಯಿಂದ ನೋಟಿಸ್ ನೀಡಿ, ಜಾಗದ ಮಾಲಿಕಾನ ಹಕ್ಕು, ಕಟ್ಟಡ ಪರವಾನಿಗೆ, ಇಸ್ವತ್ತು, ವ್ಯವಹಾರ ಪರವಾನಿಗೆ, ಕಂದಾಯ ಕಟ್ಟಿರುವ ಬಗ್ಗೆ ಮಾಹಿತಿ ನೀಡುವಂತೆ ಕೋರಲಾಗಿದೆ. ಭೂಸ್ವಾಧೀನ ಹಾಗೂ ಪರಿಹಾರಕ್ಕಾಗಿ ಅಂದಾಜು 380 ಕೋಟಿ ರು. ಬೇಕಾಗಬಹುದು ಎಂದು ಉಪ ವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ್ ಸಭೆಯಲ್ಲಿ ಮಾಹಿತಿ ನೀಡಿದರು.

ನಿಯಮಾನುಸಾರ ಕಟ್ಟಡ ಪರಿಹಾರಕ್ಕೆ ನಿಗದಿಗೆ ಸೂಚನೆ:

ರಸ್ತೆಯಲ್ಲಿ ಸಾಕಷ್ಟು ಹಳೆಯ ಕಟ್ಟಡಗಳಿವೆ, ಹೊಸದಾಗಿ ನಿರ್ಮಿಸಿರುವ ಕಟ್ಟಡಗಳ ಸಂಖ್ಯೆ ಕಡಿಮೆಯಿದೆ. ಎಲ್ಲಾ ಕಟ್ಟಡಗಳಿಗೂ ಒಂದೇ ದರ ನೀಡುವುದು ತರವಲ್ಲ. ಲೋಕೋಪಯೋಗಿ ಇಲಾಖೆಯಿಂದ ಪ್ರತಿಯೊಂದು ಕಟ್ಟಡ ವಯಸ್ಸಿನ ಆಧಾರದಲ್ಲಿ, ಸವಕಳಿ ಮೌಲ್ಯ ಲೆಕ್ಕಹಾಕಿ ಪರಿಹಾರ ನಿಗದಿ ಮಾಡಬೇಕು. ಮಾರುಕಟ್ಟೆ ಮಾಲ್ಯವನ್ನು ಸಹ ಲೆಕ್ಕಹಾಕಬೇಕು. ಕೂಡಲೇ ಲೋಕೋಪಯೋಗಿ ಇಲಾಖೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಸಚಿವ ಟಿ.ರಘುಮೂರ್ತಿ ನಿರ್ದೇಶಿಸಿದರು.

ಇದೇ ವೇಳೆ ಎಂ.ಜಿ.ಸರ್ಕಲ್ ಸೌಂದರ್ಯೀಕರಣ ಹಾಗೂ ನಗರ ಪಾಲಿಕೆ ಜಾಗದಲ್ಲಿ ಪಾರ್ಕಿಂಗ್ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಾಣದ ವಿಸ್ತೃತ ಯೋಜನಾ ವರದಿಯನ್ನು ಸಚಿವ ಟಿ.ರಘುಮೂರ್ತಿ ಪರಿಶೀಲಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್.ರಮ್ಯ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ

ಎಂಜಿನಿಯರ್ ನಾಗರಾಜ್, ಜಿಪಂ ಸಿಪಿಒ ಗಾಯಿತ್ರಿ, ನಗರಸಭೆ ಆಯುಕ್ತೆ ಲಕ್ಷ್ಮಿ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆಯಿಂದ ಒಂದು ತಿಂಗಳ ಕಾಲ ಸೇವಾ ಸಂಕಲ್ಪ ಅಭಿಯಾನ: ಪ್ರಹ್ಲಾದ್ ಜೋಶಿ
ಜನಸ್ನೇಹಿ ವೈದ್ಯರ ಆರೊಗ್ಯ ಕೈಪಿಡಿ, 2 ಕವನ ಸಂಕಲನ