ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಸೇವೆ ಹಾಗೂ ಆಡಳಿತದ ಪಯಣವನ್ನು ಸ್ಮರಿಸುವ "ಸೇವಾ ಸಂಕಲ್ಪ ಅಭಿಯಾನ " ಸೆ. 17ರಿಂದ ಅ. 17ರ ವರೆಗೆ ದೇಶಾದ್ಯಂತ ನಡೆಯಲಿದೆ. "ಜನಸೇವೆಯೇ ಪ್ರಭು ಸೇವೆ " ಎಂಬ ಧ್ಯೇಯದೊಂದಿಗೆ ಒಂದು ತಿಂಗಳ ಕಾಲ ವಿವಿಧ ಸೇವಾ ಚಟುವಟಿಕೆ, ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಸೇವೆ ಹಾಗೂ ಆಡಳಿತದ ಪಯಣವನ್ನು ಸ್ಮರಿಸುವ "ಸೇವಾ ಸಂಕಲ್ಪ ಅಭಿಯಾನ " ಸೆ. 17ರಿಂದ ಅ. 17ರ ವರೆಗೆ ದೇಶಾದ್ಯಂತ ನಡೆಯಲಿದೆ. "ಜನಸೇವೆಯೇ ಪ್ರಭು ಸೇವೆ " ಎಂಬ ಧ್ಯೇಯದೊಂದಿಗೆ ಒಂದು ತಿಂಗಳ ಕಾಲ ವಿವಿಧ ಸೇವಾ ಚಟುವಟಿಕೆ, ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ, ಎನ್ಡಿಎ ಸಹಪಕ್ಷಗಳು ಹಾಗೂ ವಿವಿಧ ಸ್ವಯಂಸೇವಾ ಸಂಘಟನೆಗಳ ಸಹಯೋಗದಲ್ಲಿ ರಾಜ್ಯದಿಂದ ಬೂತ್ ಮಟ್ಟದ ವರೆಗೆ ಅಭಿಯಾನ ನಡೆಯಲಿದೆ. ದೇಶವನ್ನು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸುವ ಸಂಕಲ್ಪವನ್ನು ಜನರೊಂದಿಗೆ ಹಂಚಿಕೊಳ್ಳುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದರು.ಸೆ. 17ರಂದು ಸಂಜೆ 6ರಿಂದ 7ರ ವರೆಗೆ ದೇಶದ ಪ್ರತಿ ಮನೆ ಹಾಗೂ ಮತಗಟ್ಟೆ ವ್ಯಾಪ್ತಿಯಲ್ಲಿ "ಆಶೀರ್ವಾದ ದೀಪ " ಬೆಳಗಿಸುವ ಕಾರ್ಯಕ್ರಮ ನಡೆಯಲಿದೆ. ಅಭಿಯಾನದ ಅಂಗವಾಗಿ ಶಾಲೆಗಳಲ್ಲಿ ಚಿತ್ರಕಲೆ ಹಾಗೂ ಭಾಷಣ ಸ್ಪರ್ಧೆ, ಐತಿಹಾಸಿಕ ಸ್ಥಳಗಳಲ್ಲಿ ಬೀದಿ ನಾಟಕ, ಅಂಗನವಾಡಿಗಳಲ್ಲಿ ವಿಶೇಷ ಕಾರ್ಯಕ್ರಮ, ಪಾದಯಾತ್ರೆ ಹಾಗೂ ಬೈಕ್ ರ್ಯಾಲಿಗಳನ್ನು ಆಯೋಜಿಸಲಾಗುವುದು. "ನಮೋ ಸೇವಾ ಗಾಥಾ " ಮೂಲಕ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಸೇವೆ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಜನರಿಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು.
"ಬದಲಾವಣೆಯ ಕಥೆ " ಹೆಸರಿನ ಡಿಜಿಟಲ್ ಅಭಿಯಾನದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಅಭಿವೃದ್ಧಿಯಿಂದ ಉಂಟಾದ ಬದಲಾವಣೆಯ 25 ಲಕ್ಷ ನೈಜ ಕಥೆಗಳನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ. ಪ್ರತಿ ಶಕ್ತಿ ಕೇಂದ್ರದಿಂದಲೂ ಡಿಜಿಟಲ್ ಕ್ರಾಂತಿ, ಗ್ರಾಮೀಣ ಸಂಪರ್ಕ, ಸೆಮಿಕಂಡಕ್ಟರ್ ಹಾಗೂ ಚಿಪ್ ಉತ್ಪಾದನೆ ಸೇರಿದಂತೆ ಅಭಿವೃದ್ಧಿಯ ವಿವಿಧ ಆಯಾಮಗಳ ಕುರಿತು ವಿಡಿಯೊಗಳನ್ನು ಸಿದ್ಧಪಡಿಸಲಾಗುವುದು. ಪ್ರತಿ ನಾಗರಿಕರೂ ಕನಿಷ್ಠ 25 ನಿಮಿಷವನ್ನು ಸೇವಾ ಕಾರ್ಯಕ್ಕೆ ಮೀಸಲಿಡುವಂತೆ ಪ್ರೇರೇಪಿಸುವ "ಸೇವಾ ಮೇರಾ ಯೋಗದಾನ " ಕಾರ್ಯಕ್ರಮವೂ ನಡೆಯಲಿದೆ ಎಂದರು.ಅ. 2ರಂದು 100 ಸ್ಥಳಗಳಲ್ಲಿ "ನಮೋ ಸೇವಾ ಗಾಥಾ " ಹಾಗೂ ಅ. 17ರಂದು ಸುಮಾರು 1.25 ಲಕ್ಷ ಜನಪ್ರತಿನಿಧಿಗಳ ಭಾಗವಹಿಸುವಿಕೆಯಲ್ಲಿ "ಜನಸೇವಕ ಮಹಾಕುಂಭ " ಆಯೋಜಿಸುವ ಮೂಲಕ ಅಭಿಯಾನಕ್ಕೆ ತೆರೆ ಬೀಳಲಿದೆ. "ಪ್ರಧಾನ ಸೇವಕ " ಎಂಬ ಪ್ರಧಾನಿ ಮೋದಿ ಅವರ ಆಶಯದಂತೆ ಜನರನ್ನು ಸೇವಾ ಕಾರ್ಯದಲ್ಲಿ ನೇರವಾಗಿ ತೊಡಗಿಸುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಶಾಸಕರಾದ ಮಹೇಶ ಟೆಂಗಿನಕಾಯಿ, ವಿಪ ಸದಸ್ಯ ಲಿಂಗರಾಜ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷರಾದ ತಿಪ್ಪಣ್ಣ ಮಜ್ಜಗಿ, ನಿಂಗಪ್ಪ ಸುತಗಟ್ಟಿ ಸೇರಿದಂತೆ ಹಲವರಿದ್ದರು.